ಬಿಸಿಯೂಟದ ಮಕ್ಕಳು ಆಧಾರ್ ಕಾರ್ಡ್ ಹೊಂದಿರಲೇಬೇಕಂತೆ!
ನವದೆಹಲಿ, ಮಾರ್ಚ್ 04 : ಇನ್ನು ನಾಲ್ಕು ತಿಂಗಳಲ್ಲಿ, ಅಂದರೆ ಜೂನ್ ಮುಗಿಯುವುದರೊಳಗೆ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವ ಸರಕಾರಿ ಶಾಲಾ ಮಕ್ಕಳು ಆಧಾರ್ ಕಾರ್ಡ್ ಪಡೆದಿರಬೇಕು ಅಥವಾ ಆಧಾರ್ ಕಾರ್ಡಿಗೆ ಅರ್ಜಿ ಸಲ್ಲಿಸಿರಬೇಕು. ಇಲ್ಲದಿದ್ದರೆ, ಹದಿಮೂರು ಚಿಲ್ರೆ ಕೋಟಿ ಮಕ್ಕಳ ಹೊಟ್ಟೆ ತುಂಬುವುದಿಲ್ಲ!
ಇಂಥದೊಂದು ಮತಿಗೇಡಿತನದ ಸುತ್ತೋಲೆಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಳೆದ ವಾರ ಹೊರಡಿಸಿದೆ. ಮಕ್ಕಳು ಮಾತ್ರವಲ್ಲ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಬಡಿಸುವ ಅಡುಗೆಯವರು, ಸಹಾಯಕರು ಕೂಡ ಅಷ್ಟರೊಳಗಾಗಿ ಆಧಾರ್ ಕಾರ್ಡನ್ನು ಪಡೆದಿರಬೇಕು.[ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗಿಗೆ ಆಧಾರ್ ಕಡ್ದಾಯ!]
ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ಮತ್ತು ಆಸ್ಸಾಂ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲಿ ಈ ಆದೇಶ ಕಡ್ಡಾಯವಾಗಿ ಜಾರಿಗೆ ಬರಲಿದೆ. ಬಡಮಕ್ಕಳ ಹೊಟ್ಟೆಗೆ ಹೊಡೆಯುತ್ತಿರುವ ಇಂಥ ಸಂಸದರಿಗೆ, ಅಧಿಕಾರಿಗಳಿಗೆ ಏನನ್ನುತ್ತೀರಿ? ಈ ಇಲಾಖೆಯ ಸನ್ಮಾನ್ಯ ಸಚಿವರು ಪ್ರಕಾಶ್ ಜಾವಡೇಕರ್ ಅವರು.
ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶದಲ್ಲಿರುವ ಬಡ ಮಕ್ಕಳನ್ನು ಶಾಲೆಗೆ ತರಬೇಕು ಮತ್ತು ಅವರಿಗೆ ಪೌಷ್ಟಿಕಾಂಶವುಳ್ಳ ಆಹಾರ ಈ ಮಕ್ಕಳಿಗೆ ಸಿಗಬೇಕು ಎಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಉದ್ದೇಶವೇನೋ ಸರಿಯಾಗಿದೆ. ಆದರೆ...[ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!]
ಈ ಬಿಸಿಯೂಟ ಮಾಡಬೇಕಾದರೆ ಬಡ ಮಕ್ಕಳು ಆಧಾರ್ ಕಾರ್ಡನ್ನು ಎಲ್ಲಿಂದ ತರಬೇಕು? ಈ ಕಾರ್ಡಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಆಧಾರ್ ಕಾರ್ಡ್ ಪಡೆಯಲು ಸಹಾಯ ಮಾಡುವವರು ಯಾರು? ಮಕ್ಕಳ ಪೋಷಕರು ಅನಕ್ಷರಸ್ಥರಾಗಿದ್ದರೆ ಏನು ಮಾಡುವುದು? ಅಥವಾ ಸರಕಾರವೇ ಅವರಿದ್ದಲ್ಲಿ ಹೋಗಿ ಆಧಾರ್ ಕಾರ್ಡ್ ಒದಗಿಸುತ್ತದೆಯಾ?[ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲದಿದ್ರೂ ಆಧಾರ್ ಆಧಾರಿತ ವ್ಯವಹಾರ ಸಾಧ್ಯ]
ಆಧಾರ್ ನೊಂದಿಗೆ ಹಲವಾರು ಸರಕಾರಿ ಯೋಜನೆಗಳು ಕೊಂಡಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನೂ ಆಧಾರ್ ಗೆ ಲಿಂಕ್ ಮಾಡಲು ಮಾನವ ಸಂಪನ್ಮೂಲ ಇಲಾಖೆ ಉದ್ದೇಶಿಸಿರುವುದು ಎಷ್ಟು ಸರಿ? ಇದರಿಂದ ಆಗುವ ತೊಂದರೆ ಎಷ್ಟೆಂದು ಇಲಾಖೆ ಯೋಚಿಸಿದೆಯೆ?