ಸಬ್ಸಿಡಿ ಸೀಮೆಎಣ್ಣೆ , ಅಟಲ್ ಪಿಂಚಣಿ ಸವಲತ್ತುಗಳಿಗೆ ಆಧಾರ್ ಕಡ್ಡಾಯ
ನವದೆಹಲಿ, ಜೂನ್ 04 : ಸಬ್ಸಿಡಿ ಸೀಮೆಎಣ್ಣೆ ಹಾಗೂ ಅಟಲ್ ಪಿಂಚಣಿ ಯೋಜನೆ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಎರಡೂ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಕಾರ್ಡ್ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೀಮೆಎಣ್ಣೆ ಸಬ್ಸಿಡಿಗಾಗಿ ಕಾರ್ಡ್ ಹೊಂದಲು ಸೆಪ್ಟೆಂಬರ್ 30 ಕೊನೆ ದಿನವಾಗಿದೆ. ಹಾಗೂ ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳನ್ನು ಪಡೆಯಲು ಆಧಾರ್ ಹೊಂದಲು ಅಂತಿಮ ದಿನವನ್ನು ಜೂನ್ 15ಕ್ಕೆ ನಿಗದಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಐಟಿ ರಿಟರ್ನ್ಸ್, ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ]
ಸೀಮೆಎಣ್ಣೆ ಸಬ್ಸಿಡಿ ಪಡೆಯಲು ಅಥವಾ ಪಿಂಚಣಿ ಯೋಜನೆಯ ಸವಲತ್ತುಗಳನ್ನು ಹೊಂದಲು ಇನ್ನು ಮುಂದೆ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯವಾಗಿರುತ್ತದೆ.
ಕಾರ್ಡ್ ಹೊಂದಿಲ್ಲದವರು ಈ ಮೇಲೆ ನಿಗದಿಗೊಳಿಸಲಾದ ದಿನಾಂಕದೊಳಗೆ ಅವುಗಳನ್ನು ಪಡೆಯಬಹುದು ಅಥವಾ ಹೊಸದಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಸೂಚನೆಯಲ್ಲಿ ತಿಳಿಸಿದೆ.
ಆಧಾರ್ ಕಾರ್ಡ್ ಲಭಿಸುವ ವರೆಗೆ ಪಡಿತರ ಚೀಟಿ, ಡ್ರೈವಿಂಗ್ ಲೈಸನ್ಸ್, ಮತದಾರರ ಗುರುತಿನ ಚೀಟಿ, ಕಿಸಾನ್ ಭಾವಚಿತ್ರದೊಂದಿಗೆ ಪಾಸ್ಬುಕ್, ಉದ್ಯೋಗ ಚೀಟಿ ಇವುಗಳನ್ನು ಮಹಾತ್ಮ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್ ಇಜಿಎಸ್) ಅಡಿ ನೀಡಲಾಗುತ್ತದೆ.
ಹಾಗೂ ಪತ್ರಾಂಕಿತ (ಗೆಜೆಟೆಡ್) ಅಧಿಕಾರಿ ಅಥವಾ ತಹಸೀಲ್ದಾರ್ ನೀಡುವ ಪ್ರಮಾಣ ಪತ್ರವನ್ನು ಈ ಸೌಲಭ್ಯಗಳಿಗಾಗಿ ಗುರುತು ದೃಢೀಕರಣವಾಗಿ ಪರಿಗಣಿಸಲಾಗುವುದು.
ಸಹಾಯಧನ ಸೋರಿಕೆಯನ್ನು ತಡೆಗಟ್ಟಲು ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯ-ಸವಲತ್ತುಗಳು ದಕ್ಕುವಂತಾಗಲು ಈ ಎರಡು ಯೋಜನೆಗಳಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.