2020ರಲ್ಲಾದ ಕಹಿ ಅನುಭವಗಳೇ ಊರು ಬಿಡುವಂತೆ ಮಾಡುತ್ತಿವೆ...
ನವದೆಹಲಿ, ಏಪ್ರಿಲ್ 20: ಇಡೀ ದೇಶ ಕೊರೊನಾ ಸೋಂಕಿನ ಹಿಡಿತದಲ್ಲಿದ್ದು, ಸೋಂಕನ್ನು ನಿಯಂತ್ರಣಕ್ಕೆ ತರಲು ಹಲವು ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಲಾಕ್ಡೌನ್ ಹಾಗೂ ಕರ್ಫ್ಯೂನಂಥ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಮಹಾರಾಷ್ಟ್ರ ನಂತರ ದೆಹಲಿಯಲ್ಲಿಯೂ ಕೊರೊನಾ ಸೋಂಕಿನ ಪ್ರಕರಣಗಳು ಅಧಿಕ ಮಟ್ಟದಲ್ಲಿ ದಾಖಲಾಗುತ್ತಿದ್ದು, ಸೋಮವಾರ ದೆಹಲಿಯಲ್ಲಿ ಆರು ದಿನಗಳ ಕಾಲ ಕರ್ಫ್ಯೂ ಘೋಷಿಸಲಾಗಿದೆ. ಹೀಗೆ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಮತ್ತೆ ಅತಂತ್ರ ಸ್ಥಿತಿ ತಲುಪಿರುವ ವಲಸೆ ಕಾರ್ಮಿಕರು, ತಮ್ಮ ಊರುಗಳತ್ತ ಹಿಂದಿರುಗಿದ್ದಾರೆ. ದೆಹಲಿಯ ಆನಂದ ವಿಹಾರ ಬಸ್ ಟರ್ಮಿನಲ್ ಒಳಗೊಂಡಂತೆ ಹಲವು ಬಸ್ ನಿಲ್ದಾಣಗಳಲ್ಲಿ ಸೋಮವಾರ ಸಾವಿರಾರು ಜನರು ಊರಿಗೆ ವಾಪಸ್ಸಾಗಲು ಜಮಾಯಿಸಿದ್ದರು. ಮುಂದೆ ಓದಿ...
Breaking: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್: ಕೇಜ್ರಿವಾಲ್
ಬಸ್ ನಿಲ್ದಾಣಗಳಲ್ಲಿ ಜನವೋ ಜನ
ದೆಹಲಿಯಲ್ಲಿ ಕೊರೊನಾ ಹರಡುವಿಕೆ ತಡೆಗೆ ಆರು ದಿನಗಳ ಕಾಲ ಲಾಕ್ಡೌನ್ ಘೋಷಿಸುತ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ಆನಂದ್ ವಿಹಾರ ಬಸ್ ನಿಲ್ದಾಣದಲ್ಲಿ ಜನರು ಜಮಾಯಿಸಿದ್ದರು. ಬಸ್ ನಿಲ್ದಾಣದಲ್ಲಿ ಎಲ್ಲೆಲ್ಲೂ ಜನರು ತುಂಬಿ ತುಳುಕುತ್ತಿದ್ದರು. ಸುಮಾರು ಎಂಟು ಸಾವಿರ ಮಂದಿ ಊರುಗಳಿಗೆ ತೆರಳಲು ನಿಂತಿದ್ದು ಕಂಡುಬಂದಿತು. 2020ರಲ್ಲಿ ಆದ ಕಹಿ ಅನುಭವಗಳೇ ಅವರನ್ನು ಊರು ಬಿಡುವಂತೆ ಮಾಡುತ್ತಿವೆ ಎಂದು ಜವಹರಲಾಲ್ ನೆಹರೂ ಸ್ಕೂಲ್ ಆಫ್ ಸೋಷಿಯಲ್ ಸೈನ್ಸನಸ್ ಪ್ರೊಫೆಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಯಾರೂ ದೆಹಲಿ ಬಿಟ್ಟು ಹೋಗಬೇಡಿ"
"ಈ ನಿರ್ಧಾರ ಎಎಪಿಗೆ ಅಷ್ಟು ಸುಲಭವಾಗಿರಲಿಲ್ಲ. ಲಾಕ್ಡೌನ್ ಬಡ ಜನರು ಹಾಗೂ ದಿನಗೂಲಿ ಕಾರ್ಮಿಕರ ಮೇಲೆ ಎಷ್ಟು ಪರಿಣಾಮಕಾರಿ ಎಂಬುದು ಅರ್ಥವಾಗುತ್ತದೆ" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದೇ ಸಂದರ್ಭ, "ಯಾರೂ ದೆಹಲಿ ಬಿಟ್ಟು ಹೋಗಬೇಡಿ. ನಿಮ್ಮ ಯೋಗಕ್ಷೇಮ ನಾವು ನೋಡಿಕೊಳ್ಳುತ್ತೇವೆ" ಎಂದು ಕೂಡ ಕೇಳಿಕೊಂಡಿದ್ದಾರೆ.
ಆರು ದಿನಗಳವರೆಗೆ ಲಾಕ್ಡೌನ್
ಸದ್ಯಕ್ಕೆ ದೆಹಲಿಯಲ್ಲಿ ಆರು ದಿನಗಳವರೆಗೆ ಲಾಕ್ಡೌನ್ ಹೇರಲಾಗಿದೆ. ಆದರೆ ಲಾಕ್ಡೌನ್ ಬಗ್ಗೆಯೂ ಅತಂತ್ರ ಸ್ಥಿತಿಯಿದೆ. ಎಷ್ಟು ದಿನಗಳ ಕಾಲ ಈ ಲಾಕ್ಡೌನ್ ಮುಂದುವರೆಯುತ್ತದೆ ಎಂಬುದು ತಿಳಿದಿಲ್ಲ. ಹೀಗಾಗಿ ನಮ್ಮ ನಮ್ಮ ಊರುಗಳನ್ನು ಸೇರಿಕೊಳ್ಳುವುದು ಒಳ್ಳೆಯದು ಎಂದು ವಲಸೆ ಕಾರ್ಮಿಕ ಮೊಹಮದ್ ರಶೀದ್ ಹೇಳಿದ್ದಾರೆ.
ದಿನೇ ದಿನೇ ಸೋಂಕಿನ ಪ್ರಮಾಣದಲ್ಲಿ ಏರಿಕೆ
ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಸೋಮವಾರ 23,686 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 21,500 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ 24 ಗಂಟೆಯಲ್ಲಿ 240 ಮಂದಿ ಸಾವನ್ನಪ್ಪಿದ್ದಾರೆ.