ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಮೋದಿ ಐಡಿಯಾಗಳೇ ಹೆಚ್ಚಿರುತ್ತವೆಯೇ?
ನವದೆಹಲಿ, ಜನವರಿ 6: ಚಳಿಯ ಮಧ್ಯೆಯೂ ನವದೆಹಲಿಯಲ್ಲಿ ಕೇಂದ್ರ ಬಜೆಟ್ ನ ತಯಾರಿಯ ಬಿಸಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕಾರ್ಯಾಲಯದಲ್ಲಿ ಬಜೆಟ್ ತಯಾರಿಯ ವಿಪರೀತ ಚಟುವಟಿಕೆ ಆರಂಭವಾಗಿದೆ. ಆರ್ಥಿಕ ಸಚಿವಾಲಯ ಇರುವ ನಾರ್ಥ್ ಬ್ಲಾಕ್ ಮತ್ತು ಪ್ರಧಾನಮಂತ್ರಿಗಳ ಗೃಹಕಚೇರಿ ಮಧ್ಯೆ ಬಿರುಸಿನ ಓಡಾಟ ಕಂಡುಬರುತ್ತಿದೆ.
ಕೆಲವು ಬಜೆಟ್ ಸಭೆಗಳಂತೂ ಮೂರ್ಮೂರು ಗಂಟೆಗಳ ಕಾಲ ನಡೆಯುತ್ತಿದೆ. ಡಿಸೆಂಬರ್ ಹಾಗೂ ಜನವರಿ ಮಧ್ಯೆ ಅಂಥ ಅದೆಷ್ಟು ಚರ್ಚೆ, ಸಭೆಗಳೋ! ಪ್ರಧಾನಿ ಕಾರ್ಯಾಲಯ ಹಾಗೂ ಆರ್ಥಿಕ ಸಚಿವಾಲಯದ ಉನ್ನತಾಧಿಕಾರಿಗಳು ಬಜೆಟ್ ಪ್ರಸ್ತಾವನೆಗಳ ಚರ್ಚೆಯಲ್ಲಿ ತಲ್ಲೀನರಾಗಿದ್ದಾರೆ.
ಫೆಬ್ರವರಿ 1ರಂದು ಕೇಂದ್ರ ಬಜೆಟ್: ಅನಂತ್ ಕುಮಾರ್
ಬಜೆಟ್ ರೂಪಿಸುವಲ್ಲಿ ಪ್ರಧಾನಿ ಕಾರ್ಯಾಲಯ ತೊಡಗಿಕೊಳ್ಳುವುದು ಯಾವುದೇ ಅಚ್ಚರಿ ಏನಿಲ್ಲ. ಈ ವಿಚಾರವಾಗಿ ಪ್ರಧಾನಿ ಮಂತ್ರಿಗಳೊಂದಿಗೆ ಭೇಟಿ, ಚರ್ಚೆ ಹಾಗೂ ಸಲಹೆ ತೆಗೆದುಕೊಳ್ಳುವುದು ಇವೆಲ್ಲ ಮಾಮೂಲಿ ಸಂಗತಿಯೇ. ಆದರೆ ಅವೆಲ್ಲ ತುಂಬ ಹೆಚ್ಚಿನ ಸಂಖ್ಯೆಯಲ್ಲಿ ಇರುವುದಿಲ್ಲ.
ಆದರೆ, ನರೇಂದ್ರ ಮೋದಿ ಅವರು ಬಜೆಟ್ ರೂಪುರೇಷೆಯ ಆರಂಭದಿಂದಲೂ ಭಾಗಿಯಾಗಿದ್ದಾರೆ. ಮೂರು ವರ್ಷದ ಹಿಂದೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ವೇಳೆ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗೆ ಸಲಹೆ ಮಾಡಿದ್ದರು. ಹೊಸ ಆಲೋಚನೆಗಳನ್ನು ಅಳವಡಿಸುವಂತೆ ತಿಳಿಸಿದ್ದರು.
ಹಿಂದಿನ ಹಾಗೂ ಭವಿಷ್ಯದ ಕೆಲಸದ ಕೊಂಡಿ
ಕಳೆದ ವರ್ಷ ಬಜೆಟ್ ಮಂಡನೆ ಹೊತ್ತಿಗೆ, ಬಜೆಟ್ ಎಂಬುದು ಸರಕಾರ ಈ ಎರಡೂವರೆ ವರ್ಷದಲ್ಲಿ ಮಾಡಿದ ಕೆಲಸ ಹಾಗೂ ಭವಿಷ್ಯದ ಕೆಲಸಗಳ ಮುಖ್ಯ ಕೊಂಡಿ ಎಂದು ಹೇಳಿದ್ದರು. ಮೂಲಗಳ ಪ್ರಕಾರ, ಅಧಿಕಾರಿಗಳೊಂದಿಗೆ ತಾವೇ ಕೂತು ವಿವಿಧ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ ಮೋದಿ. ಅದರಲ್ಲೂ ಉದ್ಯೋಗ ಸೃಷ್ಟಿ, ಕೃಷಿ ಹಾಗೂ ಖಾಸಗಿ ಬಂಡವಾಳ ತರುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
ಆರ್ಥಿಕ ತಜ್ಞರ ಜತೆಗೆ ಸಭೆ
ದೇಶದ ಆರ್ಥಿಕ ಸ್ಥಿತಿ-ಗತಿಯ ಬಗ್ಗೆ ಪ್ರಮುಖ ಆರ್ಥಿಕ ತಜ್ಞರು, ಆರ್ಥಿಕ ಸಲಹಾ ಸಮಿತಿ ಸದಸ್ಯರ ಜತೆಗೆ ಮುಂದಿನ ವಾರ ಮೋದಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಅಂದಹಾಗೆ, ಪ್ರಧಾನಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಬಜೆಟ್ ರೂಪಿಸುವ ವೇಳೆ ನರೇಂದ್ರ ಮೋದಿ ಅವರು ಪಾಲ್ಗೊಳುತ್ತಿರುವುದು ಹೌದು. ಆದರೆ ಈ ಬಾರಿ ಪ್ರಧಾನಿ ಕಾರ್ಯಾಲಯದಲ್ಲಿ ದೀರ್ಘಾವಧಿಯ ಸಭೆಗಳು ಆಗಾಗ ನಡೆಯುತ್ತಲೇ ಇವೆ.
ಪ್ರಧಾನಿ ಮನಸಿನ ಆಲೋಚನೆ ಅರಿಯಲು ಅನುಕೂಲ
ಮೋದಿ ಅವರ ಮನಸ್ಸಿನಲ್ಲಿ ಇರುವ ಆಲೋಚನೆಗಳನ್ನು ಸ್ಪಷ್ಟವಾಗಿ ಅರಿಯುವುದಕ್ಕೆ ಇದರಿಂದ ಹೆಚ್ಚು ಸಹಕಾರಿ ಆಗಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ ರೀತಿಯ ಚರ್ಚೆಯಿಂದ ಪ್ರಧಾನಿಗಳಿಗೂ ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಪ್ಪತ್ತು ವರ್ಷದ ನಂತರ ಭಾರತದ ಪ್ರಧಾನಿ
ಇನ್ನೇನು ಸ್ವಿಸ್ ಆಲ್ಪ್ಸ್ ನಲ್ಲಿ ವಿಶ್ವ ಆರ್ಥಿಕ ಫೋರಂನ ಸಭೆ ನಡೆಯಲಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಭಾರತೀಯ ಕಂಪೆನಿಗಳ ಸಿಇಒಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಜಾಗತಿಕ ವ್ಯಾಪಾರದ ನಾಯಕರನ್ನು ಉದ್ದೇಶಿಸಿ ಮೋದಿ ಮಾತನಾಡುವ ಸಾಧ್ಯತೆಗಳಿವೆ. ಇಪತ್ತು ವರ್ಷಗಳ ಹಿಂದೆ ಆಗಿನ ಪ್ರಧಾನಿ ಎಚ್.ಡಿ.ದೇವೇಗೌಡ ದಾವೋಸ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಇದೀಗ ಮೋದಿ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.