ನಿರ್ಲಕ್ಷ್ಯದಿಂದ ಸಿಂಧಿಯಾ, ಜಿತಿನ್ ಕಳೆದುಕೊಂಡ ಕಾಂಗ್ರೆಸ್ಗೆ ಪೈಲಟ್ ಚಿಂತೆ
ನವದೆಹಲಿ, ಜೂನ್ 09: ಗಾಂಧಿ ಕುಟುಂಬದ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರು ಪಕ್ಷದಿಂದ ದೂರವಾಗುತ್ತಿರುವುದು ಕಾಂಗ್ರೆಸ್ನಲ್ಲಿ ಆತಂಕ ಮೂಡಿಸಿದೆ.
ರಾಹುಲ್ ಗಾಂಧಿಯ ಆಪ್ತ ಎನಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಈಗಾಗಲೇ ಬಿಜೆಪಿ ಸೇರಿದ್ದಾರೆ, ರಾಜಸ್ಥಾನದ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ.
ರಾಹುಲ್ ಗಾಂಧಿ ಪರಮಾಪ್ತ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ
ಉತ್ತರ ಪ್ರದೇಶ ಬ್ರಾಹ್ಮಣ ಸಮುದಾಯದಲ್ಲಿ ಪ್ರಭಾವಿ ಎನಿಸಿಕೊಂಡಿದ್ದ ಜಿತಿನ್ ಪ್ರಸಾದ ಈಗಾಗಲೇ ಬಿಜೆಪಿ ಸೇರಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಮೂಡಿಸಿದ್ದು, ರಾಹುಲ್ ಗಾಂಧಿ ನಾಯಕತ್ವದ ಬಗೆಗೂ ಚರ್ಚೆ ಹುಟ್ಟಲು ಕಾರಣವಾಗಿದೆ. ಈ ಮೂವರೂ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಅವಧಿಯಲ್ಲೇ ಜಿತಿನ್ ಪ್ರಸಾದ ಬಿಜೆಪಿ ಸೇರಿಸಲು ಮುಂದಾಗಿದ್ದರು ಆದರೆ ಪ್ರಿಯಾಂಕಾ ಗಾಂಧಿ ವಾದ್ರಾ ಮಧ್ಯಪ್ರವೇಶದಿಂದ ಕಾಂಗ್ರೆಸ್ನಲ್ಲೇ ಉಳಿದಿದ್ದರು.
ಈ ಸಂದರ್ಭದಲ್ಲಿ ಜಿತಿನ್ ಪ್ರಸಾದಗೆ ಕೆಲವು ಭರವಸೆ ನೀಡಲಾಗಿತ್ತು ಎನ್ನಲಾಗಿದೆ, ಆದರೆ ಒಂದು ವರ್ಷದ ಬಳಿಕ ಇದೇ ಅನಿಶ್ಚಿತತೆ ಮುಂದುವರೆದಿರುವ ಬೆನ್ನಲ್ಲೇ ಅಂತಿಮವಾಗಿ ಬಿಜೆಪಿ ಸೇರಿದ್ದಾರೆ.
ಇದು ಕಾಂಗ್ರೆಸ್ನ ಮಿಷನ್ ಯುಪಿಗೆ ದೊಡ್ಡ ಪೆಟ್ಟಾಗಿದೆ. ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ರಜಪೂತರ ಬೆನ್ನಿಗೆ ನಿಂತಿದೆ. ಬ್ರಾಹ್ಮಣ ಸಮುದಾಯವನ್ನು ಅಲಕ್ಷಿಸುತ್ತಿದೆ ಎನ್ನುವ ಆರೋಪವನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಬ್ರಾಹ್ಮಣ ಸಮುದಾಯದ ಮತವನ್ನು ಕೇಂದ್ರೀಕರಿಸಿತ್ತು.
ಆದರೆ ಈಗ ಜಿತಿನ್ ಪ್ರಸಾದ ಬಿಜೆಪಿ ಸೇರಿರುವುರಿಂದ ಕಾಂಗ್ರೆಸ್ನ ಈ ತಂತ್ರಗಾರಿಕೆಗೆ ಅಡ್ಡಿಯಾದಂತಾಗಿದೆ. ಅಂದಹಾಗೆ ಜಿತಿನ್ ಪ್ರಸಾದ್ ರಾಜ್ಯದಲ್ಲಿ ಪ್ರತ್ಯೇಕ ಬ್ರಾಹ್ಮಣ ಸಂಘಟನೆ ಮೂಲಕ ಗಮನ ಸೆಳೆದಿದ್ದರು. ಇನ್ನು ಎಂಟು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈ ಹಂತದಲ್ಲಿ ಪ್ರಮುಖ ಬ್ರಾಹ್ಮಣ ನಾಯಕರೊಬ್ಬರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಸಹಕಾರಿಯಾಗಿದೆ ಎನ್ನುವ ಮಾತು ಕೇಳಿಬಂದಿದೆ.
ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದಲೂ ಕೆಲ ಬ್ರಾಹ್ಮಣ ನಾಯಕರನ್ನು ಬಿಜೆಪಿಗೆ ಸೆಳೆಯುವ ತಂತ್ರ ನಡೆಯುತ್ತಿದೆ ಎನ್ನಲಾಗಿದೆ.
ಪೈಲಟ್ಗೆ ಕೊಟ್ಟ ಮಾತು ಮರೆತ ಕಾಂಗ್ರೆಸ್: ಕಳೆದ ವರ್ಷ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ ಬಂಡಾಯ ಎದ್ದಿದ್ದರು. ಇನ್ನೇನು ಸಚಿನ್ ಪೈಲಟ್ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಶೋಕ್ ಗೆಹ್ಲೋಟ್ ತಂತ್ರಗಾರಿಕೆಯಿಂದ ಅಗತ್ಯ ಶಾಸಕರ ಬೆಂಬಲ ಪಡೆಯಲು ಪೈಲೆಟ್ ವಿಫಲರಾಗಿದ್ದರು.
ಈ ಹಂತದಲ್ಲಿ ಪೈಲಟ್ರನ್ನು ಭೇಟಿಯಾಗಿದ್ದ ರಾಹುಲ್ ಹಾಗೂ ಪ್ರಿಯಾಂಕಾ ರಾಜಸ್ಥಾನ ಸರ್ಕಾರ ಹಾಗೂ ಪಕ್ಷದಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ವರ್ಷದ ಬಳಿಕವೂ ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಆಂತರಿಕ ಸಮಸ್ಯೆ ಹಾಗೆಯೇ ಮುಂದುವರೆದಿದೆ.
ಪೈಲಟ್ ಮುಂದಿಟ್ಟಿದ್ದ ಬೇಡಿಕೆ ಈಡೇರಿಸಿಲ್ಲ, ಈ ಬಗ್ಗೆ ಮಾತನಾಡಿರುವ ಪೈಲಟ್ 'ಸರ್ಕಾರ ಹಾಗೂ ಪಕ್ಷದಲ್ಲಿ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಹಾಗೆ ಉಳಿದಿದೆ' ಅಲ್ಲದೇ, ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಅಂತಿಮ ಎಚ್ಚರಿಕೆಯನ್ನೂ ಪರೋಕ್ಷವಾಗಿ ನೀಡಿದ್ದಾರೆ.
ಹೊಸ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಮಣೆ ಹಾಕುವುದರಲ್ಲಿ ಬಿಜೆಪಿ ಈಗ ಅತ್ಯುತ್ಸಾಹ ತೋರುತ್ತಿದೆ. ಆರ್ಎಸ್ಎಸ್ ಮೂಲದವರಿಗೆ ಮಾತ್ರ ಮುಖ್ಯಮಂತ್ರಿ ಗಾದಿ ಎನ್ನುವ ಅಲಿಖಿತ ನಿಯಮದಿಂದಲೂ ಪಕ್ಷ ಹೊರಬಂದಿದೆ.
ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶಾರ್ಮಾ ಅವರನ್ನು ಮುಖ್ಯಮಂತ್ರಿ ಮಾಡಿರುವುದೇ ಇದಕ್ಕೆ ಉದಾಹರಣೆ., ಮಧ್ಯಪ್ರದೇಶದಲ್ಲಿ ಸಿಂಧಿಯಾ, ಉತ್ತರ ಪ್ರದೇಶದಲ್ಲಿ ಜಿತಿನ್ ಪ್ರಸಾದ, ಅಸ್ಸಾಂನದಲ್ಲಿ ಹಿಮಂತ ಬಿಸ್ವಾಶರ್ಮಾ ಅವರಿಗೆ ಸಂಬಂಧಿಸಿದ ತಪ್ಪುಗಳನ್ನು ರಾಜಸ್ಥಾನದಲ್ಲೂ ಮಾಡಿದರೆ ಸಚಿನ್ ಪೈಲಟ್ ಪಕ್ಷ ಬಿಡುವುದರಲ್ಲಿ ಯಾವುದೇ ಸಂಶಯವಿಲ್ಲ.