ಬಾಲಾಕೋಟ್ ದಾಳಿ ನಂತರ ಅಫ್ಘಾನಿಸ್ತಾನಕ್ಕೆ ಶಿಫ್ಟ್ ಆದ ಜೈಷೆ ಕ್ಯಾಂಪ್
ನವದೆಹಲಿ, ಜುಲೈ 8: ಭಾರತ ವಾಯು ಸೇನೆಯಿಂದ ಬಾಲಾಕೋಟ್ ನಲ್ಲಿ ಜೈಷ್ ಇ ಮೊಹ್ಮದ್ ನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಉಗ್ರರ ಮುಖ್ಯ ತರಬೇತಿ ಶಿಬಿರಗಳನ್ನು ಸ್ಥಳಾಂತರಿಸಲಾಗಿದೆ. ಗುಪ್ತಚರ ಇಲಾಖೆ ಮೂಲಗಳ ಪ್ರಕಾರ, ಜೈಷೆ ತರಬೇತಿ ಶಿಬಿರಗಳನ್ನು ಅಫ್ಘಾನಿಸ್ತಾನಕ್ಕೆ ಸ್ಥಳಾಂತರ ಮಾಡಲಾಗಿದೆ.
ಇದರಿಂದ ಹೊಸ ಚಿಂತೆ ಶುರುವಾಗಿದೆ. ಅಫ್ಘಾನಿಸ್ತಾನಕ್ಕೆ ತರಬೇತಿ ಶಿಬಿರಗಳು ಸ್ಥಳಾಂತರ ಆದ ಮೇಲೆ, ಭಾರತಕ್ಕೆ ಸಂಬಂಧಿಸಿದ ಅಲ್ಲಿನ ಯೋಜನೆ, ಸಂಸ್ಥೆ, ಕಟ್ಟಡಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಗುಪ್ತಚರ ಇಲಾಖೆಯು ತಿಳಿಸಿದೆ.
ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ ಅಫ್ಘಾನಿಸ್ತಾನ
ಅಂದ ಹಾಗೆ ಈ ಬೆಳವಣಿಗೆ ನಿರೀಕ್ಷಿತವಾಗಿತ್ತು ಮತ್ತು ಈ ಹಿಂದೆ ಕೂಡ ಜೈಷೆಯಿಂದ ಕಂದಹಾರ್ ಹಾಗೂ ನಗರ್ ಹಾರ್ ನಲ್ಲಿ ತಾಲಿಬಾನ್ ಜತೆಗೆ ತರಬೇತಿ ನಡೆದಿತ್ತು. ಈ ಹಿಂದೆ ಕೂಡ ಜೈಷೆಯು ತಾಲಿಬಾನ್ ಗೆ ನೆರವು ನೀಡಿತ್ತು. ಅದರ ಅಫ್ಘಾನಿಸ್ತಾನ ಚಟುವಟಿಕೆ ಆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು.
ಆದರೆ, ಈ ಸಲ ಭಾರತದಲ್ಲಿ ಕಾರ್ಯ ನಿರ್ವಹಿಸುವ ಜೈಷ್ ಇ ಮೊಹ್ಮದ್ ವಿಭಾಗಕ್ಕೂ ಅಪ್ಘಾನಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಫ್ಘಾನಿಸ್ತಾನದಲ್ಲಿನ ಭಾರತಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಇನ್ನು ಎಫ್ ಎಟಿಎಫ್ ನಿಂದ ಪಾಕಿಸ್ತಾನದ ಮೇಲೆ ಉಗ್ರ ನಿಗ್ರಹಕ್ಕೆ ಒತ್ತಡ ಹೆಚ್ಚಾಗಿದ್ದು, ಪಾಕ್ ನಿಂದ ಅಫ್ಘಾನಿಸ್ತಾನಕ್ಕೆ ಜೆಇಎಂ ಉಗ್ರ ನೆಲೆಗಳ ಸ್ಥಳಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.
ಬಾಲಾಕೋಟ್ ನಲ್ಲಿ ಜೆಇಎಂ ಉಗ್ರ ನೆಲೆ ಮೇಲೆ ಭಾರತದ ದಾಳಿ ನಂತರ ಹಲವು ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರು ಬೇರೆಡೆ ಸ್ಥಳಾಂತರ ಆಗಿದ್ದಾರೆ. ಹಲವರು ಕರಾಚಿ, ಪೇಶಾವರಕ್ಕೆ ತೆರಳಿದ್ದರೆ, ಕೆಲವರು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದಾರೆ.