ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಿಂಸಾಚಾರ ವಿವರ 10 ಅಂಶಗಳಲ್ಲಿ
ವಾರಣಾಸಿ, ಸೆಪ್ಟೆಂಬರ್ 25: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಧಿಕಾರಿಯೂ ಸೇರಿ ಇಬ್ಬರು ಪೊಲೀಸರ ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.
ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಹಾಗೂ ವಿವಿಯಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ದೃಶ್ಯಗಳ ವಿಡಿಯೋ ಎಲ್ಲ ಕಡೆಗೆ ಹರಿದಾಡಿ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆ ನಂತರ ಹಿಂಸಾಚಾರಕ್ಕೆ ತಿರುಗಿತ್ತು. ಸೆಪ್ಟೆಂಬರ್ 28ರಿಂದ ವಿಶ್ವವಿದ್ಯಾಲಯಕ್ಕೆ ಘೋಷಿಸಬೇಕಿದ್ದ ರಜಾವನ್ನು ಮೂರು ದಿನದ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 25ರಿಂದಲೇ ಘೋಷಿಸಲಾಯಿತು.
6 ತಿಂಗಳಲ್ಲಿ 400 ಎನ್ಕೌಂಟರ್, ಯೋಗಿ ಸರ್ಕಾರದ ಹೊಸ ಸಾಧನೆ
ಇದೇ ವೇಳೆ ವಾರಣಾಸಿಯ ಇತರ ಕಾಲೇಜುಗಳನ್ನು ಸಹ ಮುಚ್ಚಲಾಗಿದೆ. ಅಂದಹಾಗೆ ಇಡೀ ಘಟನೆಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು, ಹಿಂಸಾಚಾರ ಆ ಪರಿಯಲ್ಲಿ ಭುಗಿಲೇಳಲು ಕಾರಣವೇನು ಎಂಬುದರ ವಿವರಣೆಯನ್ನು ಹತ್ತು ಅಂಶಗಳಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ.
ಮೊಬೈಲ್ ನಲ್ಲಿ ಸೆರೆಯಾದ ದೃಶ್ಯಾವಳಿ
ವಾರಣಾಸಿಯಲ್ಲಿ ನಡೆದ ಹಿಂಸಾಚಾರದ ದೃಶ್ಯಗಳು ಮೊಬೈಲ್ ಫೋನ್ ನಲ್ಲಿ ಸೆರೆಯಾಗಿದೆ. ಬನಾರಲ್ ಹಿಂದೂ ವಿಶ್ವವಿದ್ಯಾಲಯದ ಹಾಸ್ಟೆಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಒಬ್ಬ ಮಹಿಳೆ ಹಾಸ್ಟೆಲ್ ಒಅಳಗೆ ಓಡಿದ್ದಾರೆ. ಮತ್ತೊಬ್ಬರು ಹೊರಗೆ ಉಳಿದುಕೊಂಡಿದ್ದಾರೆ. ಆಗ ಪೊಲೀಸ್ ವೊಬ್ಬರು ತಳ್ಳಿ, ಮಹಿಳೆಯು ನೆಲಕ್ಕೆ ಬಿದ್ದಿದ್ದಾರೆ. ಆಗ ಮತ್ತಿಬ್ಬರು ಪೊಲೀಸರು ನೆಲಕ್ಕೆ ಬಿದ್ದವರನ್ನು ಲಾಠಿಯಿಂದ ಬಡಿದಿದ್ದಾರೆ.
ಹಲವು ವಿದ್ಯಾರ್ಥಿಗಳು ಹಾಗೂ ಇಬ್ಬರು ಪತ್ರಕರ್ತರಿಗೂ ಲಾಠಿ ಪ್ರಹಾರದ ವೇಳೆ ಗಾಯಗಳಾಗಿವೆ.
ಹೊರಗಿನವರಿಂದ ಹಿಂಸಾಚಾರ
ಆದರೆ, ಪೊಲೀಸರು ಹೇಳೋದೇ ಬೇರೆ. ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದ ಲಾಭ ಪಡೆದ ಕೆಲವು ಹೊರಗಿನವರು ಹಿಂಸಾಚಾರ ಆರಂಭಿಸಿದರು. ದುಷ್ಕರ್ಮಿಗಳು ಕಲ್ಲು ತೂರಿದ್ದರಿಂದ ಹಲವು ಪೊಲೀಸರಿಗೂ ಗಾಯಗಳಾಗಿವೆ.
