ಚಿತ್ರ ಸುದ್ದಿ: ಶಶಿಕಲಾ- ಪನ್ನೀರ್ ಸ್ಪರ್ಧೆ, ಉ.ಪ್ರ. ಚುನಾವಣೆ, ಅಂಧರ ತಂಡಕ್ಕೆ ವಿಶ್ವಕಪ್
ಭಾನುವಾರದ ಸುದ್ದಿಗಳಲ್ಲಿ ಗಮನ ಸೆಳೆದದ್ದು ಅಂಧರ ಕ್ರಿಕೆಟ್ ತಂಡದ ಸಾಧನೆ. ದೃಷ್ಟಿ ಹೀನತೆಯ ನಡುವೆಯೂ ಸಾಧನೆಯ ಪಥದಲ್ಲಿ ತೋರಿದ ಅವರ ನಡೆ ಸ್ಫೂರ್ತಿದಾಯಕ.
ವಾರದ ಮೊದಲ ದಿನವಾದ ಭಾನುವಾರ (ಫೆಬ್ರವರಿ 12) ರಜಾದಿನವಾದರೂ ಸುದ್ದಿಗಳಿಗೇನೂ ಬರವಿರಲಿಲ್ಲ. ತಮಿಳುನಾಡಿನಲ್ಲಿ ರಾಜಕೀಯ ಸಮರ ಎಂದಿನಂತೆ ಭಾನುವಾರವೂ ಮುಂದುವರಿದಿತ್ತು.
ಅದರಲ್ಲೂ ಬೆಳ್ಳಂಬೆಳಿಗ್ಗೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಎಐಡಿಎಂಕೆಯ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಿದ್ದು ಸಾಮಾನ್ಯ ಓದುಗನ ಎದೆ ಝಲ್ಲೆನಿಸುವಂತೆ ಮಾಡಿತ್ತು. ಅದನ್ನು ಬಿಟ್ಟರೆ, ತಮಿಳುನಾಡಿನಲ್ಲಿ ಸಿಎಂ ಪಟ್ಟಕ್ಕೆ ರೇಸ್ ನಲ್ಲಿರುವ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವಿನ ವಾಕ್ಸಮರ ಸಾಗಿತ್ತು.
ಅತ್ತ ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಸಿ, ಬೆಂಗಳೂರಿನಲ್ಲಿ ಫೆಬ್ರವರಿ 14ರಿಂದ ಆರಂಭವಾಗಲಿರುವ ಏರ್ ಶೋ ದ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಬಾನಿನಲ್ಲಿ ವೈಮಾನಿಕ ಹಾರಾಟದ ಸೊಬಗು ಮುಂತಾದುವುದು ಗಮನ ಸೆಳೆದವು.
ಆದರೆ, ಭಾನುವಾರದ ಎಲ್ಲಾ ಸುದ್ದಿಗಳಲ್ಲಿ ಗಮನ ಸೆಳೆದಿದ್ದು, ಭಾರತೀಯ ಅಂಧರ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಫೈನಲ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಗೆಲವು ಸಾಧಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದು. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 9 ವಿಕೆಟ್ ಗಳ ಜಯ ಕಂಡ ಭಾರತ, ಸತತ 2ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿತು.
ಕಳೆದೆರಡು ವರ್ಷಗಳ ಹಿಂದೆ, ಅಂದರೆ 2012ರಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧವೇ ಗೆಲವು ಸಾಧಿಸುವ ಮೂಲಕ ಕಪ್ ಗೆದ್ದಿದ್ದ ತಂಡ, ಈ ಬಾರಿಯೂ ಅದೇ ತಂಡದ ವಿರುದ್ಧ ಜಯ ಸಾಧಿಸಿ ಪ್ರಶಸ್ತಿಗೆ ಪುನಃ ಭಾಜನವಾಗಿದ್ದು ವಿಶೇಷ.
ಇನ್ನು, ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವನ್ ಅವರು, ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ 250 ವಿಕೆಟ್ ಪಡೆದಿದ್ದು ಮತ್ತೊಂದು ಆಕರ್ಷಕ ಸುದ್ದಿ.
ಈ ಎಲ್ಲಾ ಸುದ್ದಿಗಳ ಝಲಕ್ ಹಾಗೂ ಇನ್ನಿತರ ಚಿಕ್ಕ ಪುಟ್ಟ ಸುದ್ದಿಗಳ ಚಿತ್ರ ಸಂಪುಟ ಇಲ್ಲಿ ನಿಮಗಾಗಿ...
ಯಲಹಂಕದಲ್ಲಿ ರಂಗಿನ ಚಿತ್ತಾರ
ಮತ್ತೊಂದು ಏರ್ ಶೋಗಾಗಿ ಬೆಂಗಳೂರು ಸಜ್ಜಾಗುತ್ತಿದ್ದು ಯಲಹಂಕದಲ್ಲಿರುವ ಏರ್ ಬೇಸ್ ನಲ್ಲಿ ಭಾನುವಾರ ನಡೆದ ಯಾಕೊಲೆವ್ಸ್ ತಂಡದ ಅಭ್ಯಾಸ ನೋಡಿದ ಜನ.
ಟೆಸ್ಟ್ ರಂಗದಲ್ಲಿ ಮೈಲುಗಲ್ಲು
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ- ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ 2 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ ರಂಗದಲ್ಲಿ ವೇಗವಾಗಿ 250 ವಿಕೆಟ್ ಸಾಧನೆ ತೋರಿದ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್[ವೇಗದ 250 ಟೆಸ್ಟ್ ವಿಕೆಟ್ ಗಳಿಕೆ: ದಾಖಲೆ ಬರೆದ ಅಶ್ವಿನ್]
ಭಾರತೀಯ ಅಂಧರ ಕ್ರಿಕೆಟ್ ತಂಡ
ಭಾರತೀಯ ಅಂಧರ ಕ್ರಿಕೆಟ್ ತಂಡದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಇನಿಂಗ್ಸ್ ಕೊನೆಯವರೆಗೂ ಅಜೇಯಗಾಗುಳಿದು ತಂಡವನ್ನು ಗೆಲವಿನತ್ತ ಮುನ್ನಡೆಸಿದ ಕರ್ನಾಟಕದ ಆಟಗಾರ ಅಜಯ್ ಜಯರಾಮಯ್ಯ ಅವರಿಗೆ ಜನರಿಂದ ಅಭಿನಂದನೆ.[ಪಾಕಿಸ್ತಾನ ಮಣಿಸಿದ ಭಾರತ ಅಂಧರ ಪಡೆಗೆ ಟಿ20 ವಿಶ್ವಕಪ್]
ಸೀತಾಪುರದಲ್ಲಿ ಸಂವಾದ
ಉತ್ತರ ಪ್ರದೇಶದ ಸೀತಾಪುರದಲ್ಲಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಚುನಾವಣಾ ಪ್ರಚಾರ ನಡೆಸಿದರು.
ಅಖಿಲೇಶ್ ಭಾಷಣ
ಉತ್ತರ ಪ್ರದೇಶದ ಅಮ್ರೋರಾದಲ್ಲಿ ನಡೆದ ಎಸ್ ಪಿ ಚುನಾವಣಾ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತನಾಡಿದರು.
ರಾಹುಲ್ ನಡೆ
ಹರಿದ್ವಾರದಲ್ಲಿ ನಡೆದ ಕಾಂಗ್ರೆಸ್ ನಾಯಕರ ರೋಡ್ ಶೋನಲ್ಲಿ ರಾಹುಲ್ ಗಾಂಧಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಬಿಜೆಪಿ ವಿರುದ್ಧ ಗಂಭೀರ ಆರೋಪ
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅತ್ಯಾಚಾರವಾಗಿದೆ ಎಂದು ಆರೋಪಿಸಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ
ಭಾರತೀಯ ನಟ, ನಟಿಯಾದ ಮನೀಶ್ ದಯಾಳ್ ಹಾಗೂ ಹುಮಾ ಖುರೇಷಿ, ಜರ್ಮನಿಯ ಬರ್ಲಿನ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಕಾರ್ಯಕರ್ತರ ಜತೆ ಶಶಿಕಲಾ ಸಂವಾದ
ಚೆನ್ನೈನಲ್ಲಿ ಭಾನುವಾರ ಎಐಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಸಂಗಮ್ ಬಳಿ ಆತಂಕ
ಅಹ್ಮದಾಬಾದ್ ನಲ್ಲಿ ಸಂಗಮ್ ಬಳಿ ದೋಣಿಯೊಂದು ಮುಗುಚಿಕೊಂಡಿದ್ದ ಹಿನ್ನೆಲೆಯಲ್ಲಿ, ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಮುಂದಾದ ಜನ.