ಕೇಜ್ರಿವಾಲ್ ಬಿಜೆಪಿ ಬೆಂಬಲಿಸುತ್ತಾರಂತೆ, ಆದರೆ ಷರತ್ತುಗಳು ಅನ್ವಯ
Recommended Video
ನವದೆಹಲಿ, ಜೂನ್ 12: ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಸದಾ ಬಿಜೆಪಿ ನಾಯಕರ ವಿರುದ್ಧ ಮತ್ತು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಲೇ ಇರುವ ಅವರು ತಾವು ಕಮಲ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಅದಕ್ಕೆ ಷರತ್ತುಗಳನ್ನು ವಿಧಿಸಿದ್ದಾರೆ.
"ಒಂದೊಮ್ಮೆ 2019ರ ಚುನಾವಣೆಗೆ ಮೊದಲು ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಿದರೆ ದೆಹಲಿಯ ಎಲ್ಲಾ ಮತಗಳು ನಿಮ್ಮ ಪರವಾಗಿ ಬೀಳಲಿದೆ ಎಂಬ ಖಾತರಿಯನ್ನು ನಾನು ಬಿಜೆಪಿಗೆ ನೀಡಲು ಇಚ್ಛಿಸುತ್ತೇನೆ. ನಾವು ನಿಮ್ಮ ಪರವಾಗಿ ಪ್ರಚಾರ ಮಾಡುತ್ತೇವೆ. ಒಂದೊಮ್ಮೆ ನೀವು ಹೀಗೆ ಮಾಡದಿದ್ದರೆ ದೆಹಲಿ ನಿವಾಸಿಗಳು, 'ಬಿಜೆಪಿ ದೆಹಲಿ ಬಿಟ್ಟು ತೊಲಗು' ಎಂಬ ಬೋರ್ಡ್ ಗಳನ್ನು ಹಾಕಲಿದ್ದಾರೆ," ಎಂದಿದ್ದಾರೆ.
ವಿಧಾನಸಭೆಗೆ ಕೇಜ್ರಿವಾಲ್ ಸದಾ ಗೈರು: ಕೇಸ್ ಹಾಕಿದ ಮಾಜಿ ಸ್ನೇಹಿತ!
ಕಾಂಗ್ರೆಸ್ ಜೊತೆಗೆ ಎಎಪಿ ಪಂಜಾಬ್, ಹರ್ಯಾಣ ಮತ್ತು ದೆಹಲಿಯಲ್ಲಿ ಎಎಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹೊತ್ತಲ್ಲೇ ಎಎಪಿ ಇಂಥಹದ್ದೊಂದು ಆಫರ್ ನ್ನು ಬಿಜೆಪಿ ಮುಂದಿಟ್ಟಿದೆ.
ಎರಡೂ ಪಕ್ಷಗಳು ಮೈತ್ರಿ ಸಂಬಂಧ ಚರ್ಚೆ ನಡೆಸುತ್ತಿವೆ ಎಂಬ ಮಾತುಗಳೂ ಕೇಳಿ ಬಂದಿವೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ನಿರ್ಧಾರ ಹೊರ ಬಿದ್ದಿಲ್ಲ.
ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಲು ಆಗ್ರಹಿಸಿ ಕರೆಯಲಾಗಿದ್ದ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಈ ಅಧಿವೇಶನ ಇದೇ ಶುಕ್ರವಾರ ಅಂತ್ಯವಾಗಲಿದೆ.
ಅಧಿವೇಶನದಲ್ಲಿ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವಂತೆ ನಿರ್ಣಯವನ್ನೂ ಅನುಮೋದಿಸಲಾಯಿತು.
2016ರಲ್ಲಿ ದೆಹಲಿ ಹೈಕೋರ್ಟ್ ಕೇಂದ್ರಾಡಳಿತ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ ಎಂದು ಆದೇಶ ನೀಡಿತ್ತು. ಇದರ ವಿರುದ್ಧ ಎಎಪಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಚುನಾಯಿತ ಸರಕಾರ ಯಾವುದೇ ಅಧಿಕಾರವಿಲ್ಲದೆ ಇರಲು ಸಾಧ್ಯವಿಲ್ಲ ಎಂದು ವಾದಿಸಿತ್ತು.