ಅಗ್ನಿಪಥ್ ಪ್ರತಿಭಟನೆ: ಒಟ್ಟು 2 ಬಲಿ- ಸಿಕಂದರಾಬಾದ್ನಲ್ಲಿ ಪ್ರಕರಣ ದಾಖಲು
ಹೈದರಾಬಾದ್, ಜೂನ್ 18: ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ನಿನ್ನೆ ಶುಕ್ರವಾರ ಹಲವೆಡೆ ಪ್ರತಿಭಟನೆ ಮತ್ತು ಹಿಂಸಾಚಾರಗಳು ಭುಗಿಲೆದಿದ್ದವು. ಇಲ್ಲಿಯ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರತಿಭಟನಾಕಾರರ ಮೇಲೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ಅಪರಾಧ ದಂಡಸಂಹಿತೆ (ಐಪಿಸಿ) 143, 147, 324 ಸೇರಿದಂತೆ ಹತ್ತು ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ಹಾಕಲಾಗಿರುವುದು ತಿಳಿದುಬಂದಿದೆ.
ನಿನ್ನೆ ಶುಕ್ರವಾರದಂದು ಸಿಕೆಂದರಾಬಾದ್ ರೈಲ್ವೆ ಸ್ಟೇಷನ್ ಬಳಿ ಸುಮಾರು ಒಂದೂವರೆಯಿಂದ ಮೂರು ಸಾವಿರ ಮಂದಿ ಪ್ರತಿಭಟನೆ ನಡೆಸಿದ್ದರೆಂದು ಸಿಕಂದರಾಬಾದ್ ರೈಲ್ವೆ ಎಸ್ಪಿ ಅನುರಾಧಾ ಹೇಳುತ್ತಾರೆ. ಆ ವೇಳೆ ರೈಲಿಗೆ ಬೆಂಕಿ ಹಚ್ಚಿದ್ದು ಸೇರಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಲಾಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ಎಸಗಲಾಗಿತ್ತು. ಆದರೆ, ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದರು, ಎಷ್ಟೆಷ್ಟು ಆಸ್ತಿಪಾಸ್ತಿ ನಷ್ಟ ಆಗಿದೆ ಎಂಬುದು ಅಧಿಕಾರಿಗಳಿಗೆ ಇನ್ನೂ ನಿಖರವಾಗಿ ಗೊತ್ತಾಗಿಲ್ಲ.
ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪ್ರತಿಭಟನಾಕಾರರನ್ನು ಚದುರಿಸಲು ರೈಲ್ವೆ ಪೊಲೀಸ್ ಪಡೆಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದ 18 ವರ್ಷದ ದಾಮೋದರ್ ರಾಕೇಶ್ ಎಂಬಾತ ಮೃತಪಟ್ಟು, ಇನ್ನೂ ಹಲವರು ಗಾಯಗೊಂಡರು.
ಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 18ರಂದು ಬಿಹಾರ್ ಬಂದ್ಗೆ ಕರೆ
ಭಾರತದ ಮೂರು ಸೇನೆಗಳಿಗೆ ನೇಮಕಾತಿ ಮಾಡಲಾಗುವ ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ಉದ್ಯೋಗಾಕಾಂಕ್ಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಪಾವಧಿಯವರೆಗೆ ಸೇವೆ, ಗುತ್ತಿಗೆ ಆಧಾರಿತ ನೇಮಕಾತಿ ಇತ್ಯಾದಿ ಅಂಶಗಳು ಉದ್ಯೋಗಾಕಾಂಕ್ಷಿಗಳ ವಿರೋಧಕ್ಕೆ ಕಾರಣವಾಗಿದೆ. ಹೀಗಾಗಿ, ದೇಶಾದ್ಯಂತ ಹಲವೆಡೆ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ನಡೆದಿದೆ.
ತೆಲಂಗಾಣ, ಬಿಹಾರದಲ್ಲಿ ಸಾವು
ತೆಲಂಗಾಣವಲ್ಲದೇ ಬಿಹಾರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ತೆಲಂಗಾಣದಲ್ಲಿ ಒಬ್ಬ ಮೃತಪಟ್ಟಿದ್ದು ಸೇರಿ ಶುಕ್ರವಾರ ಇಬ್ಬರು ವ್ಯಕ್ತಿಗಳು ಅಗ್ನಿಪಥ್ ಪ್ರತಿಭಟನೆಗಳಿಗೆ ಬಲಿಯಾಗಿದ್ದಾರೆನ್ನಲಾಗಿದೆ. ಬಿಹಾರದ ಲಖಿಸರಾಯ್ ಎಂಬಲ್ಲಿ ಜನಸೇವಾ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು. ಅದರಲ್ಲಿದ್ದ 40 ವರ್ಷದ ಒಬ್ಬ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
12 ರೈಲುಗಳಿಗೆ ಹಾನಿ
ತೆಲಂಗಾಣದಲ್ಲಿ ಸಂಪೂರ್ಣ ಒಂದು ರೈಲನ್ನು ಪ್ರತಿಭಟನಾಕಾರರು ಸುಟ್ಟುಹಾಕಿದರು. ಅಲ್ಲದೇ ದೇಶದ ವಿವಿಧೆಡೆ 12 ರೈಲುಗಳಿಗೆ ಹಾನಿ ಮಾಡಲಾಗಿರುವುದು ತಿಳಿದುಬಂದಿದೆ. ಹಲವು ರೈಲ್ವೆ ನಿಲ್ದಾಣಗಳಿಗೂ ಹಾನಿ ಮಾಡಲಾಗಿದೆ. ಶುಕ್ರವಾರದ ಹಿಂಸಾಚಾರ ಘಟನೆಗಳಲ್ಲಿ ರೈಲ್ವೆ ಇಲಾಖೆಯ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಧಕ್ಕೆಯಾಗಿ ನಷ್ಟ ಆಗಿದೆ.
