ಕಾಂಗ್ರೆಸ್ ಗೆ ಅಚ್ಛೇದಿನ್ ಆರಂಭವಾಗುತ್ತಿದೆ: ಶರದ್ ಪವಾರ್
ಪುಣೆ, ಫೆಬ್ರವರಿ 22: 'ಬಿಜೆಪಿಗೆ ಸವಾಲೆಸೆಯುವುದಕ್ಕೆ ಸಾಧ್ಯವಿರುವುದು ಕಾಂಗ್ರೆಸ್ ಗೆ ಮಾತ್ರ. ನನ್ನ ಪ್ರಕಾರ ಕಾಂಗ್ರೆಸ್ ಗೆ ಅಚ್ಚೆ ದಿನ್ ಆರಂಭವಾಗುತ್ತಿದೆ' ಎಂದು ಎನ್ ಸಿಪಿ(ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷವಾದ ಬಿಜೆಪಿಯನ್ನು ಎದುರಿಸುವ ಶಕ್ತಿಯಿರುವುದು ಕಾಂಗ್ರೆಸ್ ಗೆ ಮಾತ್ರ ಎಂದರು.
ರಾಹುಲ್ ರಾಜ್ಯ ಭೇಟಿ ಹಿನ್ನೆಲೆ ಅಧಿವೇಶನ ಮೊಟಕು: ಈಶ್ವರಪ್ಪ ಕುಟುಕು
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪವಾರ್ ಶ್ಲಾಘಿಸಿದರು. "ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಬಲಾಡ್ಯ ಪಕ್ಷವಾಗಿತ್ತು. ನಂತರ ಇತ್ತೀಚಿನ ವರ್ಷಗಳಲ್ಲಿ ತನ್ನ ಜನಪ್ರಿಯತೆ ಕಳೆದುಕೊಂಡಿತ್ತು. ಆದರೆ ಮತ್ತೀಗ ಕಾಂಗ್ರೆಸ್ ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಹುಲ್ ಗಾಂಧಿಯವರೂ ಬದಲಾಗುತ್ತಿದ್ದಾರೆ. ಅವರು ರಾಜಕೀಯವನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ, ಪ್ರಬುದ್ಧರಾಗುತ್ತಿದ್ದಾರೆ. ಆದ್ದರಿದ ಕಾಂಗ್ರೆಸ್ ಗೆ ಅಚ್ಛೇ ದಿನ್ ಆರಭವಾಗುತ್ತಿದೆ" ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತೆ ರಾಜಕೀಯ ಬದುಕಿನಲ್ಲಿ ತತ್ವಾದರ್ಶಗಳನ್ನು ಪಾಲಿಸುತ್ತಿರುವವರು ಈಗಿಲ್ಲ ಎಂದು ಅವರು ಪರೋಕ್ಷವಾಗಿ ಮೋದಿಯವರನ್ನು ಕುಟುಕಿದರು. 'ವಿದೇಶದಿಂದ ಯಾರೇ ಗಣ್ಯರು ಬಂದರೂ ಅವರನ್ನು ಮೋದಿ ಕೇವಲ ಗುಜರಾತ್ ಗೆ ಕರೆದೊಯ್ಯುವುದು ಏಕೆ? ಬೇರೆ ರಾಜ್ಯಗಳಿಗೆ ಯಾಕೆ ಕರೆದೊಯ್ಯುವುದಿಲ್ಲ?' ಎಂದು ಸಹ ಪ್ರಶ್ನಿಸಿದರು.