ಸಿಯಾಚಿನ್ನಲ್ಲಿ 38 ವರ್ಷಗಳ ನಂತರ ಯೋಧನ ಅವಶೇಷ ಪತ್ತೆ!
ನವದೆಹಲಿ, ಆಗಸ್ಟ್ 15: ಇಡೀ ಭಾರತ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗಳು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಸಾವಿರ ಸಾವಿರ ವೀರ ಯೋಧರ ತ್ಯಾಗ, ಬಲಿದಾನಗಳಿವೆ. ಅಂಥ ವೀರರನ್ನು ಸ್ಮರಿಸಿಕೊಳ್ಳುದಿದ್ದಲ್ಲಿ ಸಂಭ್ರಮ ಸಂಪೂರ್ಣವಾಗುವುದಿಲ್ಲ, ಅವರ ಹೆಸರೇ ಲಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೊಲ್.
1984ರಲ್ಲಿ ಸಿಯಾಚಿನ್ನಲ್ಲಿ ನಾಪತ್ತೆಯಾಗಿದ್ದ ಉತ್ತರಾಖಂಡದ ಹಲ್ದವಾನಿಯ ಯೋಧನ ಅವಶೇಷಗಳು 38 ವರ್ಷಗಳ ನಂತರ ವಿಶ್ವದ ಅತಿ ಎತ್ತರದಲ್ಲಿರುವ ಯುದ್ಧಭೂಮಿಯಲ್ಲಿ ಪತ್ತೆಯಾಗಿವೆ.
ಸ್ವಾತಂತ್ರ್ಯ ಸಂಭ್ರಮದಲ್ಲಿ ಭವ್ಯ ಭಾರತ ನಿರ್ಮಾಣಕ್ಕೆ ಮುರ್ಮು ಕರೆ
ಈ ವಿಷಯದಿಂದ ತೀವ್ರ ಆಘಾತಕ್ಕೊಳಗಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲ್ ಪತ್ನಿ ಶಾಂತಿ ದೇವಿ (63) ಆರೋಗ್ಯ ಚೇತರಿಸಿಕೊಂಡಿರುವ ಬಗ್ಗೆ ಸೇನೆಯ 19 ಕುಮಾವೂನ್ ರೆಜಿಮೆಂಟ್ನ ಅಧಿಕಾರಿಗಳು ತಿಳಿಸಿದ್ದಾರೆ.
ಪತಿಯ ಕಾತರತೆಯಲ್ಲಿದ್ದ ಪತ್ನಿಗೆ ಆಘಾತಕಾರಿ ಸುದ್ದಿ
ಸಿಯಾಚಿನ್ನ ಹಳೆಯ ಬಂಕರ್ನಲ್ಲಿ ಶನಿವಾರ ಶವ ಪತ್ತೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಕಾಶವೇ ಕಳಚಿ ಬಿದ್ದಂತೆ ಆಯಿತು. ಒಂದು ಕ್ಷಣ ಮೌನಕ್ಕೆ ಶರಣಾದ ಮಹಿಳೆಯ ಮನಸಿಗೆ ಮಂಕು ಕವಿದಂತೆ ಆಯಿತು. "ಸುಮಾರು 38 ವರ್ಷಗಳಾಗಿವೆ. ತಮ್ಮ ಹಳೆಯ ನೆನಪಿನ ಗಾಯಗಳು ಮತ್ತೊಮ್ಮೆ ನೋವುಂಟು ಮಾಡುತ್ತಿವೆ. ಅವರು ಕಾಣೆಯಾದಾಗ ನನಗಿನ್ನೂ 25 ವರ್ಷ. ನಾವು 1975ರಲ್ಲಿ ಮದುವೆಯಾದೆವು. ಒಂಬತ್ತು ವರ್ಷಗಳ ನಂತರ ಅವರು ಕಾಣೆಯಾದಾಗ, ನನ್ನ ಇಬ್ಬರು ಹೆಣ್ಣುಮಕ್ಕಳು ತುಂಬಾ ಚಿಕ್ಕವರಾಗಿದ್ದರು. ಒಬ್ಬರು ನಾಲ್ಕು ಮತ್ತು ಇನ್ನೊಂದು ಮಗುವಿಗೆ ಆಗಿನ್ನೂ ಒಂದೂವರೆ ವರ್ಷ, "ಎಂದು ದೇವಿ ಹೇಳಿದರು.
ಮಕ್ಕಳನ್ನು ಬೆಳೆಸುವುದಕ್ಕಾಗಿ ಇಡೀ ಬದುಕು ಮುಡಿಪು
"ನಾವು ಅವರ ತರ್ಪಣವನ್ನು ಬಿಟ್ಟಿದ್ದೇವೆ. ನನ್ನ ಮಕ್ಕಳನ್ನು ಬೆಳೆಸಲು ನಾನು ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಅನೇಕ ಅಡೆತಡೆ ಮತ್ತು ಸವಾಲುಗಳ ಹೊರತಾಗಿಯೂ, ನನ್ನ ಮಕ್ಕಳನ್ನು ಹೆಮ್ಮೆಯ ತಾಯಿಯಾಗಿ ಮತ್ತು ಹುತಾತ್ಮ ಯೋಧನ ಧೈರ್ಯಶಾಲಿ ಹೆಂಡತಿಯಾಗಿ ಬೆಳೆಸಿದ್ದೇನೆ," ಎಂದು 63 ವರ್ಷದ ಶಾಂತಿದೇವಿ ಹೇಳಿದ್ದಾರೆ.
