ಎಲ್.ಜಿ - ಕೇಜ್ರಿವಾಲ್ ಸಂಘರ್ಷ, ದೆಹಲಿಯಲ್ಲಿ ಬೀದಿಗಿಳಿದ ಎಎಪಿ ಬೆಂಬಲಿಗರು
ನವದೆಹಲಿ, ಜೂನ್ 17: ದೆಹಲಿಯಲ್ಲಿ ಸಾವಿರಾರು ಜನ ಪ್ರವಾಹದಂತೆ ಬೀದಿಗಿಳಿದಿದ್ದಾರೆ. ಈ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ನಡುವೆ ನಡೆಯುತ್ತಿರುವ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ.
ಭೇಟಿಗೆ ಲೆಫ್ಟಿನೆಂಟ್ ಗವರ್ನರ್ ಅವಕಾಶ ನೀಡದೆ ಇದ್ದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರವಿಂದ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದರು. ಜೊತೆಗೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳೂ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದರು.
ಕೇಜ್ರಿ ಪರ ಮೋದಿಗೆ ದೂರು ನೀಡಿದ ಎಚ್ಡಿಕೆ, ದೀದಿ, ನಾಯ್ಡು, ಪಿಣರಾಯಿ
ಆದರೆ ಪ್ರಧಾನಿ ಮನವಿಗೆ ಸ್ಪಂದಿಸಿ ಮಧ್ಯ ಪ್ರವೇಶ ಮಾಡದ ಹಿನ್ನೆಲೆಯಲ್ಲಿ ಮೋದಿ ನಿವಾಸದತ್ತ ಎಎಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಪ್ರತಿಭಟನೆ ಜಾಥಾ ಹೊರಟಿದ್ದಾರೆ.
ಮಂಡಿ ಹೌಸ್ ನಿಂದ ಪ್ರಧಾನಿ ನಿವಾಸದತ್ತ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಸಾವಿರಾರು ಜನರು ಫ್ಲೆಕ್ಸ್ ಗಳನ್ನು ಹಿಡಿದು, ಕೇಜ್ರಿವಾಲ್ ಅವರಿಗೆ ಬೆಂಬಲ ಸೂಚಿಸಿ ಪಾಲ್ಗೊಂಡಿದ್ದಾರೆ.
"ಅವರಿಗೆ ಪ್ರತಿಭಟನಾ ಜಾಥಾಗೆ ಅನುಮತಿ ನೀಡಿಲ್ಲ. ಅವರನ್ನು ಪಾರ್ಲಿಮೆಂಟ್ ರಸ್ತೆಯಲ್ಲಿ ತಡೆಯಲಾಗಿದೆ. ಅವರಿಗೆ ಮುಂದೆ ಹೋಗಬಾರದು ಎನ್ನಲಾಗಿದೆ. ಇಲ್ಲಿಗೆ ತರಬೇತಿ ಪಡೆದ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಅವರು ನಮ್ಮ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ಇದೆ," ಎಂದು ಡಿಸಿಪಿಯೊಬ್ಬರು ಹೇಳಿದ್ದಾರೆ.
ಮುಂದುವರಿದ ಕೇಜ್ರಿವಾಲ್ ಧರಣಿ: ಪ್ರಧಾನಿ ಮೋದಿ ಕೊಂಚ ಓಗೊಡಬಾರದೇ?
ಎಎಪಿಯ ಪ್ರತಿಭಟನೆ ಹಿನ್ನೆಲೆಯಲ್ಲಿ ಐದು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಪ್ರತಿಭಟನೆ ನಡೆಯುವ ಸುತ್ತ ಮುತ್ತಲಿನ ಜಾಗಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಬೈಜಾಲ್ ಅವರನ್ನು ಭೇಟಿಯಾಗಲು ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಸಚಿವರು ಕಳೆದ ಸೋಮವಾರದಿಂದ ಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡುತ್ತಿಲ್ಲ. ಅಧಿಕಾರಿಗಳ ಪ್ರತಿಭಟನೆ ಕೊನೆಗೊಳಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶ ಮಾಡಬೇಕು. ಇದಲ್ಲದೆ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮತಿ ನೀಡಬೇಕು ಎಂಬುದು ಕೇಜ್ರಿವಾಲ್ ಅವರ ಬೇಡಿಕೆಯಾಗಿದೆ.
ಬೈಜಾಲ್ ಭೇಟಿಗೆ ಅವಕಾಶ ನೀಡದೇ ಇದ್ದ ಹಿನ್ನೆಲೆಯಲ್ಲಿ, ಅವರೆಲ್ಲಾ ಬೈಜಾಲ್ ಕಚೇರಿಯ ವೇಯ್ಟಿಂಗ್ ರೂಂನಲ್ಲೇ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮಧ್ಯ ಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಮೋದಿ ಸ್ಪಂದಿಸಿಲ್ಲ.