ಎಎಪಿಯಿಂದ ರಾಜ್ಯಸಭೆ ಪ್ರವೇಶಿಸಲಿದ್ದಾರೆ ರಘುರಾಮ್ ರಾಜನ್
ನವದೆಹಲಿ, ನವೆಂಬರ್ 8: ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ರಾಜ್ಯಸಭೆಗೆ ಪ್ರವೇಶಿಸುವ ಸಾಧ್ಯತೆ ಇದೆ. ದೆಹಲಿಯ ಎಎಪಿ ಸರಕಾರಕ್ಕೆ ಮೂವರನ್ನು ರಾಜ್ಯಸಭೆಗೆ ಕಳುಹಿಸುವ ಸಾಮರ್ಥ್ಯ ಇದ್ದು ಇವರಲ್ಲಿ ಒಬ್ಬರು ರಘುರಾಮ್ ರಾಜನ್ ಆಗಿದ್ದಾರೆ. ಮೂಲಗಳ ಪ್ರಕಾರ ರಾಜ್ಯಸಭೆಗೆ ಪ್ರವೇಶಿಸುವಂತೆ ಎಎಪಿ ನೀಡದ ಆಹ್ವಾನವನ್ನು ರಾಜನ್ ಒಪ್ಪಿಕೊಂಡಿದ್ದಾರೆ.
ಮೂರೂ ರಾಜ್ಯಸಭೆ ಸ್ಥಾನಗಳಿಗೆ ಪಕ್ಷದಿಂದ ಹೊರಗಿರುವ ವೃತ್ತಿಪರರನ್ನು ನೇಮಿಕ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉದ್ದೇಶಿಸಿದ್ದಾರೆ. ಇವರಲ್ಲಿ ಶಿಕಾಗೋ ವಿವಿ ಪ್ರಧ್ಯಾಪಕ ರಘುರಾಮ್ ರಾಜನ್ ಕೂಡ ಸ್ಥಾನ ಪಡೆದಿದ್ದಾರೆ.
ಎಎಪಿಯ ಇನ್ನೋರ್ವ ನಾಯಕ ಕುಮಾರ್ ವಿಶ್ವಾಸ್ ಕೂಡಾ ರಾಜ್ಯಸಭೆ ಪ್ರವೇಶಿಸಲು ಇಚ್ಛಿಸಿದ್ದಾರೆ. ಕಳೆದ ತಿಂಗಳು ಇಂಗ್ಲೀಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು "ನಾನೂ ಮನುಷ್ಯ ನನಗೂ ಮಹತ್ವಾಕಾಂಕ್ಷೆಗಳಿವೆ," ಎಂದು ಹೇಳಿದ್ದಾರೆ.
ಒಂದೊಮ್ಮೆ ಎರಡನೇ ಸ್ಥಾನಕ್ಕೆ ಕುಮಾರ್ ವಿಶ್ವಾಸ್ ರನ್ನೇ ಆಯ್ಕೆ ಮಾಡಿದ್ದೇ ಆದಲ್ಲಿ ಮೂರನೇ ಸ್ಥಾನಕ್ಕೆ ಯಾರು ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂಬುದನ್ನು ನೋಡಬೇಕಷ್ಟೆ.