ನ್ಯಾಯಾಂಗ, ನ್ಯಾಯದ ಪರ ದನಿ ಎತ್ತಿದ್ದೇವೆ: ನ್ಯಾ. ಕುರಿಯನ್ ಜೋಸೆಫ್
ನವದೆಹಲಿ, ಜನವರಿ 13: "ನ್ಯಾಯಾಂಗ ಮತ್ತು ನ್ಯಾಯದ ಪರ ದನಿ ಎತ್ತಿದ್ದೇವೆ.. ಇದನ್ನೇ ನಾವು ನಿನ್ನೆ ಅಲ್ಲಿ (ನವದೆಹಲಿ ಪತ್ರಿಕಾಗೋಷ್ಠಿ) ಹೇಳಿದ್ದು. ಇದನ್ನು ಮೀರಿ ಬೇರೇನೂ ಇಲ್ಲ," ಹೀಗಂಥ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಪೂರ್ವಜರ ಮನೆ ಕಾಲಡಿಯಲ್ಲಿ ಮಲಯಾಳಂ ವಾಹಿನಿ ಜತೆ ಮಾತನಾಡಿರುವ ಅವರು, "ಒಂದು ಸಮಸ್ಯೆ ಗಮನಕ್ಕೆ ಬಂದಿದೆ. ಈ ಸಮಸ್ಯೆ ಗಮನಕ್ಕೆ ಬಂದಿರುವುದರಿಂದ ಪರಿಹಾರವಾಗಬಹುದು," ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಸುಪ್ರೀಂ ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಏನಿದೆ?
"ನ್ಯಾಯಾಂಗದ ಮೇಲೆ ಜನರಿಗಿರುವ ವಿಶ್ವಾಸವನ್ನು ಹೆಚ್ಚಿಸಲು," ನ್ಯಾಯಮೂರ್ತಿಗಳು ಹೀಗೆ ನಡೆದುಕೊಂಡರು ಎಂದು ಜೋಸೆಫ್ ಪ್ರತಿಪಾದಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಎಂ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರು ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಪರಿಸ್ಥಿತಿ 'ಕ್ರಮದಂತೆ ಇಲ್ಲ' ಮತ್ತು ಹಲವು ವಿಚಾರಗಳಲ್ಲಿ 'ಅಪೇಕ್ಷಣೀಯಕ್ಕಿಂತ ಕಡಿಮೆ' ಇದೆ ಎಂದಿದ್ದರು.
"ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ" ಎಂದೂ ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದ್ದರು. ಜತೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾಗೆ ಬರೆದಿದ್ದ ಪತ್ರವನ್ನೂ ಬಹಿರಂಗಪಡಿಸಿದ್ದರು.
ಇನ್ನು ಪತ್ರಿಕಾಗೋಷ್ಠಿ ಕರೆಯುವ ಮೂಲಕ ನಾವು ಶಿಸ್ತು ಉಲ್ಲಂಘಿಸಿಲ್ಲ ಎಂದು ಕುರಿಯನ್ ಜೋಸೆಫ್ ಸ್ಪಷ್ಟಪಡಿಸಿದ್ದು, ನಮ್ಮ ನಡೆ ಸುಪ್ರೀಂ ಕೋರ್ಟ್ ನ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ನಂಬಿಕೆ ಇದೆ ಎಂದಿದ್ದಾರೆ.