ವೈಯಕ್ತಿಕ ಟೀಕೆಯ ಮಧ್ಯೆ ಪ್ರಧಾನಿ ಮೋದಿಯನ್ನು ಭೇಟಿಯಾದ ರಾಹುಲ್
ಕಾಂಗ್ರೆಸ್ ನಿಯೋಗದೊಂದಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರೈತರ ಸಾಲ ಮನ್ನಾ ಮಾಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ನವದೆಹಲಿ, ಡಿ 16: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ವೈಯಕ್ತಿಕ ಟೀಕೆ ಮಾಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಶುಕ್ರವಾರ (ಡಿ 16) ಪ್ರಧಾನಿಯವರನ್ನು ಭೇಟಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ತಾನು ನಡೆಸಿದ್ದ ' ಕಿಸಾನ್ ಯಾತ್ರೆ' ಯ ವೇಳೆ ರೈತರ ಸಮಸ್ಯೆಗಳನ್ನು ಅರಿತಿದ್ದೇನೆ, ಈ ಬಗ್ಗೆ ಪ್ರಧಾನಿಯವರಿಗೆ ವಿವರಿಸಲು ಮೋದಿಯವರನ್ನು ಭೇಟಿಯಾಗಿದ್ದೆವು ಎಂದು ರಾಹುಲ್, ಪಿಎಂ ಭೇಟಿಯ ನಂತರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ನನ್ನ ಎದುರು ನಿಂತು ಮಾತನಾಡೋಕೆ ಪ್ರಧಾನಿಗೆ ಭಯ ಎಂದು ಸಂಸತ್ತಿನ ಆವರಣದಲ್ಲಿ ಎರಡು ದಿನದ ಹಿಂದೆ ಹೇಳಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ನಿಯೋಗದೊಂದಿಗೆ ತೆರಳಿ ಪ್ರಧಾನಿಗೆ ರೈತರ ಸಾಲ ಮನ್ನಾ ಮಾಡುವಂತೆ ಮನವಿಪತ್ರ ಸಲ್ಲಿಸಿ ಬಂದಿದ್ದಾರೆ.
ನಮ್ಮ ನಿಯೋಗ ನೀಡಿದ ಮನವಿ ಪತ್ರವನ್ನು ಪ್ರಧಾನಿಯವರು ಸ್ವೀಕರಿಸಿದ್ದಾರೆ. ದೇಶದಲ್ಲಿ ರೈತರು ಸಂಕಷ್ಟದಲ್ಲಿರುವುದನ್ನು ಮೋದಿಯವರೂ ಒಪ್ಪಿಕೊಂಡಿದ್ದಾರೆ.
ಆದರೆ, ರೈತರ ಸಾಲ ಮನ್ನಾ ಕುರಿತಂತೆ ಮೋದಿಯವರು ಯಾವುದೇ ಖಚಿತ ಭರವಸೆ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೋಟು ನಿಷೇಧವನ್ನು ಉಲ್ಲೇಖಿಸುತ್ತಾ ಮೋದಿ ಮಹಾನ್ ಭ್ರಷ್ಟರು ಎಂದು ಹೇಳಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ನಿಯೋಗದೊಂದಿಗೆ ಪಾರ್ಲಿಮೆಂಟಿನ ಪ್ರಧಾನಿ ಕಚೇರಿಯಲ್ಲಿ ಮೋದಿಯವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ನಿಯೋಗದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ಆನಂದ ಶರ್ಮಾ, ಗುಲಾಂನಬಿ ಆಜಾದ್, ರಾಜ್ ಬಬ್ಬರ್ ಮುಂತಾದವರಿದ್ದರು.