"ಆತ್ಮನಿರ್ಭರತಾ" 2020ರ ಆಕ್ಸ್ಫರ್ಡ್ ಹಿಂದಿ ಪದ
ನವದೆಹಲಿ, ಫೆಬ್ರುವರಿ 02: ಪ್ರಧಾನಿ ನರೇಂದ್ರ ಮೋದಿ ಸದಾ ಬಳಸುವ "ಆತ್ಮನಿರ್ಭರತಾ" ಪದವನ್ನು ಆಕ್ಸ್ಫರ್ಡ್ ನಿಘಂಟಿನ 2020ರ ಹಿಂದಿ ಪದವಾಗಿ ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಸ್ವಾವಲಂಬನೆಯ ಸೂಚಕವಾಗಿರುವ, ಸಾಂಕ್ರಾಮಿಕ ಸೋಂಕು ಕೊರೊನಾ ಭೀತಿಯನ್ನು ನಿಭಾಯಿಸಲು ಸಹಕರಿಸಿದ ಹಾಗೂ ಸೋಂಕಿನಿಂದ ಗುಣಮುಖರಾದ ಅಸಂಖ್ಯ ಭಾರತೀಯರ ಸಾಧನೆಯ ಗುರುತಿನ ರೂಪಕವಾಗಿರುವ ಕಾರಣ ಈ ಪದವನ್ನು ಆಯ್ಕೆ ಮಾಡಲಾಗಿದೆ.
ಭಾಷಾ ತಜ್ಞರಾದ ಕೃತಿಕಾ ಅಗರ್ ವಾಲ್, ಪೂನಂ ನಿಗಂ ಸಹಾಯ್ ಹಾಗೂ ಇಮೊಗೆನ್ ಫಾಕ್ಸ್ ವೆಲ್ ಅವರನ್ನೊಳಗೊಂಡ ಸಲಹಾ ಸಮಿತಿ ಈ ಪದ ಆರಿಸಿದೆ. ಆಯಾ ಪ್ರಸ್ತುತ ವರ್ಷದ ವಿಶೇಷತೆ, ದೇಶದ ಮನಸ್ಥಿತಿ ಬಿಂಬಿಸುವ ಜೊತೆಗೆ ಸಾಂಸ್ಕೃತಿಕ ಪ್ರಾಮುಖ್ಯವನ್ನು ಗಳಿಸಿರುವ ಪದವನ್ನು ಆಯಾ ವರ್ಷದ ಆಕ್ಸ್ ಫರ್ಡ್ ಪದವಾಗಿ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಸೃಷ್ಟಿ: ಆತ್ಮನಿರ್ಭರ ಭಾರತ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ
ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಕೊರೊನಾ ಸೋಂಕಿನ ಪುನಶ್ಚೇತನ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸುವ ಸಂದರ್ಭ ಈ "ಆತ್ಮನಿರ್ಭರತಾ" ಪದ ಬಳಸಿದ್ದರು. ದೇಶ ಸ್ವಾವಲಂಬಿ ಆಗುವತ್ತ ಯೋಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕವಾಗಿ ಸ್ವಾವಲಂಬನೆ ಸಾಧಿಸುವುದು ಅತಿ ಮುಖ್ಯ ಎಂದು ಹೇಳಿದ್ದರು.
ಮೋದಿ ತಮ್ಮ ಭಾಷಣದಲ್ಲಿ ಆತ್ಮನಿರ್ಭರತೆ ಪದ ಬಳಸಿದ ನಂತರ ಈ ಪದದ ಬಳಕೆ ಹೆಚ್ಚಾಗಿದ್ದು, ಪರಿಕಲ್ಪನೆಯಾಗಿಯೂ ಹೆಸರು ಗಳಿಸಿತು. ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು.
ಹಲವು ಆಸಕ್ತಿದಾಯಕ ಪದಗಳು ನಮ್ಮ ಬಳಿ ಬಂದಿದ್ದವು. ಆದರೆ ಆತ್ಮನಿರ್ಭರತೆ ತನ್ನ ದಿನನಿತ್ಯದ ಬಳಕೆ ಹಾಗೂ ಪ್ರಾಮುಖ್ಯದಿಂದ ಮುನ್ನಡೆ ಸಾಧಿಸಿದೆ. ಕೊರೊನಾ ಸಮಯದಲ್ಲಂತೂ ಈ ಪದದ ಬಳಕೆ, ಪ್ರಾಮುಖ್ಯ ಕೆಲಸ ಮಾಡಿದೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರೆಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶಿವರಾಮಕೃಷ್ಣನ್ ವೆಂಕಟೇಶ್ವರನ್ ತಿಳಿಸಿದ್ದಾರೆ.
2017ರಲ್ಲಿ ಆಧಾರ್, 2018ರಲ್ಲಿ ನಾರಿ ಶಕ್ತಿ, 2019ರಲ್ಲಿ ಸಂವಿಧಾನ್ ಎಂಬ ಹಿಂದಿ ಪದಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪದವನ್ನು ಆಕ್ಸ್ಫರ್ಡ್ ಆಯ್ಕೆ ಮಾಡಿತು ಎಂದಾಕ್ಷಣ ಈ ಪದ ಆಕ್ಸ್ ಫರ್ಡ್ ನಿಘಂಟುಗಳಿಗೆ ಸೇರ್ಪಡೆಯಾಗುತ್ತದೆ ಎಂದರ್ಥವಲ್ಲ.