ಅಭಿನಂದನ್ ಪಾಕಿಸ್ತಾನದಲ್ಲಿ ಕಳೆದ ದಿನಗಳು ಹೇಗಿದ್ದವು?
ನವದೆಹಲಿ, ಮಾರ್ಚ್ 08: ಪಾಕಿಸ್ತಾನ ಸೇನೆಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ತಾವಲ್ಲಿ ಅನುಭವಿಸಿದ ಹಿಂಸೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಭಿನಂದನ್ ಅವರು ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ತಾಂತ್ರಿಕ ದಾಳಿಗೆ ತುತ್ತಾಗಿ ವಿಮಾನದಿಂದ ಇಜೆಕ್ಟ್ ಆಗಿ ಪಾಕಿಸ್ತಾನದ ಪ್ರದೇಶದಲ್ಲಿ ಲ್ಯಾಂಡ್ ಆದರು.
ದೈಹಿಕ ಹಲ್ಲೆ ಇಲ್ಲದಿದ್ದರೂ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ : ಅಭಿನಂದನ್
ಆನಂತರ ಅವರನ್ನು ಮಾರ್ಚ್ 1 ರಂದು ಪಾಕಿಸ್ತಾನ ಸರ್ಕಾರವು ಭಾರತಕ್ಕೆ ಹಸ್ತಾಂತರಿಸಿತು. ಆದರೆ ಅದಕ್ಕೆ ಮುನ್ನಾ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿ ತಾವು ಅಭಿನಂದನ್ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಸಾಬೀತುಮಾಡಲು ಯತ್ನಿಸಿತ್ತು.
ಆದರೆ ಸತ್ಯ ಬೇರೆಯೇ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಭಿನಂದನ್ ಅವರು ಭಾರತಕ್ಕೆ ವಾಪಸ್ ಬಂದಾಗ ಅವರು ನಿದ್ರೆ ಇಲ್ಲದೆ ಬಳಲಿದ್ದರು. ಅವರು ಪಾಕ್ನಲ್ಲಿ ಎರಡು ರಾತ್ರಿ ಕಳೆದಿದ್ದರೂ ಸಹ ಸರಿಯಾಗಿ ನಿದ್ರೆ ಮಾಡಿರಲಿಲ್ಲವಂತೆ. ಹೀಗೆಂದು ಅಭಿನಂದನ್ ಅವರನ್ನು ತಪಾಸಣೆ ಹಾಗೂ ವಿಚಾರಣೆಗೊಳಪಡಿಸಿದ ಅಧಿಕಾರಿಗಳ ತಂಡದಲ್ಲೊಬ್ಬರು ಆಂಗ್ಲ ಮಾಧ್ಯಮಗಳಿಗೆ ಹೇಳಿದ್ದಾರೆ.
ಬಹು ಸಮಯ ನಿಂತೇ ಇದ್ದ ಅಭಿನಂದನ್
ಪಾಕಿಸ್ತಾನದಲ್ಲಿ ಸೈನ್ಯಾಧಿಕಾರಿಗಳ ಮುಂದೆ ಬಹುಕಾಲ ಅಭಿನಂದನ್ ನಿಂತೆ ಇರಬೇಕಾಯಿತು. ಉದ್ದೇಶಪೂರ್ವಕವಾಗಿ ಅವರಿಗೆ ಜೋರಾದ ಸಂಗೀತವನ್ನು ಕೇಳಿಸಲಾಗಿದೆ, ಅವರಿಗೆ ಮಾನಸಿಕವಾಗಿ ನೋವಾಗುವಂತೆ ಮಾಡಲಾಗಿದೆ ಎಂದು ಆ ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿದ್ದಾರೆ.
ಮೊದಲಿಗೆ ಅಭಿನಂದನ್ ಮೇಲೆ ಹಲ್ಲೆ ಆಗಿತ್ತು
ಅಭಿನಂದನ್ ಅವರನ್ನು ಪಾಕಿಸ್ತಾನದಲ್ಲಿ ಮೊದಲಿಗೆ ಬಂಧಿಸಿದಾಗ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಸಹ ಆ ಅಧಿಕಾರಿ ಹೇಳಿದ್ದಾರೆ. ಅಭಿನಂದನ್ ಅವರನ್ನು ಕೆಲವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಂದಿ ಥಳಿಸಿದ್ದರು ಅದರ ವಿಡಿಯೋದಲ್ಲಿಯೂ ದಾಖಲಾಗಿತ್ತು.
ಅಭಿನಂದನ್ ಹಸ್ತಾಂತರಕ್ಕೂ ಮೊದಲ ವಿಡಿಯೋ ಡಿಲೀಟ್ ಮಾಡಿದ ಪಾಕ್
ತರಂಗಾಂತರಗಳ ಬಗ್ಗೆ ಮಾಹಿತಿ ಪಡೆಯುವ ಯತ್ನ
ಪಾಕಿಸ್ತಾನದ ಸೈನ್ಯಾಧಿಕಾರಿಗಳು ಅಭಿನಂದನ್ ಅವರನ್ನು ವಿಚಾರಣೆ ನಡೆಸಿ ಅವರ ಬಗ್ಗೆ ಮಾಹಿತಿ ಪಡೆಯಲು ಮತ್ತು ಐಎಎಫ್ ಸಂದೇಶಗಳನ್ನು ರವಾನಿಸಲು ಬಳಸುವ ತರಂಗಾತಂರಗಳ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿತಂತೆ. ಆದರೆ ಅಭಿನಂದನ್ ಅವರು ಯಾವುದೇ ಮಾಹಿತಿ ನೀಡಿಲ್ಲ.
