ತೃತೀಯ ರಂಗಕ್ಕೆ ಸಿಕ್ಕ ಅನಿರೀಕ್ಷಿತ ಬೆಂಬಲ
ನವದೆಹಲಿ, ಮೇ 12: ಯುಪಿಎ ಮತ್ತು NDA ಹೊರತಾಗಿ ತೃತೀಯ ರಂಗ ಸರಕಾರದ ಕನಸು ಕಾಣುತ್ತಿರುವ ಮುಖಂಡರಿಗೆ ಅನಿರೀಕ್ಷಿತ ಬೆಂಬಲವೊಂದು ವ್ಯಕ್ತವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ತೃತೀಯ ರಂಗಕ್ಕೆ ವಿಷಯಾಧಾರಿತ ಬೆಂಬಲ ನೀಡುವುದನ್ನು ನಾವು ತಳ್ಳಿ ಹಾಕುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಮೇ ಹದಿನಾರರ ಚುನಾವಣಾ ಫಲಿತಾಂಶದ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ತೆಗೆದುಕೊಳ್ಳ ಬೇಕಾದ ಕ್ರಮದ ಬಗ್ಗೆ ಸಭೆ ಸೇರಲಿದ್ದೇವೆ. ನಮ್ಮ ಉದ್ದೇಶ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ದೂರವಿಡುವುದು.
ಅದಕ್ಕಾಗಿ, ತೃತೀಯ ರಂಗದ ಸರಕಾರಕ್ಕೆ ನಮ್ಮ ಸಂಸದರ ಅವಶ್ಯಕತೆ ಬಿದ್ದಲ್ಲಿ ಬೆಂಬಲ ನೀಡುವ ಬಗ್ಗೆ ಚರ್ಚಿಸುವುದಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಗೋಪಲ್ ರೈ ಹೇಳಿದ್ದಾರೆ. (ಗೌಡ್ರು ಮತ್ತೆ ಪ್ರಧಾನಿಯಾಗುವ ಸಾಧ್ಯತೆ)
ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟಕ್ಕೆ ಈ ಬಾರಿ ಜನಬೆಂಬಲ ವ್ಯಕ್ತವಾಗುವ ಸಾಧ್ಯತೆ ಕಮ್ಮಿ. ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಕಳೆದ ಎರಡು ವಾರದಿಂದ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಫಲಿತಾಂಶ ನಂತರದ ಸಭೆಯಲ್ಲಿ ತೃತೀಯ ರಂಗಕ್ಕೆ ಬೆಂಬಲ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈ ಹೇಳಿದ್ದಾರೆ.
ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಅವರಿಗೆ ನಿಕಟವರ್ತಿಯಾಗಿರುವ ರೈ, ನಮ್ಮ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಜನಬೆಂಬಲ ಸಿಗದಿದ್ದರೂ ನಾವು ಜನಪರ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಪಂಜಾಬ್, ಹರ್ಯಾಣ ಮತ್ತು ದೆಹಲಿ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಉತ್ತಮ ಸಾಧನೆ ಮಾಡಲಿದ್ದೇವೆ. ವಾರಣಾಸಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಯ ನಿಶ್ಚಿತ. ಕೇಜ್ರಿವಾಲ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಎನ್ನುವ ಭಾವನೆ ಈಗಾಗಲೇ ವಾರಣಾಸಿ ಜನತೆಯಲ್ಲಿದೆ ಎಂದು ರೈ ಭರವಸೆಯ ಮಾತನ್ನಾಡಿದ್ದಾರೆ.
ಕೇಜ್ರಿವಾಲ್ ಸ್ಪಷ್ಟನೆ: ನಮ್ಮ ಪಕ್ಷ ತೃತೀಯ ರಂಗಕ್ಕೆ ಸೇರುವ ಸುದ್ದಿ ಸತ್ಯಕ್ಕೆ ದೂರವಾದುದು. ಆದರೆ ಒಂದು ವೇಳೆ ತೃತೀಯ ರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿಷಯಾಧಾರಿತ ಬೆಂಬಲ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ.