ಲಸಿಕೆ ಪಡೆದ 80ರ ವ್ಯಕ್ತಿ ಬೈಕ್ನಲ್ಲಿ 68 ಕಿ.ಮೀ ಸಂಚರಿಸಿದ ಕಥೆ
ರಾಂಚಿ, ಮಾರ್ಚ್.01: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯ ಎರಡನೇ ಹಂತದ ಅಭಿಯಾನ ಮಾರ್ಚ್.01ರ ಸೋಮವಾರದಿಂದ ಆರಂಭವಾಗಿದೆ. 45 ವರ್ಷದ ಮೇಲ್ಪಟ್ಟವರಿಗೂ ಕೊವಿಡ್-19 ಲಸಿಕೆ ವಿತರಿಸಲಾಗುತ್ತಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕ್ ಸಂಸ್ಥೆ ಸಂಶೋಧಿಸಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆ ಆಗುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ದೇಶಾದ್ಯಂತ ವಿತರಣೆ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಕೊವಿಡ್-19 ಲಸಿಕೆ ಮತ್ತು ಅದರ ಸುರಕ್ಷತೆ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಹಿನ್ನೆಲೆ ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭಾರತ್ ಬಯೋಟೆಕ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆ ಪಡೆದುಕೊಂಡರು.
ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?
ಕಳೆದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಅದಾಗಿ ಫೆಬ್ರವರಿ.2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯ ಅಭಿಯಾನವನ್ನು ಆರಂಭಿಸಲಾಗುತ್ತದೆ.
ಎರಡನೇ ಹಂತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಮೊದಲ ದಿನವೇ ಕೊವಿಡ್-19 ಲಸಿಕೆ ಪಡೆದ 80 ವರ್ಷದ ರಾಮ್ ಕಿಶೋರ್ ಸಹು ಎಂಬುವವರು ಬೈಕ್ ನಲ್ಲಿ 68 ಕಿಲೋ ಮೀಟರ್ ಸಂಚರಿಸಿದ್ದಾರೆ. ಜಾರ್ಖಂಡ್ ನ ರಾಂಚಿಯಲ್ಲಿ ಲಸಿಕೆ ಹಾಕಿಸಿಕೊಂಡ ಅವರು, ತಮ್ಮ ಸ್ವಗ್ರಾಮ ಸರ್ಜಮ್ದಿಹಗೆ ಸುರಕ್ಷಿತವಾಗಿ ತೆರಳಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
"ಲಸಿಕೆ ಪಡೆಯಲು ಯಾವುದೇ ಆತಂಕ ಬೇಡ"
ಕೊರೊನಾವೈರಸ್ ಲಸಿಕೆ ಬಗ್ಗೆ ಯಾವುದೇ ಆತಂಕ ಬೇಕಿಲ್ಲ. ಯಾವುದೇ ಭಯವಿಲ್ಲದೇ ಜನರು ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದು ನಿವೃತ್ತ ಶಾಲಾ ಶಿಕ್ಷಕ ರಾಮ್ ಕಿಶೋರ್ ಸಹು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಕೊರೊನಾವೈರಸ್ ಲಸಿಕೆ ಕೇಂದ್ರ ಇಲ್ಲದ ಕಾರಣಕ್ಕೆ ರಾಂಚಿಯ ಸಾದರ್ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡಿರುವುದಾಗಿ ಹೇಳಿದ್ದಾರೆ.
"ಲಸಿಕೆ ಪಡೆಯಲು 2 ಗಂಟೆ ಕಾದು ನಿಂತಿದ್ದೆನು"
ಸೋಮವಾರ ಬೆಳಗ್ಗೆ ಸರಿಯಾಗಿ 9 ಗಂಟೆ ವೇಳೆಗೆ ಸಾದರ್ ಆಸ್ಪತ್ರೆಯ ಕೊರೊನಾವೈರಸ್ ಲಸಿಕೆ ಕೇಂದ್ರವನ್ನು ತಲುಪಿದ್ದೆನು. ಅಲ್ಲಿ ಎರಡು ಗಂಟೆಗಳ ಕಾಲ ಕಾದು ನಿಂತು ನಂತರದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಂಡೆನು. ಲಸಿಕೆಯು ಸುರಕ್ಷಿತವಾಗಿದ್ದು, ನಾನು ಅದನ್ನು ಹಾಕಿಸಿಕೊಂಡ ನಂತರದಲ್ಲಿ ಯಾವುದೇ ತೊಂದರೆಗಳು ಕಾಣಸಿಕೊಳ್ಳಲಿಲ್ಲ ಎಂದು ರಾಮ್ ಕಿಶೋರ್ ಸಹು ಹೇಳಿದ್ದಾರೆ.
ಕೊವಿಡ್-19 ಲಸಿಕೆ ಪಡೆದು ಗ್ರಾಮಕ್ಕೆ ವಾಪಸ್
ಕೊರೊನಾವೈರಸ್ ಲಸಿಕೆಯನ್ನು ಪಡೆದ ನಂತರದಲ್ಲಿ 15 ರಿಂದ 30 ನಿಮಿಷ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಈ ಅವಧಿಯಲ್ಲಿ ನನ್ನಲ್ಲಿ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿಲ್ಲ. ಅದಲ್ಲದೇ ಲಸಿಕೆ ಪಡೆದುಕೊಂಡ ನಂತರ ನಾವು ಸುರಕ್ಷಿತವಾಗಿ ಬೈಕಿನಲ್ಲಿಯೇ 68 ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದೇನೆ ಎಂದು ರಾಮ್ ಕಿಶೋರ್ ಸಹು ಸ್ಪಷ್ಟನೆ ನೀಡಿದ್ದಾರೆ.
"ಬೇರೆಯವರಿಗೆ ಸೋಂಕು ಹರಡದಿರಲು ಲಸಿಕೆ ಪಡೆಯಿರಿ"
ಕೊರೊನಾವೈರಸ್ ಲಸಿಕೆಯು ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳುವುದಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಕೊವಿಡ್-19 ಲಸಿಕೆಯು ರೋಗದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕಷ್ಟೇ ಅಲ್ಲ. ನಿಮ್ಮಿಂದ ಬೇರೆಯವರಿಗೆ ಸೋಂಕು ಹರಡದಂತೆ ರಕ್ಷಿಸುತ್ತದೆ ಎಂದು ರಾಮ್ ಕಿಶೋರ್ ಸಹು ಸಲಹೆ ನೀಡಿದ್ದಾರೆ.