ಮೋದಿ ಬಲಿಷ್ಠ, ಮಾಯಾ-ಅಖಿಲೇಶ್ ಕೈಜೋಡಿಸಿದರೆ ಬಿಜೆಪಿಗೆ ಕಷ್ಟಕಷ್ಟ
ಬೆಂಗಳೂರು, ನವೆಂಬರ್ 02 : ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ, ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿರುವ ಸಮೀಕ್ಷೆ ಊಹಿಸಲಾಗದಂಥ ಹೊಡೆತವನ್ನು ನೀಡಿದೆ.
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 300 ಸೀಟುಗಳೊಂದಿಗೆ ಅಧಿಕಾರಕ್ಕೆ ಮರಳುವುದು ಮಾತ್ರವಲ್ಲ, ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನಾಳಲಿದ್ದಾರೆ. ಯುಪಿಎ ಕೇವಲ 119 ಸೀಟುಗಳನ್ನು ಗಳಿಸಲಿದ್ದರೆ, ಇತರೆ ಪಕ್ಷಗಳು 127 ಸೀಟುಗಳನ್ನು ತನ್ನ ಮುಡಿಗೆ ಹಾಕಿಕೊಳ್ಳಲಿವೆ.
ಎಬಿಪಿ ಸಮೀಕ್ಷೆ: ಎನ್ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎನ್ಡಿಎ 336 ಸೀಟುಗಳನ್ನು ಗೆದ್ದಿದ್ದರೆ, ಬಿಜೆಪಿ ಏಕಾಂಗಿಯಾಗಿ 282 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್ ಕೇವಲ 44 ಸೀಟುಗಳನ್ನು ಗಳಿಸಿ ಭಾರೀ ಮುಖಭಂಗ ಅನುಭವಿಸಿತ್ತು. ಬಹುಮತಕ್ಕೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬೇಕಾಗಿರುವುದು 272 ಸೀಟುಗಳು.
ಈ ಸಮೀಕ್ಷೆ, ರಾಫೇಲ್ ಡೀಲ್, ಸಿಬಿಐ ಭ್ರಷ್ಟಾಚಾರ ಹಗರಣ, ಆರ್ಬಿಐ ಪ್ರತಿರೋಧ, ಮಲ್ಯ-ನಿರಾವ್ ಪರಾರಿ ಮುಂತಾದ ಹಗರಣಗಳನ್ನು ಎದುರಿಸುತ್ತಿರುವ ಬಿಜೆಪಿಯ ಬಾಯಿಗೆ ಹಾಲು ಸಕ್ಕರೆ ಸುರಿದಂತಾಗಿದ್ದರೆ, ಶತಾಯಗತಾಯ ಬಿಜೆಪಿಗೆ ಮಣ್ಣು ಮುಕ್ಕಿಸಲೇಬೇಕು ಎಂದು ಪ್ರಯತ್ನಪಡುತ್ತಿರುವ ವಿರೋಧ ಪಕ್ಷಗಳಿಗೆ ಆಘಾತದ ಕಹಿ ಉಣ್ಣಿಸಿದೆ.
ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ
ಆದರೆ, ಇಲ್ಲಿ ಹಲವಾರು ಕಂಡಿಷನ್ ಗಳಿವೆ. ಅದು ಸಾಧ್ಯವಾದರೆ, ಎನ್ಡಿಎ ಒಟ್ಟಾರೆಯಾಗಿ 300 ಸೀಟುಗಳನ್ನು ಗಳಿಸುವುದಿರಲಿ, ಬಹುಮತಕ್ಕೆ ಬೇಕಾದ ಕ್ಷೇತ್ರಗಳಲ್ಲಿ ಜಯಗಳಿಸುವುದು ಅನುಮಾನ ಎಂದು ಆ ಸಮೀಕ್ಷೆ ಕೊಕ್ಕೆ ಹಾಕಿದೆ. ಆ ಸಾಧ್ಯತೆಗಳಾವುವು? ಎಂಬುದನ್ನು ಮುಂದೆ ನೋಡಿ.
ಲೆಕ್ಕಾಚಾರ ತಲೆಕೆಳಗು ಮಾಡುವರೆ ಮಾಯಾ-ಅಖಿಲೇಶ್?
ಉತ್ತರ ಪ್ರದೇಶದಲ್ಲಿ ಒಂದು ವೇಳೆ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆಯನ್ನು ಎದುರಿಸಿದರೆ, ಬಿಜೆಪಿಯ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಲಿವೆ. ಹಾಗಾದರೆ, ಎನ್ಡಿಎ ಒಟ್ಟಾರೆಯಾಗಿ 261 ಸೀಟುಗಳನ್ನು ಮಾತ್ರ ಗಳಿಸಲಿದೆ. ಅಂದರೆ ಬಹುಮತಕ್ಕಿಂತ ಸ್ವಲ್ಪ ಕೆಳಗೆ. ಕಳೆದ ಚುನಾವಣೆಯಲ್ಲಿ 80ರಲ್ಲಿ ಬಿಜೆಪಿ 70 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಭಾರೀ ಮುಖಭಂಗ ಉಂಟುಮಾಡಿತ್ತು. ಕಳೆದ ಬಾರಿ ಕಾಂಗ್ರೆಸ್ 2 ಸೀಟನ್ನು ಮಾತ್ರ ಗೆದ್ದುಕೊಂಡಿತ್ತು. ಈ ಬಾರಿ ಕೂಡ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಲಿದೆ. ಕಾಂಗ್ರೆಸ್ ಕೇವಲ 3 ಹೆಚ್ಚುವರಿ ಸೀಟು ಗೆಲ್ಲಲಿದ್ದರೆ, ಇತರ ಪಕ್ಷಗಳು 36 ಸೀಟುಗಳನ್ನು ಉತ್ತರ ಪ್ರದೇಶದಲ್ಲಿ ತಮ್ಮ ಮುಡಿಗೆ ಹಾಕಿಕೊಳ್ಳಲಿವೆ.
ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ
ಉತ್ತರ ಭಾರತದ ಕಥೆ ಒಂದೆಡೆಯಾದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ(ಯುಪಿಎ)ಗೆ ಅಂತಹ ಆಶಾದಾಯಕ ಪರಿಸ್ಥಿತಿ ಕಂಡುಬರುತ್ತಿಲ್ಲ. ಐದು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳೇ ತಮ್ಮ ಪ್ರಾಬಲ್ಯವನ್ನು ಮೆರೆಯಲಿವೆ. ಒಟ್ಟು 129 ಸೀಟುಗಳಲ್ಲಿ 75 ಸೀಟುಗಳನ್ನು ಪ್ರಾದೇಶಿಕ ಪಕ್ಷಗಳು ತಮ್ಮದಾಗಿಸಿಕೊಳ್ಳಲಿವೆ. ಎನ್ಡಿಎ 20 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲದಿದ್ದರೆ, ಯುಪಿಎ 34ರಲ್ಲಿ ಜಯಶಾಲಿಯಾಗಲಿದೆ. ಈ ನಿಟ್ಟಿನಲ್ಲಿ ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟಗಳು ದಕ್ಷಿಣ ಭಾರತದಲ್ಲಿ ಹೆಚ್ಚಿನ ಸೀಟು ಗಳಿಸಲು ಭಾರೀ ಪ್ರಯತ್ನ ಮಾಡಬೇಕಿದೆ.
ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ
ಕಿಂಗ್ ಮೇಕರ್ ಆಗಲಿದ್ದಾರಾ ಮಮತಾ ಬ್ಯಾನರ್ಜಿ?
ಎನ್ಡಿಎ ಮತ್ತು ಯುಪಿಎಗಳಿಗೆ ಮುಳ್ಳಾಗಿರುವ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಅವರು ತಮ್ಮ ಸಾಮರ್ಥ್ಯವೇನೆಂದು ಮತ್ತೆ ತೋರಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇರುವ 42 ಕ್ಷೇತ್ರಗಳಲ್ಲಿ 32 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡು, ಸರಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಒಂದು ವೇಳೆ, ಯುಪಿಎಗೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ತಲೆದೋರಿದರೆ, ಮಮತಾ ಬ್ಯಾನರ್ಜಿ ಅವರು ತಮ್ಮ ದಾಳಗಳನ್ನು ಖಂಡಿತವಾಗಿ ಉರುಳಿಸಲಿದ್ದಾರೆ. ಆದರೆ, ಒರಿಸ್ಸಾದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮೆರೆಯಲಿದ್ದು, 12 ಸೀಟುಗಳನ್ನು ಗೆಲ್ಲಲಿದೆ ಎಂದಿದೆ ಸಮೀಕ್ಷೆ. ಬಿಜೆಡಿಗೆ 6 ಸಿಕ್ಕರೆ, ಕಾಂಗ್ರೆಸ್ 3ಕ್ಕೆ ತೃಪ್ತಿ ಪಡಬೇಕಿದೆ.
ಏನೇ ಆದ್ರೂ ಮೋದಿಯೇ ಪ್ರಧಾನಿ ಆಗಬೇಕು
ಇನ್ನು ಯಾರು ಮುಂದಿನ ಪ್ರಧಾನಿಯಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲದ ಪ್ರಶ್ನೆ. 2014ರ ಚುನಾವಣೆಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ತುಸು ಕುಗ್ಗಿದಂತೆ ಕಾಣಿಸುತ್ತಿದೆ. ಆದರೆ, ಎಲ್ಲ ಹಗರಣಗಳನ್ನು ಎತ್ತಿಹಿಡಿದು ನರೇಂದ್ರ ಮೋದಿ ಸರಕಾರಕ್ಕೆ ಭಾರೀ ಪ್ರತಿರೋಧ ಒಡ್ಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ 15 ಸಾವಿರಕ್ಕೂ ಹೆಚ್ಚಿನ ಜನರಲ್ಲಿ ಶೇ.56ರಷ್ಟು ಜನರು ಇನ್ನೂ ನರೇಂದ್ರ ಮೋದಿಯವರೇ ದೇಶವನ್ನಾಳಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಸಿಕ್ಕಿರುವುದು ಶೇ.36ರಷ್ಟು ಮತಗಳು ಮಾತ್ರ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ಕೈ ಸದ್ಯಕ್ಕೆ ಮೇಲಿದೆ.