ಫೈಟರ್ ಜೆಟ್ ಬಳಕೆ ಬಗ್ಗೆ ಮಾಹಿತಿ
ತರಂಗಾಂತರಗಳ ಜೊತೆಗೆ, ಫೈಟರ್ ಜೆಟ್ಗಳ ಬಳಕೆ, ಐಎಎಫ್ನ ವ್ಯವಸ್ಥಾಪನೆ ಮಾದರಿ ಇನ್ನಿತರ ವಿಷಯಗಳ ಬಗ್ಗೆಯೂ ಪಾಕಿಸ್ತಾನದ ಅಧಿಕಾರಿಗಳು ಅಭಿನಂದನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಇದಾವುದಕ್ಕೂ ಅಭಿನಂದನ್ ಉತ್ತರ ನೀಡಿಲ್ಲ.
ಶತ್ರು ದೇಶದಿಂದ ವಾಪಸ್ ಬಂದ ಅಭಿಯನ್ನು ಎಂಥ ಪರೀಕ್ಷೆಗೆ ಒಳಪಡಿಸಲಾಗುತ್ತದೆ?
ಅಭಿನಂದನ್ ಕೈ ಕಾಲು ಕಟ್ಟಿ ಹಾಕಲಾಗಿತ್ತು
ಅಭಿನಂದನ್ ಅವರನ್ನು ಪಾಕಿಸ್ತಾನದ ವಾಯು ಸೇನೆಯು ವಿಚಾರಣೆ ನಡೆಸಿತು. ಆದರೆ ಅವರು ಹೆಚ್ಚಿನ ಕಾಲ ಪಾಕಿಸ್ತಾನದ ಭೂಸೇನೆಯ ವಶದಲ್ಲಿಯೇ ಇದ್ದರಂತೆ. ಸೇನೆಯ ವಶದಲ್ಲಿದ್ದಾಗಲೂ ಅಭಿನಂದನ್ ಅವರ ಮೇಲೆ ಹಲ್ಲೆ ಮಾಡಲಾಗಿತ್ತು, ಬಂಧನದ ಆರಂಭದಲ್ಲಿ ಅವರ ಕೈ ಮತ್ತು ಕಾಲನ್ನು ಕಟ್ಟಿಹಾಕಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಅಭಿನಂದನ್ ಅವರು ಮಾಹಿತಿ ನಾಶ ಮಾಡಿದ್ದರು
ಭಾರತೀಯ ವಾಯುಪಡೆಯ ಯಾವುದೇ ಪೈಲೆಟ್ಗಳಾಗಲಿ ಇತರ ಯಾವುದೇ ಯುದ್ಧ ಸಂಬಂಧಿ ಸಿಬ್ಬಂದಿಗಳಾಗಲಿ ಹೀಗೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ ಬಹು ಸಮಯ ಶತ್ರು ದೇಶದ ಸೈನಿಕರೊಂದಿಗೆ ಅಥವಾ ವಿಚಾರಣೆ ನಡೆಸುವ ಅಧಿಕಾರಿಗಳೊಂದಿಗೆ ಮಾತನಾಡುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಾರೆ. ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ತನ್ನ ಪೈಲೆಟ್ ಹೀಗೆ ಶತ್ರು ದೇಶಕ್ಕೆ ಸಿಕ್ಕ ಕೂಡಲೇ ವಾಯುಸೇನೆಯು ತನ್ನ ಫ್ರೀಕ್ವೆನ್ಸಿಯನ್ನು (ತರಗಾಂತರವನ್ನು) ಬದಲಾವಣೆ ಮಾಡುತ್ತದೆ.ಫ್ರೀಕ್ವೆನ್ಸಿ ಬದಲಾವಣೆ ಮಾಡಲು ವಾಯುಸೇನೆಗೆ ಸಮಯ ಸಿಗಲೆಂದು ಪೈಲೆಟ್ಗಳು ಹೀಗೆ ಮಾಡುತ್ತಾರೆ. ಅಭಿನಂದನ್ ಅವರು ತಮ್ಮ ಬಳಿ ಇದ್ದ ದಾಖಲೆಗಳನ್ನು ನಾಶ ಮಾಡಿದ್ದು ಸಹ ಇದೇ ಕಾರಣಕ್ಕೆ. ಅದರಲ್ಲಿ ವಿಮಾನಕ್ಕೆ ಸಂಬಂಧಿಸಿದ ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಳು ಇರುತ್ತವೆ.
ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
ಭಾರತೀಯ ಅಧಿಕಾರಿಗಳಿಂದ ಅಭಿನಂದನ್ ವಿಚಾರಣೆ
ಪಾಕಿಸ್ತಾನದಿಂದ ಅಭಿನಂದನ್ ಅವರು ಭಾರತಕ್ಕೆ ಮರಳಿ ಬಂದ ಮೇಲೆ ವಿವಿಧ ಅಧಿಕಾರಿಗಳು ಅಭಿನಂದನ್ ಅವರನ್ನು ತಪಾಸಣೆ ಹಾಗೂ ವಿಚಾರಣೆಗೆ ಒಳಪಡಿಸಿದ್ದಾರೆ. ಅಭಿನಂದನ್ ಅವರು ಅಲ್ಲಿ ಏನು ಮಾಡಿದರು, ಏನು ಮಾತನಾಡಿದರು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಹೆಕ್ಕಿ ತೆಗೆಯುತ್ತಿದ್ದಾರೆ.