ಆಮ್ ಆದ್ಮಿ ಪಕ್ಷದ ಯುವ ಘಟಕ ಯಾಕಾಗಿ?
ಹೊಸದೆಹಲಿ, ಸೆ.15 : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಂತೆ ಆಮ್ ಆದ್ಮಿ ಪಾರ್ಟಿ ಸಹ ಯುವ ಘಟಕ ಸ್ಥಾಪನೆಗೆ ಮುಂದಾಗಿದ್ದು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಭಾನುವಾರ ಹೇಳಿದೆ.
ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿರುವ ಆಮ್ ಆದ್ಮಿ ಪಾರ್ಟಿ ಯುವ ಘಟಕ ಆರಂಭಕ್ಕೆ ಚಿಂತನೆ ನಡೆಸಿದೆ. ಅದಕ್ಕೆ ಆಮ್ ಆದ್ಮಿ ಯುವ ಘಟಕ ಎಂದು ಹೆಸರಿಡಲು ಮುಂದಾಗಿದ್ದು ಸೆಪ್ಟಂಬರ್ 27 ರಂದು ಅಧಿಕೃತವಾಗಿ ಜಾರಿಗೆ ಬರಲಿದೆ.(ದೆಹಲಿ ಮುಖ್ಯಮಂತ್ರಿಯಾಗು ಎಂದಿದ್ದ ಬಿಜೆಪಿ)
ಸೆಪ್ಟಂಬರ್ 27 ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 107ನೇ ಜನ್ಮದಿನ. ಅಂದೆಯೇ ಯುವ ಘಟಕ ಪ್ರಾರಂಭಿಸಲಾಗುವುದು. 35 ವರ್ಷ ಕೆಳಗಿನ ಯುವಕ-ಯುವತಿಯರು ಘಟಕ ಸೇರಬಹುದು ಎಂದು ಎಪಿಪಿ ಪ್ರಕಟಣೆ ತಿಳಿಸಿದೆ.(ಭ್ರಷ್ಟರೇ ಅಧಿಕಾರ ಬಿಟ್ಟು ತೊಲಗಿ ಎಂದ ಎಎಪಿ)
ದೆಹಲಿಯ ಯುವಜನತೆಯ ಮೂರನೆಯ ಒಂದು ಭಾಗದಷ್ಟು ಯುವಕರನ್ನು ಘಟಕಕ್ಕೆ ಸೇರಿಸಿಕೊಳ್ಳುವ ಯೋಜನೆಯಿದ್ದು, ದೆಹಲಿಯಲ್ಲಿ ಪಕ್ಷ ಭದ್ರಮಾಡಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಸಂಘಟನೆಗೆ ಗಮನ ನೀಡಲಾಗುವುದು ಎಂದು ತಿಳಿಸಿದೆ.
ಸೆಡ್ಡು ಹೊಡೆಯುವುದೆ?
ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಲಾಭ ಪಡೆದು 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಗಳಿಸಿ ಅಧಿಕಾರದ ರುಚಿಯನ್ನು ಸವಿದಿದ್ದ ಆಮ್ ಆದ್ಮಿ ಪಾರ್ಟಿ ನಂತರ ಕಳೆಗುಂದಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಲೋಕಸಭಾ ಚುನಾವಣೆಗೆ ಧುಮುಕಿದ್ದ ಅರವಿಂದ್ ಕೇಜ್ರಿವಾಲ್ ನಿರಾಸೆ ಅನುಭವಿಸಿದ್ದರು. ಈಗ ಸೆಡ್ಡು ಹೊಡೆದು ನಿಲ್ಲಲು ಮಹಿಳಾ ಘಟಕ ಉದ್ಘಾಟನೆಯಾದ ನಂತರದ ಕೆಲವೇ ದಿನದಲ್ಲಿ ಯುವ ಘಟಕ ಸ್ಥಾಪನೆಗೆ ಎಪಿಪಿ ಮುಂದಾಗಿದೆ.
ಪೊಲೀಸರ ವಿರುದ್ಧ ಮುಖ್ಯಮಂತ್ರಿ ಪ್ರತಿಭಟನೆ
ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ತಮ್ಮ ರಾಜ್ಯದ ಪೊಲೀಸರ ವಿರುದ್ಧವೇ ಪ್ರತಿಭಟನೆಗೆ ಕುಳಿತರು. ಈ ಸಂಗತಿ ಮಾಧ್ಯಮಗಳ ಟೀಕಾಪ್ರಹಾರಕ್ಕೆ ಕಾರಣವಾಯಿತು.
