ವಾಟ್ಸಾಪ್ ನಲ್ಲಿ ಬಂದ ಒಂದು ವದಂತಿಗೆ ಬಲಿಯಾಗಿದ್ದು 29 ಪ್ರಾಣ
Recommended Video
ಒಂದು ವದಂತಿ, ವಾಟ್ಸಾಪ್ ನಲ್ಲಿ ಹರಿದಾಡಿದ ಒಂದು ವದಂತಿ ಕಳೆದ ಮೇನಿಂದ ಈಚೆಗೆ 29 ಪ್ರಾಣಗಳನ್ನು ಬಲಿ ತೆಗೆದುಕೊಂಡಿದೆ. ಇದರಲ್ಲಿ ಹಿಂದೂ- ಮುಸ್ಲಿಂ ಜಗಳವಿಲ್ಲ. ರಾಜಕೀಯ ಆಯಾಮ ಇಲ್ಲ. ಜಾತಿಯಂತೂ ಕಾರಣ ಅಲ್ಲವೇ ಅಲ್ಲ. ಭಾರತ- ಪಾಕಿಸ್ತಾನ, ಬಿಜೆಪಿ ವರ್ಸಸ್ ಕಾಂಗ್ರೆಸ್, ಆರೆಸ್ಸೆಸ್, ಕಾಶ್ಮೀರ...ಉಹುಂ, ಇವು ಯಾವುವೂ ಖಂಡಿತಾ ಅಲ್ಲ.
ಉದ್ವಿಗ್ನಗೊಂಡ ಸಾರ್ವಜನಿಕರ ಗುಂಪಿಗೆ ಅಮಾಯಕರು ಬಲಿಯಾಗುತ್ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ದೊಡ್ಡ ಸುದ್ದಿ ಆಗುವವರೆಗೆ ಎಷ್ಟು ಮಂದಿ ಬಲಿ ಆಗಬೇಕೋ? ಇದೇ ರೀತಿ ಘಟನೆಗಳು ನಡೆಯುತ್ತಾ ಹೋದರೆ ಮುಂದಿನ ಎರಡು- ಮೂರು ತಿಂಗಳಲ್ಲಿ ಸಾವಿನ ಸಂಖ್ಯೆ ನೂರು ಕೂಡ ಮುಟ್ಟಬಹುದು.
ಮಹಾರಾಷ್ಟ್ರದಲ್ಲಿ ಮಕ್ಕಳ ಕಳ್ಳರೆಂದು ಐವರ ಭೀಕರ ಹತ್ಯೆ
ಮಕ್ಕಳ ಕಳ್ಳರ ಗುಂಪಿದೆ ಎಂಬ ವದಂತಿ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಅವರು ಬರ್ತಾರೆ. ನಿಮ್ಮ ಮಕ್ಕಳನ್ನು ಎತ್ತಿಕೊಂಡು ಓಡಿಹೋಗ್ತಾರೆ. ಈ ರೀತಿಯಾದ ಒಂದು ವದಂತಿಯನ್ನು ತಮಿಳುನಾಡಿನಿಂದ ತ್ರಿಪುರಾದವರೆಗೆ ಹರಿಬಿಟ್ಟಿದ್ದು, ದೇಶದಾದ್ಯಂತ ಕಾಳ್ಗಿಚ್ಚಿನಂತೆ ಈ ವದಂತಿ ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವಾಟ್ಸಾಪ್.
ಕಡಿಮೆ ಬೆಲೆಯ ಸ್ಮಾರ್ಟ್ ಫೋನ್, ಕಡಿಮೆ ಬೆಲೆಗೆ ಇಂಟರ್ ನೆಟ್ ಇವೆಲ್ಲ ಕೋಟ್ಯಂತರ ಭಾರತೀಯರನ್ನು ಸುಳ್ಳು ಸುದ್ದಿಯ ಜಗತ್ತಿಗೆ ಪರಿಚಯಿಸಿದೆ. "ನಮ್ಮ ರಾಜ್ಯಕ್ಕೆ ಮಕ್ಕಳನ್ನು ಕದಿಯುವ ನೂರಾರು ಮಂದಿ ಬಂದಿದ್ದಾರೆ" ಅಂತಲೇ ಆ ಸಂದೇಶ ಶುರು ಆಗುತ್ತದೆ. ಹೊರಗಿನವರ ಬಗ್ಗೆ ಎಚ್ಚರವಿರಿ. ಮಕ್ಕಳನ್ನು ಕದಿಯುವವರು ದೇಹದ ಭಾಗಗಳನ್ನು ಮಾರುವಂಥವರು...ಹೀಗೆ ಎಚ್ಚರಿಕೆ ಮುಂದುವರಿಯುತ್ತದೆ.
ಆ ಸಂದೇಶದ ಜತೆಗೆ ಸಿಸಿಟಿವಿ ಫೂಟೇಜು ಇರುತ್ತದೆ. ಮೋಟಾರ್ ಸೈಕಲ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯವದು. ಆ ವಿಡಿಯೋ ಪಾಕಿಸ್ತಾನದ ಕರಾಚಿಯದು. ಮಕ್ಕಳ ಅಪಹರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತೆಗೆದ ವಿಡಿಯೋ ಅದು. ವಿಡಿಯೋದ ಕೊನೆ ಭಾಗವನ್ನು ಎಡಿಟ್ ಮಾಡಿ, ಯಾರೋ ಭಾರತದಾದ್ಯಂತ ಹರಿಬಿಟ್ಟಿದ್ದಾರೆ.
ಮಕ್ಕಳ ಕಳ್ಳನೆಂದು ಥಳಿಸಿ ಕೊಂದ ಸ್ಥಳೀಯರು: 9 ಮಂದಿ ಬಂಧನ
ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಅಂತಲೇ ತ್ರಿಪುರಾ ಸರಕಾರ ಒಬ್ಬ ವ್ಯಕ್ತಿಯನ್ನು ನೇಮಿಸಿ, ಸಾರ್ವಜನಿಕ ಸ್ಥಳದಲ್ಲಿ ಅರಿವು ಮೂಡಿಸಲು ಯತ್ನಿಸಿತು. ಆದರೆ ಆತ ಈ ಬಗ್ಗೆ ಅರಿವು ಮೂಡಿಸಲು ಹೋದಾಗ ಸಾರ್ವಜನಿಕರು ಆತನ ಮೇಲೆ ಮುಗಿಬಿದ್ದರು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಅಂತ. ಆದರೂ ಪ್ರಯೋಜನವಾಗಿಲ್ಲ.
ಜಾರ್ಖಂಡ್, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್, ತ್ರಿಪುರಾ ಹೀಗೆ ನಾನಾ ರಾಜ್ಯಗಳಲ್ಲಿ ಸಾರ್ವಜನಿಕರ ಗುಮಾನಿಗೆ ಸಾವನ್ನಪ್ಪಿದ್ದಾರೆ. ಇನ್ನು ಹಲ್ಲೆಗೊಳಗಾದ ಪ್ರಕರಣಗಳಂತೂ ಬೇಕಾದಷ್ಟಿವೆ.