5ನೇ ವರ್ಷಾಚರಣೆ ವೇಳೆ ಎಎಪಿಗೆ ಐಟಿ ಆಘಾತ, 30 ಕೋಟಿಯ ತೆರಿಗೆ ನೋಟಿಸ್
ನವದೆಹಲಿ, ನವೆಂಬರ್ 27: ಆಮ್ ಆದ್ಮಿ ಪಕ್ಷ (ಎಎಪಿ) ರಚನೆಯಾಗಿ ಐದು ವರ್ಷಗಳು ಪೂರ್ಣವಾದ ಹಿನ್ನಲೆಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಅತ್ತ ತೊಡಗಿದ್ದರೆ ಆದಾಯ ತೆರಿಗೆ (ಐಟಿ) ಇಲಾಖೆ ಪಕ್ಷಕ್ಕೆ ಆಘಾತ ನೀಡಿದೆ.
An Insignificant Man: ಸಾಕ್ಷ್ಯಚಿತ್ರ ರೂಪದಲ್ಲಿ ತೆರೆಗೆ ಅಪ್ಪಳಿಸಿದ ಕೇಜ್ರಿವಾಲ್
ಎಎಪಿಗೆ ಐಟಿ 30.67 ಕೋಟಿ ರೂಪಾಯಿಗಳ ತೆರಿಗೆ ನೊಟೀಸ್ ಜಾರಿ ಮಾಡಿದ್ದು, ಪಕ್ಷದಿಂದ ಯಾಕೆ ಈ ಹಣವನ್ನು ವಸೂಲಿ ಮಾಡಬಾರದು ಎಂದು ಪ್ರಶ್ನಿಸಿದೆ. ಮತ್ತು ಇದಕ್ಕೆ ಉತ್ತರಿಸಲು ಡಿಸೆಂಬರ್ 7ರ ಗಡುವು ನೀಡಿದೆ.
ಎಎಪಿ ಇಲ್ಲಿಯವರೆಗೆ ಪಡೆದ ಎಲ್ಲಾ ದೇಣಿಗೆಗಳನ್ನು ಅಕ್ರಮ ಎಂದು ಆದಾಯ ತೆರಿಗೆ ಇಲಾಖೆ ಪರಿಗಣಿಸಿದೆ. ಇಲಾಖೆಯ ನೊಟೀಸ್ ಎಎಪಿ ಕಚೇರಿ ತಲುಪುತ್ತಿದ್ದಂತೆ ಕಿಡಿಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇದು 'ರಾಜಕೀಯ ಷಡ್ಯಂತ್ರದ ಪರಮಾವಧಿ' ಎಂದು ಹೇಳಿದ್ದಾರೆ.
ರಾಜ್ಯಸಭೆಗೆ ಚುನಾವಣೆ: ಎಎಪಿ ಆಫರ್ ತಿರಸ್ಕರಿಸಿದ ರಘುರಾಮ್ ರಾಜನ್
"ಭಾರತದ ಇತಿಹಾಸದಲ್ಲಿ ರಾಜಕೀಯ ಪಕ್ಷವೊಂದಕ್ಕೆ ನೀಡಿದ ಎಲ್ಲಾ ದೇಣಿಗೆಗಳನ್ನು ಅಕ್ರಮ ಎಂದು ಪರಿಗಣಿಸಲಾಗಿದೆ. ಈ ಎಲ್ಲಾ ದೇಣಿಗೆಗಳು ಪುಸ್ತಕಗಳಲ್ಲಿ ಉಲ್ಲೇಕವಾಗಿವೆ ಮತ್ತು ಪಾರದರ್ಶಕವಾಗಿ ತೋರಿಸಲಾಗಿದೆ. ಇದು (ನೋಟಿಸ್ ಜಾರಿ) ರಾಜಕೀಯ ಷಡ್ಯಂತ್ರದ ಪರಮಾವಧಿ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
In the history of India, ALL donations to a political party have been declared illegal. All these were accounted for and shown in books of accounts. This is height of political vendetta
— Arvind Kejriwal (@ArvindKejriwal) November 27, 2017
"ನಮಗೆ ಬಂದ ಎಲ್ಲಾ ದೇಣಿಗೆಗಳನ್ನು ತೆರಿಗೆ ಸಹಿತ ಆದಾಯ ಎಂದು ಪರಿಗಣಸಲಾಗಿದೆ ಮತ್ತು ಇದಕ್ಕೆ ತೆರಿಗೆ ಕಟ್ಟುವಂತೆ ಇಲಾಖೆ ಬೇಡಿಕೆ ಇಟ್ಟಿದೆ. ದೇಶದ ರಾಜಕೀಯವನ್ನು ಕಪ್ಪು ಹಣದ ಕೂಪದಿಂದ ಹೊರ ತರಲು ಎಎಪಿ ಎಲ್ಲಾ ದೇಣಿಗೆಗಳನ್ನು ಪಾರದರ್ಶಕವಾಗಿಟ್ಟಿದೆ. ಪಕ್ಷದ ಪ್ರಮಾಣಿಕ ರಾಜಕೀಯಕ್ಕೆ ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ನಮ್ಮ ಮೇಲೆ ದೌರ್ಜನ್ಯ ನಡೆಸಲು ಸರಕಾರ ಯತ್ನಿಸುತ್ತಿದೆ," ಎಂದು ಎಎಪಿಯ ರಾಷ್ಟ್ರೀಯ ಖಜಾಂಚಿ ದೀಪಕ್ ಬಾಜ್ಪೇಯಿ ಹೇಳಿದ್ದಾರೆ.
ಹಾಗಂಥ ಎಎಪಿಗೆ ಈ ರೀತಿಯ ನೋಟಿಸ್ ಹೊಸದೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಎಎಪಿಗೆ ಐಟಿ ನೋಟಿಸ್ ಗಳನ್ನು ನೀಡಿದೆ. ವಿದೇಶಿ ದೇಣಿಗೆ ವಿಚಾರ, ವೆಬ್ಸೈಟ್ ನಲ್ಲಿ ಪ್ರಕಟಿಸಿದ ದೇಣಿಗೆ ನೀಡಿದವರ ವಿವರಕ್ಕೂ ಐಟಿಗೆ ಸಲ್ಲಿಸಿದ ವಿವರಕ್ಕೂ ಇರುವ ವ್ಯತ್ಯಾಸ ಸೇರಿದಂತೆ ಹಲವು ಬಾರಿ ಎಎಪಿಗೆ ಐಟಿ ನೋಟಿಸ್ ನೀಡಿದೆ.