ಪಕ್ಷಾಂತರ ಸುಳಿಯಲ್ಲಿ ಎಎಪಿ: ಹಿಮಾಚಲ ಪ್ರದೇಶ ಘಟಕ ವಿಸರ್ಜನೆ
ಶಿಮ್ಲಾ, ಏಪ್ರಿಲ್ 12: ಹಲವಾರು ರಾಜ್ಯಗಳಲ್ಲಿ ತನ್ನ ಕಬಂಧ ಬಾಹುವನ್ನು ವಿಸ್ತರಣೆ ಮಾಡುತ್ತಿರುವ ಆಮ್ ಆದ್ಮಿ ಪಕ್ಷವು, ಹಿಮಾಚಲ ಪ್ರದೇಶದಲ್ಲಿ ಮಾತ್ರ ವಿಫಲವಾಗಿದೆ. ಹಲವಾರು ಮಂದಿ ಪಕ್ಷಾಂತವಾದ ಬಳಿಕ ಎಎಪಿ ತನ್ನ ಹಿಮಾಚಲ ಪ್ರದೇಶದ ಘಟಕವನ್ನು ವಿಸರ್ಜನೆ ಮಾಡಿದೆ.
ಪಕ್ಷಾಂತರಗಳ ಸುಳಿಯಲ್ಲಿ ಸಿಲುಕಿರುವ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಹಿಮಾಚಲ ಪ್ರದೇಶ ಘಟಕವನ್ನು ಸೋಮವಾರ ವಿಸರ್ಜಿಸಿದ್ದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಸತ್ಯೇಂದ್ರ ಜೈನ್ ಸೋಮವಾರ ಈ ಘೋಷಣೆ ಮಾಡಿದ್ದಾರೆ.
'ಮಿಷನ್ ಹಿಮಾಚಲ': ಮಂಡಿಯಲ್ಲಿ ಕೇಜ್ರಿವಾಲ್, ಭಗವಂತ್ ಮಾನ್ ರೋಡ್ಶೋ
"ಹಿಮಾಚಲ ಪ್ರದೇಶದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಹೊಸ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಶೀಘ್ರದಲ್ಲೇ ಮರುಸಂಘಟಿಸಲಾಗುವುದು," ಎಂದು ಎಎಪಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಸತ್ಯೇಂದ್ರ ಜೈನ್ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷ ಅನುಪ್ ಕೇಸರಿ, ಸಾಂಸ್ಥಿಕ ಪ್ರಧಾನ ಕಾರ್ಯದರ್ಶಿ ಸತೀಶ್ ಠಾಕೂರ್ ಮತ್ತು ಉನಾ ಜಿಲ್ಲಾ ಮುಖ್ಯಸ್ಥ ಇಕ್ಬಾಲ್ ಸಿಂಗ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಮೂರು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಮೂವರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.
ದೆಹಲಿ ಸಚಿವ ಸತ್ಯೇಂದ್ರ ಜೈನ್ 4.8 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ಹಿಮಾಚಲ ವಿಧಾನಸಭೆ ಚುನಾವಣೆ
ಈ ನಡುವೆ ಎಎಪಿಯ ರಾಜ್ಯ ಮಹಿಳಾ ವಿಭಾಗದ ಮುಖ್ಯಸ್ಥೆ ಮಮತಾ ಠಾಕೂರ್ ಮತ್ತು ಐವರು ಪದಾಧಿಕಾರಿಗಳು ಸೋಮವಾರ ನವದೆಹಲಿಯಲ್ಲಿ ಕೇಸರಿ ಪಕ್ಷಕ್ಕೆ ಸೇರಿದರು. ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಏಪ್ರಿಲ್ 6 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಮಂಡಿಯಲ್ಲಿ ರೋಡ್ ಶೋ ನಡೆಸಿದ್ದರು.
ಹಿಮಾಚಲ ಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಂದಿನ ಚುನಾವಣೆಗಳು ಯಾವಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಕಂಡಿದ್ದರೆ, ಈ ಬಾರಿ ಚುನಾವಣಾ ರಾಜಕೀಯ ಕಣಕ್ಕೆ ಆಮ್ ಆದ್ಮಿ ಪಕ್ಷ ಕೂಡಾ ಎಂಟ್ರಿ ನೀಡಿದೆ. ಆದರೆ ಹಲವಾರು ಎಎಪಿ ನಾಯಕರು ಪಕ್ಷಾಂತರ ಮಾಡಿದ ಕಾರಣ ಎಎಪಿಗೆ ಹಿನ್ನಡೆಯಾಗಿದೆ.
ಜೈ ರಾಮ್ ಠಾಕೂರ್ ನೇತೃತ್ವದಲ್ಲಿ ಹಿಮಾಚಲ ಚುನಾವಣೆ
ಇನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರನ್ನು ಪಕ್ಷವು ಬದಲಾಯಿಸುವುದಿಲ್ಲ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳು ಅವರ ನಾಯಕತ್ವದಲ್ಲಿ ಸ್ಪರ್ಧಿಸಲಿವೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ. ಜೈ ರಾಮ್ ಠಾಕೂರ್ ಬದಲಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ರಾಜ್ಯದ ಸಿಎಂ ಆಗಿ ನೇಮಿಸಲಾಗುವುದು ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ನಡ್ಡಾ ಈ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಠಾಕೂರ್ ಅವರು ಕೆಲಸ ಮಾಡುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಅವರು ಅದನ್ನು ಮುಂದುವರಿಸುತ್ತಾರೆ ಎಂದು ನಡ್ಡಾ ಹೇಳಿದರು. ಹಾಗೆಯೇ ರಾಜ್ಯದ ಯಾವುದೇ ಸಚಿವರನ್ನು ಬದಲಾಯಿಸುವುದಿಲ್ಲ. ಆದರೆ ಶೇ 10ರಿಂದ 15ರಷ್ಟು ಹಾಲಿ ಬಿಜೆಪಿ ಶಾಸಕರಿಗೆ ಚುನಾವಣೆಯಲ್ಲಿ ಟಿಕೆಟ್ ಸಿಗದಿರಬಹುದು ಎಂದು ಕೂಡಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದಾರೆ. ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹತ್ತರಿಂದ 15 ರಷ್ಟು ಬಿಜೆಪಿ ಶಾಸಕರಿಗೆ ಟಿಕೆಟ್ ಸಿಗಲಿಲ್ಲ. ಹಿಮಾಚಲ ಪ್ರದೇಶದಲ್ಲಿಯೂ ಹೀಗೆಯೇ ಆಗುವ ಸಾಧ್ಯತೆ ಇದೆ ಎಂದರು.