ರಾಷ್ಟ್ರಪತಿ ಪದಕ ಪಡೆದ ಯೋಧ ಉಗ್ರರ ಗುಂಡೇಟಿಗೆ ಬಲಿ
ನವದೆಹಲಿ, ಜ. 28: ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರಪತಿ ಪದಕ ಪಡೆದ ಯೋಧ ಉಗ್ರರೊಂದಿಗಿನ ಕಾದಾಟದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಶೌರ್ಯ ಮೆರೆದ ಯೋಧನಿಗೆ ರಾಷ್ಟ್ರಪತಿ ಪದಕ ನೀಡುವಾಗ ಕುಟುಂಬದಲ್ಲಿದ್ದ ಸಂತಸ ಒಂದೇ ದಿನಕ್ಕೆ ಮಾಯವಾಗಿದೆ.
66 ನೇ ಗಣರಾಜ್ಯೋತ್ಸವ ಸಂದರ್ಭ ಯುದ್ಧಸೇವಾ ಪದಕಕ್ಕೆ ಭಾಜನರಾಗಿದ್ದ 44 ರಾಷ್ಟ್ರೀಯ ರೈಫಲ್ಸ್ ತಂಡದ ಕಮಾಂಡಿಂಗ್ ಆಫೀಸರ್ ಕರ್ನಲ್ ಮುನೀಂದ್ರನಾಥ್ ರೈ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಹೋರಾಟದಲ್ಲಿ ಕರ್ನಲ್ ಮುನೀಂದ್ರನಾಥ್ ರೈ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.[ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಅಶೋಕ ಚಕ್ರ]
ಪುಲ್ವಾಮ ಜಿಲ್ಲೆಯ ಮಿಂಡೋರಾ ಗ್ರಾಮಕ್ಕೆ ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಪಡೆದ ಯೋಧರು ಕೂಡಲೇ ಕಾರ್ಯಾಚರಣೆಗೆ ಆರಂಭಿಸಿದ್ದಾರೆ. ಸ್ಥಳಿಯರೊಂದಿಗೆ ಮಾತುಕತೆ ನಡೆಸಲು ಉಗ್ರರು ಆಗಮಿಸುತ್ತಿದ್ದಾರೆ ಎಂಬುದು ದೃಢವಾಗಿತ್ತು. ಸ್ಥಳಕ್ಕೆ ಧಾವಿಸಿದ ಕರ್ನಲ್ ಮುನೀಂದ್ರನಾಥ್ ರೈ ಅವರ ನೇತೃತ್ವದ ತಂಡ ಕೂಡಲೇ ಕಾರ್ಯಾಚರಣೆ ಆರಂಭಿಸಿದೆ.[ಮತ್ತೆ ಬಾಲ ಬಿಚ್ಚಿದ ಉಗ್ರರು ಎನ್ ಕೌಂಟರ್ ಗೆ ಬಲಿ]
ಗುಂಡಿನ ಚಕಮಕಿ ಆರಂಭವಾಗಿದ್ದು ಕರ್ನಲ್ ಮುನೀಂದ್ರನಾಥ್ ರೈ ಉಗ್ರರ ಗುಂಡಿಗೆ ಎದೆಯೊಡ್ಡಿದ್ದಾರೆ. ಘರ್ಷಣೆಯಲ್ಲಿ ಆದಿಲ್ ಖಾನ್ ಮತ್ತು ಶಿರಾಜ್ದಾರ್ ಎಂಬ ಇಬ್ಬರು ಉಗ್ರರನ್ನು ಸೆನೆ ಸದೆಬಡಿಯಲಾಗಿದೆ.