ಕಾಂಗ್ರೆಸ್ಸಿನ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧುರಿ
ನವದೆಹಲಿ, ಜೂನ್ 18: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಾಪನೆಯಾದ ಬಳಿಕ ಮೊಟ್ಟ ಮೊದಲ ಅಧಿವೇಶನ ಜೂನ್ 17ರಿಂದ ಆರಂಭವಾಗಿದೆ. 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್, ಉಪ ಸ್ಪೀಕರ್ ಹಾಗೂ ವಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ
ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನಂತರ ಲೋಕಸಭಾ ಸ್ಪೀಕರ್, ಉಪ ಸ್ಪೀಕರ್ ಆಯ್ಕೆಯಾಗಲಿದೆ.
ರಾಜಸ್ಥಾನದ ಕೋಟಾ ಬಂದಿ ಲೋಕಸಭಾ ಕ್ಷೇತ್ರದ ಎರಡು ಬಾರಿ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಈ ನಡುವೆ ಲೋಕಸಭೆಯಲ್ಲಿ ಪ್ರತಿಪಕ್ಷವೇ ಇಲ್ಲದ್ದಂತಾಗಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಗಳಿಸಿದ್ದು, ಪ್ರತಿಪಕ್ಷ ಎನಿಸಿಕೊಳ್ಳಲು ಇನ್ನು ಕನಿಷ್ಠ 3 ಹೆಚ್ಚಿನ ಸ್ಥಾನ ಹೊಂದಿರಬೇಕಾಗಿತ್ತು. ಕಾಂಗ್ರೆಸ್ ಪಕ್ಷವೊಂದಕ್ಕೆ ಪ್ರತಿಪಕ್ಷ ಸ್ಥಾನ ನೀಡಲು ಬಿಜೆಪಿ ಒಪ್ಪಿದರೂ, ಎನ್ಡಿಎ ಒಕ್ಕೂಟ ಒಪ್ಪುವುದಿಲ್ಲ.
ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ
ಹೀಗಾಗಿ, ಕಾಂಗ್ರೆಸ್ ಲೋಕಸಭಾ ನಾಯಕರಾಗಿ ಆಯ್ಕೆಯಾಗುವವರು, ಕಾಂಗ್ರೆಸ್ ನೇತೃತ್ವದ ವಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಸೋಲು ಕಂಡಿರುವುದರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರು ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಪಶ್ಚಿಮ ಬಂಗಾಳದ ಹಿರಿಯ ಮುಖಂಡ, ಸಂಸದ ಅಧೀರ್ ರಂಜನ್ ಚೌಧುರಿ ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಎಂದು ಹೆಸರಿಸಲಾಗಿದೆ. ರಂಜನ್ ಅವರನ್ನು ಆಯ್ಕೆ ಮಾಡಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಲೋಕಸಭೆ ಸ್ಪೀಕರ್ ಗೆ ಮಂಗಳವಾರ (ಜೂನ್ 18) ಬೆಳಗ್ಗೆ ಪತ್ರ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಅವರು ಸಂಸತ್ತಿನಲ್ಲಿ ನಾಯಕರಾಗಿ ನಿಲ್ಲಲು ಹಿಂದೇಟು ಹಾಕಿದ್ದರು. ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ಕೇರಳದ ಸಂಸದ ಶಶಿ ತರೂರ್, ಕೇರಳ ಕಾಂಗ್ರೆಸ್ಸಿನ ಅಧ್ಯಕ್ಷ ಕೆ.ಸುರೇಶ್, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೆಸರು ಕೇಳಿ ಬಂದಿತ್ತು.
ಈ ಪೈಕಿ ಪಕ್ಷದ ವಕ್ತಾರರಾಗಿ ಮನೀಶ್ ಅನುಭವ ಹೊಂದಿದ್ದು, ಹಿಂದಿ, ಇಂಗ್ಲಿಷ್ನಲ್ಲಿ ಮಾತನಾಡಬಲ್ಲವರು, ಗಾಂಧಿ ಪರಿವಾರಕ್ಕೂ ಬೇಕಾದವರು ಹೀಗಾಗಿ, ಮನೀಶ್ ಅವರು ಪ್ರತಿಪಕ್ಷ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬ ಸುದ್ದಿ ಹಬ್ಬಿತ್ತು.
ಲೋಕಸಭೆ ಅಧಿವೇಶನದ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೇರಳದ ಸಂಸದ ಕೆ ಸುರೇಶ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗಾಗಿ, ವಿಪಕ್ಷ ನಾಯಕ ಸ್ಥಾನಕ್ಕೆ ಸುರೇಶ್ ಆಯ್ಕೆಯಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಇಂದು ಅಧೀರ್ ರಂಜನ್ ಚೌಧುರಿ ಹೆಸರನ್ನು ಅಂತಿಮಗೊಳಿಸಲಾಗಿದೆ.