ಬಿಜೆಪಿಯ ಎದೆ ಬಡಿತ ಹೆಚ್ಚಿಸುವ ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಏನು ಹೇಳುತ್ತಿದೆ?
Recommended Video
ಈಚೆಗೆ ಮುಕ್ತಾಯಗೊಂಡ ಪಂಚ ರಾಜ್ಯಗಳ ಚುನಾವಣೆ ನಂತರ ಎಬಿಪಿ ನ್ಯೂಸ್ ನಿಂದ ಸಿವೋಟರ್ ಜತೆಗೂಡಿ ಮಾಡಲಾದ ದೇಶ್ ಕಾ ಮೂಡ್ ಸಮೀಕ್ಷೆ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ರಾಜಕಾರಣದಲ್ಲಿ ಜನರಿಗೆ ಇರುವ ಒಲವು ಹೇಗೆ ಮುಂದಿನ ಲೋಕಸಭಾ ಚುನಾವಣೆಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ.
ನವೆಂಬರ್ ನಾಲ್ಕನೇ ವಾರ ಹಾಗೂ ಡಿಸೆಂಬರ್ ಮೂರನೇ ವಾರದ ಮಧ್ಯೆ ನಡೆದ ಈ ಸಮೀಕ್ಷೆಯಲ್ಲಿ ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಭಾರತದಾದ್ಯಂತ ಪಾಲ್ಗೊಂಡಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮತದಾರರ ಮನದಾಳದಲ್ಲಿ ಏನಿದೆ ಎಂಬುದನ್ನು ಈ ಸಮೀಕ್ಷೆಯು ಬಯಲಿಗೆ ಇಟ್ಟಿದೆ.
ಆಕ್ಸಿಸ್ ಸಮೀಕ್ಷೆ : ಯೋಗಿ ಆದಿತ್ಯನಾಥ್ ಜನಪ್ರಿಯತೆ ಇಳಿಕೆ, ಅಖಿಲೇಶ್ ಏರಿಕೆ
ಎಬಿಪಿ ನ್ಯೂಸ್ ನ ಸಿಒಒ ಅವಿನಾಶ್ ಪಾಂಡೆ ಮಾತನಾಡಿ, ನಮ್ಮ ಸಮೀಕ್ಷೆಯಿಂದ ದೇಶದ ಜನರ ಮನಸ್ಥಿತಿ ತಿಳಿಯುವುದು ಮಾತ್ರವಲ್ಲ, ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಮುಂದಿನ ಚುನಾವಣೆಯು ಇತ್ತೀಚೆಗೆ ನಡೆದ ಸ್ಪರ್ಧೆಗಳಲ್ಲೇ ಬಹಳ ವಿಶಿಷ್ಟವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಎನ್ ಡಿಎಗೆ ಹಿನ್ನಡೆ ಆಗುವ ಸನ್ನಿವೇಶ
ಉತ್ತರಪ್ರದೇಶದಲ್ಲಿ ಒಂದು ವೇಳೆ ಮೈತ್ರಿ ಸಾಧ್ಯವಾದರೆ ಇಡೀ ದೇಶಾದ್ಯಂತ ಯಾವ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ ಲಭಿಸಬಹುದು ಎಂಬ ಬಗ್ಗೆ ಸಮೀಕ್ಷೆಯ ಒಂದು ಲೆಕ್ಕಾಚಾರ ಹೀಗಿದೆ:
ಲೋಕಸಭೆಯ ಒಟ್ಟು ಸ್ಥಾನಗಳು 543
ಯುಪಿಎ (ಜೆಡಿಎಸ್ ಸೇರಿಸಿಕೊಂಡು) 171
ಎನ್ ಡಿಎ 247
ಇತರರು 125
ಎನ್ ಡಿಎಗೆ ಲಾಭ ಆಗುವ ಲಕ್ಷಣಗಳಿವೆ
ಒಂದು ವೇಳೆ ಉತ್ತರಪ್ರದೇಶದಲ್ಲಿ ಮೈತ್ರಿ ಸಾಧ್ಯವಾಗದಿದ್ದ ಸನ್ನಿವೇಶದಲ್ಲಿ ಯಾವ ಮೈತ್ರಿ ಪಕ್ಷಕ್ಕೆ ಎಷ್ಟು ಸ್ಥಾನ ಎಂಬುದರ ವಿವರ ಇಲ್ಲಿದೆ:
ಲೋಕಸಭೆಯ ಒಟ್ಟು ಸ್ಥಾನಗಳು 543
ಯುಪಿಎ (ಜೆಡಿಎಸ್ ಸೇರಿಸಿಕೊಂಡು) 171
ಎನ್ ಡಿಎ 291
ಇತರರು 81
ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ
ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ನಿರ್ಣಾಯಕ
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಆರ್ ಎಲ್ ಡಿ ಮಹಾಘಟ್ ಬಂಧನ್ ಮಾಡಿಕೊಂಡರೆ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆಯ ನಡಾವಳಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಲೆಕ್ಕಾಚಾರವನ್ನು ನಿರ್ಧರಿಸಲಿವೆ. ಉತ್ತರಪ್ರದೇಶದಲ್ಲಿ ಮಹಾ ಮೈತ್ರಿಕೂಟ ರಚಿಸಿಕೊಂಡರೆ ಬಿಜೆಪಿಯು 28 ಸ್ಥಾನಗಳಿಗೆ ಸೀಮಿತ ಆಗಬಹುದು. ಒಂದು ವೇಳೆ ಉತ್ತರಪ್ರದೇಶದಲ್ಲಿ ಮಹಾಘಟ್ ಬಂಧನ್ ವಿಫಲವಾದರೆ 72 ಸ್ಥಾನಗಳು ಗಳಿಸಬಹುದು. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಪೂರ್ವದಲ್ಲೇ ಶಿವಸೇನೆಯು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲಿಲ್ಲ ಅಂದರೆ ಅದು ಅಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಿ ಪರಿಣಮಿಸಿ, ಮಹಾರಾಷ್ಟ್ರದಲ್ಲಿ 30 ಲೋಕಸಭೆ ಸ್ಥಾನಗಳನ್ನು ಗೆದ್ದುಕೊಳ್ಳಲು ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಲಿದೆ.