ಸಿಕಂದರಾಬಾದ್ನಲ್ಲಿ ಬೆಂಕಿ ಹಚ್ಚಿದ ರೈಲಿನಿಂದ ಬಚಾವ್ ಆಗಿದ್ದು ಹೇಗೆ 40 ಪ್ರಯಾಣಿಕರು!?
ಪ್ರಯಾಣಿಕರಿಗೆ ಶಾಕ್
ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಎಲ್ಲಾ 10 ರೈಲ್ವೆ ಪ್ಲಾಟ್ಫಾರ್ಮ್ಗಳಗೆ ನುಗ್ಗಿ ರೈಲುಗಳ ಮೇಲೆ ಕಲ್ಲು ತೂರಾಟದಲ್ಲಿ ತೊಡಗಿದರು. ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು, ಗೂಡಂಗಡಿಗಳನ್ನು ಧ್ವಂಸ ಮಾಡಿ ರೈಲ್ವೆ ಹಳಿಗಳ ಮೇಲೆ ಉದ್ರಿಕ್ತರು ಎಸೆದರು. ಪ್ರತಿಭಟನೆಯ ಅರಿವಿಲ್ಲದೆ ರೈಲ್ವೆ ನಿಲ್ದಾಣದಲ್ಲಿದ್ದ ಅಮಾಯಕ ಪ್ರಯಾಣಿಕರಿಗೆ ನಿನ್ನೆ ಆಘಾತದ ಪರಿಸ್ಥಿತಿ ಉದ್ಭವಿಸಿತ್ತು. ಹಲವು ಜನರು ತಮ್ಮ ಲಗೇಜುಗಳನ್ನು ಅಲ್ಲೇ ಬಿಟ್ಟು ನಿಲ್ದಾಣದಿಂದ ದೌಡಾಯಿಸಿ ಹೋದರು.
ಬಿಹಾರದಲ್ಲಿ ಹಿಂಸಾಚಾರ
ಬಿಹಾರದಲ್ಲೂ ಅಗ್ನಿಪಥ್ ವಿರುದ್ಧ ಪ್ರತಿಭಟನೆ ಶುಕ್ರವಾರ ಹಿಂಸಾಚಾರಕ್ಕೆ ತಿರುಗಿತ್ತು. ಲಖಿಸಾರಾಯ್, ಫುತುಹಾ, ಇಸ್ಲಾಂಪುರ್, ದಾನಪುರ್ ಮೊದಲಾದ ಸ್ಥಳಗಳ ರೈಲು ನಿಲ್ದಾಣಗಳಲ್ಲಿ ಹಲವು ರೈಲುಗಳು ಉದ್ರಿಕ್ತರ ಕೋಪಕ್ಕೆ ತುತ್ತಾದವು. ಅರಾ, ಬುಕ್ಸರ್, ಖಗಾರಿಯಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಹಲವು ರೈಲುಗಳಿಗೆ ಹಾನಿ ಮಾಡಿದ್ದರು.
ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ಬಿಹಾರದ ಡಿಸಿಎಂ ರೇಣುದೇವಿ ಅವರ ಮನೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಹಿಂಸಾಚಾರ ಹಿನ್ನೆಲೆಯಲ್ಲಿ ಶುಕ್ರವಾರ ಬಿಹಾರದ ೧೨ ಜಿಲ್ಲೆಗಳಲ್ಲಿ ಇಂಟರ್ನೆಟ್ ನಿರ್ಬಂಧಿಸಲಾಗಿತ್ತು.
ಉತ್ತರ ಪ್ರದೇಶದ ಹಲವು ಕಡೆ ಪ್ರತಿಭಟನಾಕಾರರ ಹಿಂಸಾಚಾರ ಕೃತ್ಯಗಳನ್ನು ಎಸಗಿದ್ದಾರೆ. ಅಲಿಗಡ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಕಾರೊಂದನ್ನು ಉದ್ರಿಕ್ತರು ಜಖಂಗೊಳಿಸಿದರು. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲೂ ಬಹಳಷ್ಟು ಹಿಂಸಾಚಾರಗಳು ನಡೆದಿವೆ.
(ಒನ್ಇಂಡಿಯಾ ಸುದ್ದಿ)