ಯೋಧನ ತ್ಯಾಗ ಸ್ಮರಿಸುತ್ತಿರುವ ಜನರು
ಮಂಗಳವಾರ ಕುಟುಂಬಕ್ಕೆ ಮೃತದೇಹ ಸಿಗುವ ನಿರೀಕ್ಷೆಯಿದೆ. "ಅಧಿಕಾರಿಗಳು ಹಾಗೂ ನಮ್ಮ ಗ್ರಾಮದ ಸುತ್ತಮುತ್ತಲಿನ ಮಂದಿ ಈಗ ನಮ್ಮ ಮನೆಯ ಕಡೆಗೆ ಹರಿದು ಬರುತ್ತಿದ್ದಾರೆ. ಅವರು ನಮ್ಮ ನಾಯಕ, ದೇಶವು ನಮ್ಮ ಸೈನಿಕರ ತ್ಯಾಗವನ್ನು ಸ್ಮರಿಸುತ್ತಿದೆ. ಇಂಥ ಸಂದರ್ಭದಲ್ಲಿ ಅವರ ತ್ಯಾಗವನ್ನು ಸಹ ಸ್ಮರಿಸಲಾಗುವುದು ಎಂದು ಹೇಳಿದರು.
ಹುತಾತ್ಮ ಯೋಧನ ಪುತ್ರಿಯ ನೋವಿನ ನುಡಿ
ಈಗ 42 ವರ್ಷದ ಹರ್ಬೋಲ್ ಅವರ ಪುತ್ರಿ ಕವಿತಾ, ಸಂತೋಷಪಡಬೇಕೋ ಅಥವಾ ದುಃಖಿಸಬೇಕೋ ಗೊತ್ತಿಲ್ಲ ಎಂದು ಹೇಳಿದರು. "ಅವರು ಬಹಳ ಹಿಂದೆಯೇ ಹೋಗಿದ್ದಾರೆ. ಇಷ್ಟು ಸಮಯದ ನಂತರ ಅವರು ಸಿಗುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಸೇನಾ ಸಂಖ್ಯೆಯುಳ್ಳ ಮೆಟಾಲಿಕ್ ಡಿಸ್ಕ್ ಅವರ ಅವಶೇಷಗಳನ್ನು ಗುರುತಿಸಲು ಸಹಾಯ ಮಾಡಿದೆ ಎಂದು ನಮಗೆ ತಿಳಿಸಲಾಯಿತು. ಆದರೆ ಕನಿಷ್ಠ ನಾವು ಈಗ ಸಾಂತ್ವನ ಪಡೆಯುತ್ತೇವೆ. ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ನಡೆಸಿದ ನಂತರ ಅಂತ್ಯಸಂಸ್ಕಾರ ನಡೆಸುತ್ತೇವೆ. ತಂದೆ ಮನೆಗೆ ಬಂದಿದ್ದಾರೆ ಆದರೆ ಅವರು ಬದುಕಿದ್ದರೆ ಮತ್ತು ಇಲ್ಲಿ ಎಲ್ಲರೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಬಹುದೆಂದು ನಾನು ಬಯಸುತ್ತೇನೆ", ಪುತ್ರಿ ನೋವಿನಲ್ಲಿ ನುಡಿಯುತ್ತಾರೆ.
ಯೋಧ ಹರ್ಬೊಲ್ ನಾಪತ್ತೆಯಾಗಿದ್ದು ಯಾವಾಗ?
1971ರಲ್ಲಿ ಕುಮಾನ್ ರೆಜಿಮೆಂಟ್ಗೆ ಸೇರಿದ ಹರ್ಬೋಲ್, ಹಿಮಕುಸಿತ ಸಂಭವಿಸಿದಾಗ ಐದು ಸದಸ್ಯರ ಗಸ್ತು ಪಡೆಯ ಭಾಗವಾಗಿದ್ದರು. ಆತನ ಅಥವಾ ಇತರ ನಾಲ್ವರ ಮೃತದೇಹಗಳು ಪತ್ತೆಯಾಗಿಲ್ಲ. ಅವರ ರೆಜಿಮೆಂಟ್ ಏಪ್ರಿಲ್ 1984ರಲ್ಲಿ ಆಪರೇಷನ್ ಮೇಘದೂತ್ನ ಭಾಗವಾಗಿ ಹಿಮನದಿಯಲ್ಲಿನ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಳ್ಳದಂತೆ ಪಾಕಿಸ್ತಾನವನ್ನು ತಡೆಯಲು ಭಾರತದ ಪೂರ್ವಭಾವಿ ಕ್ರಮವಾಗಿತ್ತು.