ಇಬ್ಬರು ಪೊಲೀಸರ ವಿರುದ್ಧ ಕ್ರಮ
ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಸಿಟಿ ಮ್ಯಾಜಿಸ್ಟ್ರೇಟ್ ಅನ್ನು ತೆಗೆಯಲಾಗಿದೆ.
ವರದಿ ಕೇಳಿದ ಮುಖ್ಯಮಂತ್ರಿ
"ಇಡೀ ಘಟನೆಯ ಬಗ್ಗೆ ವಾರಣಾಸಿಯ ಡಿವಿಷನಲ್ ಕಮಿಷನರ್ ರಿಂದ ವರದಿ ಕೇಳಿದ್ದೇನೆ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿ.ವಿ. ಕ್ಯಾಂಪಸ್ ನಲ್ಲಿ ಲೈಂಗಿಕ ದೌರ್ಜನ್ಯ
ಕಳೆದ ಗುರುವಾರ ಪ್ರತಿಭಟನೆ ಆರಂಭವಾಗಿತ್ತು. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಮೇಲೆ ಬೈಕ್ ನಲ್ಲಿ ಬಂದ ಮೂವರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ವಿ.ವಿ. ಕ್ಯಾಂಪಸ್ ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ರೋಶವಾಗಿತ್ತು.
ಉಪ ಕುಲಪತಿ ಭೇಟಿಗೆ ಯತ್ನ
ವಿದ್ಯಾರ್ಥಿಗಳು ಶನಿವಾರ ರಾತ್ರಿ ಉಪ ಕುಲಪತಿ ಗಿರೀಶ್ ಚಂದ್ರ ತ್ರಿಪಾಠಿ ಅವರನ್ನು ಮನೆಯಲ್ಲಿ ಭೇಟಿ ಮಾಡಲು ಯತ್ನಿಸಿದಾಗ, ಭದ್ರತಾ ಸಿಬ್ಬಂದಿಯು ವಿದ್ಯಾರ್ಥಿಗಳನ್ನು ತಡೆದಿದ್ದಾರೆ. ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಹಾಕ್ತೀವಿ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ವಿವಿ ಕ್ಯಾಂಪಸ್ ನಲ್ಲಿ ಸಿಸಿಟಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಉಪ ಕುಲಪತಿ ಗಿರೀಶ್ ಚಂದ್ರ ತ್ರಿಪಾಠಿ ಹೇಳಿದ್ದಾರೆ.
ಪೊಲೀಸರಿಂದ ಬಿಗಿ ಬಂದೋಬಸ್ತ್
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರಾದೇಶಿಕ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸೇರಿ ಸಾವಿರದ ಐನೂರು ಪೊಲೀಸರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸುತ್ತ ನೇಮಿಸಲಾಗಿದೆ.
ಬಿಜೆಪಿಯವರ ಬೇಟಿ ಬಚಾವೋ, ಬೇಟಿ ಪಡಾವೋ ವರಸೆ
"ಇದು ಬಿಜೆಪಿಯವರ ಬೇಟಿ ಬಚಾವೋ, ಬೇಟಿ ಪಡಾವೋ ವರಸೆ" ಎಂದು ಪೊಲೀಸ್ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಿಡಿ ಕಾರಿದ್ದಾರೆ. ಉತ್ತರ ಪ್ರದೇಶದ ವಿರೋಧ ಪಕ್ಷಗಳು ಕೂಡ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಅಖಿಲೇಶ್ ಯಾದವ್ ಟ್ವೀಟ್
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರ ಖಂಡನೀಯ. ಸರಕಾರ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಬೇಕೇ ವಿನಾ ಬಲಪ್ರಯೋಗದಿಂದಲ್ಲ. ಇದರಲ್ಲಿ ಯಾರು ಭಾಗಿಯಾಗಿದ್ದರೋ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.