ಅಗ್ನಿಪಥ್ ವಿರುದ್ಧ ಭಾರತ್ ಬಂದ್ ಕರೆ: ರೈಲ್ವೆ ಇಲಾಖೆ ಹೈ ಅಲರ್ಟ್
ನವದೆಹಲಿ ಜೂನ್ 20: ಅಗ್ನಿಪಥ್ ನೇಮಕಾತಿ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಸೋಮವಾರ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
Recommended Video
ರೈಲು ನಿಲ್ದಾಣಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್), ರೈಲ್ವೆ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಪ್ರತಿಭಟನೆ, ಬಂದ್ ವೇಳೆ ರೈಲು ಸೇವೆಗೆ ಅಡ್ಡಿ ಪಡಿಸುವ ಆತಂಕ ಇರುವ ಕಾರಣಕ್ಕೆ ಗಲಭೆ ಕೋರರನ್ನು ಎದುರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ರೈಲ್ವೆ ರಕ್ಷಣಾ ಪಡೆ ಹಿರಿಯ ಅಧಿಕಾರಿಗಳು ದೆಹಲಿ ಸೇರಿದಂತೆ ಪ್ರತಿಭಟನೆ ನಡೆಯುತ್ತಿರುವ ಉತ್ತರ ಭಾರತದ ಎಲ್ಲಾ ರಾಜ್ಯಗಳ ರೈಲು ನಿಲ್ದಾಣಗಳಿಗೆ ಸಂದೇಶ ರವಾನಿಸಿದ್ದಾರೆ.
ಯೋಜನೆ ವಿರುದ್ಧ ಗಲಭೆ ಕೋರರು ರೈಲ್ವೆ ಆಸ್ತಿ ಪಾಸ್ತಿಗೆ ಹಾನಿ ಉಂಟುಮಾಡಲು, ಹಿಂಸಾಚಾರ ಎಸಲು ಯತ್ನಿಸಿದರೆ ಅಂತವರ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಿ. ಘಟನೆ ವೇಳೆ ಸಿಗುವ ಮೊಬೈಲ್ ನಟ್ವರ್ಕ್, ವಿಡಿಯೋ, ಸಿಸಿ ಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಹಾರದ 20 ಜಿಲ್ಲೆಗಳಲ್ಲಿ ಇಂಟರ್ ನೆಟ್ ಬಂದ್: ಸೋಮವಾರ ಭಾರತ್ ಬಂದ್ಗೆ ಪ್ರತಿಭಟನಾಕರರು ಸೇರಿದಂತೆ ಕೆಲವು ಸಂಘಟನೆಗಳು ಕರೆ ನೀಡಿದ ಹಿನ್ನೆಲೆ ಮುಂಜಾಗ್ರತಾ ದೃಷ್ಟಿಯಿಂದ ಬಿಹಾರದ 20 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಪ್ರತಿಭಟನಾಕರರು ಏಕಕಾಲಕ್ಕೆ ಒಂದೆಡೆಯಿಂದ ಮತ್ತೊಂದೆಡೆ ಸಂಪರ್ಕ ಸಾಧಿಸಲು ಆಗದಂತೆ, ಗಲಭೆಕೋರರು ಯೋಜನೆ ಹುಸಿಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಂಪರ್ಕ ಸಾಧ್ಯವಾಗದಂತೆ ತಡೆಯಲು ಸರ್ಕಾರ ಇಂಟರ್ ನೆಟ್ ಸೇವೆ ಬಂದ್ಗೆ ಕ್ರಮ ಕೈಗೊಂಡಿದೆ.
ಇದರಲ್ಲಿ ಪಂಜಾಬ್ನ್ ಕೈಮೂರ್, ಭೋಜಪುರ್, ಔರಂಗಾಬಾದ್, ಬಕ್ಸಾರ್, ಚಂಪಾರಣ್, ಸಮಸ್ತಿಪುರ್, ವೈಶಾಲಿ, ಮುಜಾಫರ್ ಪುರ, ಖಗರಿಯಾ, ದರ್ಬಂಗಾ, ಜೆಹಾನಬಾದ್, ಪೂರ್ವ ಚಂಪಾರಣ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಅಂತರ್ಜಾಲ ಬಂದ ಆಗಿದೆ. ಜೊತೆಗೆ ಪಂಜಾಬ್ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
144ಸೆಕ್ಷನ್ ಜಾರಿ: ಪ್ರತಿಭಟನೆ ಕಾವು ಹೆಚ್ಚಾಗದಂತೆ ತಡೆಯಲು ಉತ್ತರ ಪ್ರದೇಶದ ನೋಯ್ಡಾದಲ್ಲಿ 144ಸೆಕ್ಷನ್ ಜಾರಿಗೊಳಿಸಲಾಗಿದೆ. ಹೀಗಾಗಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನ ಓಡಾದಂತೆ ನಿರ್ಬಂಧ ವಿಧಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಅಲ್ಲಿನ ಜನರಿಗೆ ಗೌತಮಬುದ್ಧ ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ನೋಯ್ಡಾ ನಗರ ಜೆವಾನ್ ಟೋಲ್ ಪ್ಲಾಜಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಒಟ್ಟು 225 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಮಾರ್ಗ ಬದಲಾವಣೆ; ಉತ್ತರ ಭಾರತದ ಭಾಗದಲ್ಲಿ ದಿನೇ ದಿನೆ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ರೈಲ್ವೆ ಇಲಾಖೆ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ನಡುವೆ ಸಂಪರ್ಕ ಸಾಧಿಸುವ ಏಳು ರೈಲು ಸೇವೆ ಸದ್ಯಕ್ಕೆ ರದ್ದುಗೊಳಿಸಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹತ್ತು ರೈಲುಗಳ ಸಂಪರ್ಕ, ಸಮಯದಲ್ಲಿ ಬದಲಾವಣೆ ತರಲಾಗಿದೆ.
ಬಂದ್ ಘೋಷಿಸಿದ ಹಿನ್ನೆಲೆಯಲ್ಲಿ ಜಾಖಂಡ್ ನಲ್ಲಿನ ಶಾಲೆಗಳನ್ನು ಬಂದ್ ಮಾಡಿಸಲಾಗಿದೆ. ಅಲ್ಲದೇ 9ಮತ್ತು 10ನೇ ತರಗತಿಗಳಿಗೆ ನಡೆಯಬೇಕಿದ್ದ ಪರೀಕ್ಷೆಗಳು ಸಹ ಬಂದ್ ಕರೆಯಿಂದಾಗಿ ಮುಂದೂಡಲ್ಪಟ್ಟಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.