ಸಾವಿನ ದವಡೆಯಲ್ಲಿರುವ ಪತಿಯಿಂದ ಮಗುವನ್ನು ಪಡೆಯುವ ಪತ್ನಿಯ ಆಸೆಗೆ ಕೋರ್ಟ್ ಸಮ್ಮತಿ!
ನವದೆಹಲಿ, ಜುಲೈ 22: ಗುಜರಾತ್ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಕೊರೊನಾವೈರಸ್ ಸೋಂಕಿನ ನಂತರದಲ್ಲಿ ಬಹು-ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯ ವೀರ್ಯವನ್ನು ವಡೋದರದ ಖಾಸಗಿ ಆಸ್ಪತ್ರೆಯೊಂದು ಸಂಗ್ರಹಿಸಿದೆ.
ಕೊವಿಡ್-19 ಸೋಂಕಿನ ನಂತರದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಪತಿಯ ವೀರ್ಯವನ್ನು ಬಳಸಿಕೊಂಡು ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಪತ್ನಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಪತ್ನಿಯ ಮನವಿಗೆ ಒಪ್ಪಿಗೆ ಸೂಚಿಸಿದೆ.
ಕೊವಿಡ್-19 ರೋಗಿಗಳ ಗುದನಾಳದಲ್ಲಿ ರಕ್ತಸ್ರಾವಕ್ಕೆ ಸೈಟೊಮೆಗಾಲೊವೈರಸ್ ಕಾರಣ?
ಕಳೆದ ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾದ ದಂಪತಿಗೆ ಕೊರೊನಾವೈರಸ್ ಆಘಾತ ನೀಡಿತ್ತು. 32 ವರ್ಷದ ಪತಿ ಮೇ 10ರಂದು ಕೊವಿಡ್-19 ಸೋಂಕಿನಿಂದ ತೀವ್ರವಾಗಿ ಬಳಲುತ್ತಿದ್ದು, ಉಸಿರಾಟ ಸಮಸ್ಯೆ ಎದುರಿಸುತ್ತಿರುವ ಆತನನ್ನು ಇಸಿಎಂಓ(Extracorporeal Membrane Oxygenation) ವ್ಯವಸ್ಥೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪತಿಯ ಜೀವಕ್ಕೆ 24 ಗಂಟೆಗಳ ಗಡುವು ನೀಡಿದ ವೈದ್ಯರು
ಕೊರೊನಾವೈರಸ್ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಪತಿಯ ಜೀವಕ್ಕೆ ಸೋಮವಾರ ವಡೋದರಾದ ಸ್ಟೆರ್ಲಿಂಗ್ ಆಸ್ಪತ್ರೆಯ ವೈದ್ಯರು ಹೆಚ್ಚು ಅಂದರೆ 24 ಗಂಟೆಗಳ ಗಡುವು ನೀಡಿದ್ದರು. ಈ ಹಿನ್ನೆಲೆ ಪತ್ನಿ ಹಾಗೂ ಅವರ ಪೋಷಕರು ತಮ್ಮ ವಕೀಲ ನಿಲಯ್ ಪಟೇಲ್ ಮೂಲಕ ಮಂಗಳವಾರವೇ ಉಚ್ಛ ನ್ಯಾಯಾಲಯಕ್ಕೆ ತುರ್ತು ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಪ್ರಕಾರ, ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆ ರೋಗಿಯಿಂದಲೇ ಒಪ್ಪಿಗೆ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ವ್ಯಕ್ತಿಯ ವೀರ್ಯವನ್ನು ಸಂಗ್ರಹಿಸಿ ಸಂರಕ್ಷಿಸಲು ನ್ಯಾಯಾಲಯದ ಆದೇಶದ ಅಗತ್ಯವಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಕುಟುಂಬಕ್ಕೆ ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರ ಮೌಖಿಕ ನಿರಾಕರಣೆಯಿಂದ ರೋಗಿಯ ಪತ್ನಿಯ ಹಕ್ಕುಗಳ ಉಲ್ಲಂಘನೆ ಆಗಲಿದೆ ಎಂದು ಪಟೇಲ್ ವಾದಿಸಿದ್ದರು.
ಗುಜರಾತ್ ಹೈಕೋರ್ಟ್ ಸೂಚನೆಯಲ್ಲಿ ಇರುವುದೇನು?
ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ವ್ಯಕ್ತಿಯಿಂದ ಸಮ್ಮತಿಯನ್ನು ಪಡೆದುಕೊಳ್ಳುವುದು ಬಹುಪಾಲು ಅಸಾಧ್ಯವಾಗುತ್ತದೆ. ಇಂಥ "ಅಸಾಧಾರಣ ಸನ್ನಿವೇಶ"ದಲ್ಲಿ ನ್ಯಾಯಾಲಯವು ಆಸ್ಪತ್ರೆಯ ನಿರ್ದೇಶಕರಿಗೆ "ರೋಗಿಯ ದೇಹದಿಂದ ಮಾದರಿಗಳನ್ನು ಸಂಗ್ರಹಿಸಲು ಐವಿಎಫ್ / ಎಆರ್ಟಿ ಕಾರ್ಯವಿಧಾನವನ್ನು ನಡೆಸುವಂತೆ ನಿರ್ದೇಶಿಸಿತು. ಹೀಗೆ ಪಡೆದುಕೊಂಡ ಮಾದರಿಯನ್ನು ಸೂಕ್ತ ಸ್ಥಳದಲ್ಲಿ ಸಂಗ್ರಹಿಸುವಂತೆ ಕೋರ್ಟ್ ಸೂಚಿಸಿದೆ.
