ಮೋದಿ ದೇಶವನ್ನು ಉದ್ದೇಶಿಸಿ ಭಾಷಣದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ
ನವದೆಹಲಿ, ಮಾರ್ಚ್ 20: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ (ಮಾ 19) ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ, ದೇಶದ ಪ್ರಮುಖ ನಗರಗಳಲ್ಲಿ ದೈನಂದಿನ ಪದಾರ್ಥಗಳ ಬೆಲೆ ಗಗನಕ್ಕೇರಿದೆಯೇ?
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಪ್ರಕಾರ ಹೌದು. ಸಂಸತ್ತಿನ ಶೂನ್ಯ ವೇಳೆಯಲ್ಲಿ ಪ್ರಧಾನಿ ಭಾಷಣದ ಬಗ್ಗೆ ಮಾತನಾಡುತ್ತಿದ್ದ ಅಧೀರ್ ರಂಜನ್," ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೊನಾ ವಿರುದ್ದ ಸಮರ ಸಾರಿದೆ. ಕಾಂಗ್ರೆಸ್ ಕೂಡಾ ಸರಕಾರದ ಜೊತೆಗಿರಲಿದೆ" ಎಂದು ಹೇಳಿದ್ದಾರೆ.
300 ಜನರನ್ನು ಸಂಪರ್ಕಿಸಿದ್ದ ಕೊಡಗಿನ ಕೊರೊನಾ ಪೀಡಿತ
"ನಮ್ಮ ಪ್ರಧಾನಿಗಳು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣದ ನಂತರ ದೇಶದ ಪ್ರಮುಖ ನಗರಗಳಲ್ಲಿ ದೈನಂದಿನ ಪದಾರ್ಥಗಳ ಬೆಲೆ ಒಂದೇ ಸಮನೆ ಜಾಸ್ತಿಯಾಗಿದೆ" ಎಂದು ಅಧೀರ್ ರಂಜನ್ ಆರೋಪಿಸಿದ್ದಾರೆ.
"ಮೋದಿಯವರ ಭಾಷಣದ ನಂತರ ಮಾರುಕಟ್ಟೆಯಲ್ಲಿ ಪದಾರ್ಥಗಳ ದಾಸ್ತಾನು ಹೆಚ್ಚಾಗಿದೆ. ಕಾಳಸಂತೆಕೋರರು ಕೃತಕ ಅಭಾವ ಸೃಷ್ಟಿಸಲು ಮುಂದಾಗಿದ್ದಾರೆ. ಕೇಂದ್ರ ಸರಕಾರ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಾಗಿದೆ" ಎಂದು ಅಧೀರ್ ರಂಜನ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಧೀರ್ ರಂಜನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, "ನಾವೆಲ್ಲರೂ ಕೊರೊನಾ ವಿರುದ್ದ ಹೋರಾಡಬೇಕಿದೆ. ಅಗತ್ಯ ವಸ್ತುಗಳ ಬೆಲೆಏರಿಕೆ ಆಗಿರುವುದು ಸತ್ಯಕ್ಕೆ ದೂರವಾಗಿರುವ ವಿಚಾರ. ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ತಿರುಗೇಟು ನೀಡಿದ್ದಾರೆ.
ವಾಟ್ಸಾಪ್ನಲ್ಲಿ 'MyGov ಕೊರೊನಾ ಸಹಾಯಕೇಂದ್ರ' ಆರಂಭಿಸಿದ ಕೇಂದ್ರ ಸರ್ಕಾರ
ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಮೋದಿ, "ಇದೇ ಭಾನುವಾರ ಬೆಳಗ್ಗೆ ಏಳು ಗಂಟೆಯಿಂದ, ಸಂಜೆ ಐದು ಗಂಟೆಯವರೆಗೆ ಮನೆಯಿಂದ ಹೊರಗೆ ಬರದೇ, ಜನತಾ ಕರ್ಫ್ಯೂ ಹಮ್ಮಿಕೊಳ್ಳೋಣ" ಎಂದು ಕರೆ ನೀಡಿದ್ದರು.