ಲೋಕಸಭೆ ಚುನಾವಣೆ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಧೂಳಿಪಟ?!
ಕರ್ನಾಟಕ ಫಲಿತಾಂಶದಿಂದ ಬಿಜೆಪಿಗೆ ಪಾಠವಿದೆ
ಮಹಾಘಟ್ ಬಂಧನ್ ಸಾಧ್ಯವಾದರೆ ಬಿಜೆಪಿಗೆ ಮ್ಯಾಜಿಕ್ ನಂಬರ್ 272 ತಲುಪುವುದು ಕಷ್ಟವಾಗುತ್ತದೆ. ಇನ್ನು ಛತ್ತೀಸ್ ಗಢ, ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಮತದಾರರು ಕಾಂಗ್ರೆಸ್ ಪರವಾಗಿಯೇ ಒಲವು ತೋರಿದ್ದಾರೆ. ಆದರೆ ಈವರೆಗೆ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹಾಗೂ ಚುನಾವಣಾಪೂರ್ವ ಮೈತ್ರಿ ಕೂಟವಾಗಿ ಎನ್ ಡಿಎ ಹೊರಹೊಮ್ಮುವ ಸಾಧ್ಯತೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲಿ ಆದ ಅನುಭವದಿಂದ ಪಾಠ ಕಲಿಯಬೇಕಿದೆ. ಏಕೆಂದರೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿ ರಚಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚುನಾವಣೆ ಪೂರ್ವ ಹಾಗೂ ನಂತರದಲ್ಲಿ ಬಿಜೆಪಿಗೆ ಮೈತ್ರಿ ಬಹಳ ಮುಖ್ಯವಾಗುತ್ತದೆ.
ಕೇರಳ, ಕರ್ನಾಟಕ, ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಲಾಭ
ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಲಾಭ ಆಗಲಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಎರಡಂಕಿ ತಲುಪುವ ಸಾಧ್ಯತೆ ಇದೆ. ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣೆ ಪ್ರಾಮುಖ್ಯತೆ ಪಡೆಯಲಿದೆ. ಒಂದೋ ದುರ್ಬಲವಾಗಿ ಹಾಗೂ ಪ್ರಬಲವಲ್ಲದ ಪಾಲುದಾರಿಕೆ ಪಕ್ಷವಾಗಿ ಕಾಣಿಸಿಕೊಳ್ಳಲಿದೆ. ಈ ಕಾರಣದಿಂದಲೇ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿಯೂ ಕಾಣಿಸಿಕೊಳ್ಳಲು ಕಷ್ಟವಾಗಬಹುದು ಎಂಬ ಲೆಕ್ಕಾಚಾರ ಎದುರಿಗೆ ಬರುತ್ತದೆ. ಬಿಜೆಪಿಗೆ ಮುಖ್ಯವಾಗಿ ಉತ್ತರಪ್ರದೇಶದಲ್ಲೇ ದೊಡ್ಡ ಮಟ್ಟದ ಸವಾಲು ಇದೆ.
ಉತ್ತರಪ್ರದೇಶದ ನಷ್ಟ ಇತರೆಡೆ ಸರಿದೂಗಿಸಲು ಪ್ರಯತ್ನಿಸಬೇಕು
ಉತ್ತರಪ್ರದೇಶದಲ್ಲಿ ಆಗುವ ಹಾನಿಯನ್ನು ಒಡಿಶಾ ಹಾಗೂ ಈಶಾನ್ಯದಲ್ಲಿ ಬಿಜೆಪಿ ಸರಿದೂಗಿಸಿಕೊಳ್ಳಬಹುದು. ಆದರೆ ಮುಖ್ಯವಾದ ಸವಾಲು ಏನೆಂದರೆ ಕಳೆದ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚಿನ ಲಾಭ ಮಾಡಿಕೊಂಡಿತ್ತೋ ಅಲ್ಲೇ ಕಳೆದುಕೊಳ್ಳುವುದು ಯೋಚಿಸಬೇಕಾದ ಸಂಗತಿ. ತನ್ನ ಸ್ಥಾನ ಗಳಿಕೆಯನ್ನು ಹೆಚ್ಚಿಸಿಕೊಳ್ಳದೆ, ಹೊಸ ರಾಜ್ಯಗಳಲ್ಲಿ ಸೀಟು ಪಡೆಯುವ ಪ್ರಮಾಣದಲ್ಲೂ ಲಾಭ ಮಾಡಿಕೊಳ್ಳದಿದ್ದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನಗಳು ಹಾಗೂ ಪಡೆದಂಥ ಗೆಲುವು ಸಾಧಿಸುವುದು ಕಷ್ಟ. ಆಗ ತನಗಿಂತ ದುರ್ಬಲವಾದ ಮೈತ್ರಿ ಪಕ್ಷಗಳ ಜತೆಗೂ ಅಧಿಕಾರಕ್ಕಾಗಿ ಚೌಕಾಶಿ ಮಾಡಲೇಬೇಕಾಗುತ್ತದೆ.