ಜುಲೈ 23ರಂದು ಹೈಕೋರ್ಟ್ ವಿಚಾರಣೆ ಮುಂದುವರಿಕೆ
ಅಸಾಧಾರಣ ಮತ್ತು ತುರ್ತು ಸಂದರ್ಭವನ್ನು ಗಮನದಲ್ಲಿ ಇಟ್ಟುಕೊಂಡು ಮಧ್ಯಂತರ ಪರಿಹಾರವನ್ನು ನೀಡಲಾಗಿದೆ. ಅ ಅರ್ಜಿಯ ಮುಂದುವರಿದ ವಿಚಾರಣೆಯನ್ನು ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ. ಜುಲೈ 23ರ ಶುಕ್ರವಾರ ಅರ್ಜಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಪತಿಯ ಆರೋಗ್ಯ ಸ್ಥಿತಿಯನ್ನು ಕಂಡ ಕುಟುಂಬವು ತೀವ್ರ ಆಘಾತಕ್ಕೆ ಒಳಗಾಗಿದೆ. ಸದ್ಯಕ್ಕೆ ಅವರು ವೀರ್ಯವನ್ನು ಸಂರಕ್ಷಿಸಲು ಬಯಸಿದ್ದು, ಜುಲೈ 23ರಂದು ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿದ ನಂತರ ಅವರ ಪತ್ನಿಯು ಮಗುವನ್ನು ಹೊಂದುವ ಅವಕಾಶವಿದೆ. ಈ ದಂಪತಿ ಮದುವೆಯಾಗಿ ಎಂಟು ತಿಂಗಳಾಗಿದೆ. ಪತಿಗೆ ಕೊವಿಡ್-19 ಸೋಂಕು ತಗುಲಿದ್ದು, ನ್ಯುಮೋನಿಯಾ ಮತ್ತು ಬಹು-ಅಂಗಗಳ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಪ್ರಸ್ತುತ ಆಸ್ಪತ್ರೆಯು ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದು, ವೀರ್ಯವನ್ನು ಸಂರಕ್ಷಿಸಿದೆ "ಎಂದು ವಕೀಲ ಪಟೇಲ್ ತಿಳಿಸಿದ್ದಾರೆ.
ಸ್ಟೆರ್ಲಿಂಗ್ ಆಸ್ಪತ್ರೆ ಮುಖ್ಯಸ್ಥರು ಹೇಳುವುದೇನು?
ಬುಧವಾರ ಸ್ಟರ್ಲಿಂಗ್ ಆಸ್ಪತ್ರೆಯ ನಿರ್ದೇಶಕ ಅನಿಲ್ ನಂಬಿಯಾರ್, ಮುಖ್ಯ ವೈದ್ಯಾಧಿಕಾರಿ ಡಾ.ಜೋತಿ ಪಟಂಕರ್ ಮತ್ತು ವೈದ್ಯಕೀಯ ಆಡಳಿತಾಧಿಕಾರಿ ಡಾ.ಮಯೂರ್ ದೋಡಿಯಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ರೋಗಿಯ ವೀರ್ಯವನ್ನು ಸಂಗ್ರಹಿಸಿ ನಗರದ ಲ್ಯಾಬ್ನಲ್ಲಿ ಸಂರಕ್ಷಿಸಿದೆ ಎಂದು ಹೇಳಿದರು. "ಬಹು-ಅಂಗಾಂಗ ವೈಫಲ್ಯದ ಸ್ಥಿತಿಯಿಂದ ರೋಗಿ ಚೇತರಿಸಿಕೊಳ್ಳುವುದೇ ವಿರಳ ಎಂದು ಕುಟುಂಬಕ್ಕೆ ತಿಳಿಸಿದೆವು. ಇಂಥ ಸಂದರ್ಭದಲ್ಲಿ ವ್ಯಕ್ತಿಯ ಅನುಮತಿ ಇಲ್ಲದೇ ಆತನ ವೀರ್ಯವನ್ನು ಹೊರ ತೆಗೆಯುವ ಅಧಿಕಾರವನ್ನು ಆಸ್ಪತ್ರೆ ಹೊಂದಿಲ್ಲ. ಈ ಸಂಬಂಧ ಹೈಕೋರ್ಟ್ನಿಂದ ನಿರ್ದೇಶನ ಬಂದ ಕ್ಷಣ ವೀರ್ಯವನ್ನು ಸಂಗ್ರಹಿಸುವ ಪ್ರಕ್ರಿಯೆ ನಡೆಸಲಾಯಿತು. ಭವಿಷ್ಯದಲ್ಲಿ ಕುಟುಂಬಕ್ಕೆ ಐವಿಎಫ್ ಚಿಕಿತ್ಸೆಯನ್ನು ಪಡೆಯಲು ವೀರ್ಯವನ್ನು ಸಂರಕ್ಷಿಸಲಾಗಿದೆ," ಎಂದು ತಿಳಿಸಿದ್ದಾರೆ.
Recommended Video