ಆಧಾರ್ ನಿಂದ ದೇಶದ ಭದ್ರತೆಗೆ ಕುತ್ತು: ಸುಬ್ರಹ್ಮಣ್ಯಂ ಸ್ವಾಮಿ ಭಿನ್ನರಾಗ
ನವದೆಹಲಿ, ಅಕ್ಟೋಬರ್ 31: ಎಲ್ಲಾ ಸೇವೆಗಳಿಗೆ ಕೇಂದ್ರ ಸರಕಾರ ಆಧಾರ್ ಕಡ್ಡಾಯ ಮಾಡುತ್ತಿದ್ದರೆ ಅತ್ತ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಭಿನ್ನರಾಗ ಹಾಡಿದ್ದಾರೆ. ಆಧಾರ್ ಕಾರ್ಡ್ ದೇಶದ ಭದ್ರತೆಗೆ ಕಂಟಕವಾಗಿದ್ದು, ಆಧಾರ್ ರದ್ದು ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಸುಪ್ರಿಂ ಕೋರ್ಟ್ ಆಧಾರ್ ಕಾರ್ಡ್ ರದ್ದು ಪಡಿಸುವ ಬಗ್ಗೆ ತಮಗೆ ನಂಬಿಕೆ ಇದೆ ಎಂದೂ ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸೋಮವಾರವಷ್ಟೇ ಸುಪ್ರಿಂ ಕೋರ್ಟ್ ಆಧಾರ್ ಕಾರ್ಡನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಸಂಬಂಧ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ನಾಲ್ಕು ವಾರಗಳ ಸಮಯಾವಕಾಶ ನೀಡಿದೆ. ಮೊಬೈಲ್ ಕಂಪೆನಿಗಳಿಗೂ ಈ ಸಂಬಂಧ ನೊಟೀಸ್ ನೀಡಿದೆ.
ಇನ್ನೊಂದೆಡೆ ಖಾಸಗಿತನ ಮೂಲಭೂತ ಹಕ್ಕು ಎಂದು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಇತ್ತೀಚೆಗೆ ತೀರ್ಪು ನೀಡಿತ್ತು. ಇದಾದ ಬಳಿಕ ಆಧಾರ್ನ ಸಿಂಧುತ್ವ ಪ್ರಶ್ನಿಸುತ್ತಿರುವ ಅರ್ಜಿದಾರರಲ್ಲಿ ಹಲವರು ಆಧಾರ್ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವಾದಿಸುತ್ತಿದ್ದಾರೆ.
I am writing a letter soon to PM detailing how compulsory Aadhar is a threat to our national security. SC will I am sure strike it down.
— Subramanian Swamy (@Swamy39) October 31, 2017
ಇದೀಗ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ನೋಂದಣಿ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಗೆ ಸಂವಿಧಾನ ಪೀಠ ರಚಿಸುವುದಾಗಿಯೂ ಸುಪ್ರೀಂ ಕೋರ್ಟ್ ಹೇಳಿದೆ.