ಕೇವಲ ನಾಲ್ಕು ಸ್ಥಾನ
ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವಂತಹ ಪ್ರಚಾರದಲ್ಲಿ ತೊಡಗಿದ್ದ ಆಮ್ ಆದ್ಮಿ ಪಾರ್ಟಿಗೆ ಸಿಕ್ಕುದ್ದು ಕೇವಲ ನಾಲ್ಕು ಸ್ಥಾನ. ಸ್ವತಃ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲರೇ ಸೋಲನುಭವಿಸಬೇಕಾಯಿತು.
ಕಾಂಟ್ರವರ್ಸಿ ಪಾರ್ಟಿ
ಪಕ್ಷದ ನಾಯಕರ ವಿಭಿನ್ನ ಹೇಳಿಕೆಗಳು, ಪಕ್ಷದ ವಿವಿಧ ಸ್ಥಾನಗಳಿಗೆ ರಾಜೀನಾಮೆ ಪರ್ವ, ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಾಯಕತ್ವ ಬದಲಾವಣೆಗೆ ಒತ್ತಡ, ಬಿಜೆಪಿ ನನಗೆ ದೆಹಲಿ ಮುಖ್ಯಮಂತ್ರಿ ಹುದ್ದೆ ನೀಡಿತ್ತು ಎಂಬ ಕುಮಾರ್ ವಿಶ್ವಾಸ ಹೇಳಿಕೆ ಪಕ್ಷದ ಇಮೇಜನ್ನು ಮತ್ತಷ್ಟು ನೆಲಕಚ್ಚುವಂತೆ ಮಾಡಿತು.
ಯುವ ಘಟಕ ಸ್ಥಾಪನೆ ಯಾಕಾಗಿ?
ಬಿಜೆಪಿ ಮತ್ತು ಕಾಂಗ್ರೆಸ್ ರೀತಿಯಲ್ಲೇ ರಣತಂತ್ರ ರೂಪಿಸಲು ಯುವ ಪಡೆ ಕಟ್ಟುವ ಕೆಲಸ ಆಮ್ ಆದ್ಮಿಯಿಂದಾಗುತ್ತಿದೆ. ಅವರೇ ಹೇಳಿದಂತೆ ಮೊದಲ ಗುರಿ ದೆಹಲಿ. ಇಲ್ಲಿಯ ಪ್ರತಿಕ್ರಿಯೆ ನೋಡಿಕೊಂಡು ಉಳಿದೆಡೆ ವಿಸ್ತರಿಸುವ ಚಿಂತನೆ ಪಕ್ಷದ್ದು.
ಯುವಕರೇ ಮುಖ್ಯ
ಅಣ್ಣಾ ಹಜಾರೆ ಹೋರಾಟದಲ್ಲಿ ದೇಶದ ಮೂಲೆ ಮೂಲೆಗಳಿಂದ ಭಾಗವಹಿಸಿದ್ದರು. ಯುತ್ ಕಾಂಗ್ರೆಸ್ ಇರಬಹುದು ಬಿಜೆಪಿ ಯುವಮೋರ್ಚಾ ಇರಬಹುದು ಅಲ್ಲಿ ನಾಯಕರಾಗಿ ಬೆಳೆಯಲು ತೀವ್ರ ಪೈಪೋಟಿ ಮತ್ತು ಒತ್ತಡ ಎದುರಿಸಬೇಕಾಗುತ್ತದೆ. ಆದರೆ ಹೊಸದಾಗಿ ರೂಪಿತವಾತಿರುವ ಆಮ್ ಆದ್ಮಿ ಯುವ ಘಟಕಕ್ಕೆ ಆ ಸಮಸ್ಯೆಯಿಲ್ಲ. ಮೊದಲು ಯುವಕರು ಆಮ್ ಆದ್ಮಿಯನ್ನೇ ಬೆಂಬಲಿಸುತ್ತಿದ್ದರು. ಬದಲಾದ ರಾಜಕೀಯ ಚಿತ್ರಣ ಯುವಕರನ್ನು ದೂರಮಾಡಿತು. ಮತ್ತೆ ಅದನ್ನು ತಮ್ಮೆಡೆಗೆ ಎಳೆದುಕೊಳ್ಳುವ ವಿಚಾರ ಆಮ್ ಆದ್ಮಿ ಪಕ್ಷದ್ದು.