12 ಮಂದಿಯ ಜೀವ ಉಳಿಸಿತು ಒಂದೇ ಒಂದು ಫೋನ್ ಕರೆ
ಜೋಶಿಮಠ್, ಫೆಬ್ರವರಿ 8: ಉತ್ತರಾಖಂಡದಲ್ಲಿ ಉಂಟಾದ ಹಿಮನದಿ ಸ್ಫೋಟದ ಅನಾಹುತದ ಅಂದಾಜು ಮಾಡಲು ಇನ್ನೂ ಹಲವು ದಿನಗಳು ಬೇಕಾಗಬಹುದು. ಕಡಿದಾದ ಬೆಟ್ಟಗಳು, ಸುರಂಗಗಳಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ. ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಅನೇಕ ರೋಚಕ ಕಥೆಗಳು ಹೊರಬರುತ್ತಿವೆ.
ಸುರಂಗವೊಂದರಲ್ಲಿ ಸಿಲುಕಿದ್ದ ಕಾರ್ಮಿಕರಲ್ಲಿ ತಾವು ಬದುಕಿ ಉಳಿಯುವ ಆಸೆ ಕಮರತೊಡಗಿತ್ತು. ಹೊರಗೆ ಏನಾಗುತ್ತಿದೆ ಎನ್ನುವುದೇ ಗೊತ್ತಿರಲಿಲ್ಲ. ಅಷ್ಟೆಲ್ಲ ಸಂಕಷ್ಟಗಳ ನಡುವೆಯೂ ಒಬ್ಬ ಕಾರ್ಮಿಕನ ಮೊಬೈಲ್ಗೆ ನೆಟ್ವರ್ಕ್ ಸಿಕ್ಕಿದ್ದು, 12 ಜನರ ಜೀವ ಉಳಿಸಲು ನೆರವಾಯಿತು.
ಉತ್ತರಾಖಂಡ: ಬೃಹತ್ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭ
ಉತ್ತರಾಖಂಡದ ಚಮೋಲಿಯ ತಪೋವನದ ನೆಲಮಾಳಿಗೆ ಸುರಂಗದಲ್ಲಿ 12 ಮಂದಿ ಕಾರ್ಮಿಕರನ್ನು ರಕ್ಷಿಸಿದ ರೋಮಾಂಚನಕಾರಿ ಕಥೆ ಇದು. ಮುಂದೆ ಓದಿ.
ಸುರಂಗದ ಹೊರಗೆ ಕಿರುಚಾಟ
'ಸುರಂಗದ ಹೊರಗೆ ಜನರ ಕಿರುಚಾಟ ಜೋರಾಗಿ ಕೇಳಿಸುತ್ತಿತ್ತು. ನಾವು ಸುರಂಗದಿಂದ ಹೊರಗೆ ಬರಬೇಕು ಎಂದು ಆಲೋಚಿಸುವಷ್ಟರಲ್ಲಿಯೇ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದ ನೀರು ಮತ್ತು ಕೆಸರು ನಮ್ಮ ಮೇಲೆ ನುಗ್ಗಿತು' ಎಂದು ತಪೋವನದ ಪವರ್ ಪ್ರಾಜೆಕ್ಟ್ ಕೆಲಸಗಾರ ಲಾಲ್ ಬಹದ್ದೂರ್ ತಿಳಿಸಿದ್ದಾನೆ.
ಲಾಲ್ ಬಹದ್ದೂರ್ ಮತ್ತು ಆತನ 11 ಸಹೋದ್ಯೋಗಿಗಳನ್ನು ಇಂಡೋ-ಟೆಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸೋಮವಾರ ಸಂಜೆ ಚಮೋಲಿ ಜಿಲ್ಲೆಯ ನೆಲಮಾಳಿಗೆ ಸುರಂಗದಿಂದ ರಕ್ಷಿಸಿದ್ದಾರೆ.
|
ಸತತ ಏಳು ಗಂಟೆ ಕಾರ್ಯಾಚರಣೆ
ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸುಮಾರು ಏಳು ಗಂಟೆಗಳ ಕಾಲ ಸುರಂಗದಲ್ಲಿಯೇ ಉಳಿದುಕೊಂಡು ಕೊನೆಯ ವ್ಯಕ್ತಿಯ ರಕ್ಷಣೆಯವರೆಗೂ ಕಾರ್ಯಾಚರಣೆ ನಡೆಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೋವನ್ನು ಐಟಿಬಿಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಜೀವ ಉಳಿಸಿದ ನೆಟ್ವರ್ಕ್
ಸಂತ್ರಸ್ತರನ್ನು ಘಟನಾ ಸ್ಥಳದಿಂದ 25 ಕಿಮೀ ದೂರದಲ್ಲಿರುವ ಜೋಶಿಮಠದ ಐಟಿಬಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. 'ನೀರು ಒಳಗೆ ನುಗ್ಗಿದಾಗ ನಾವು ಸುರಂಗದ ಸುಮಾರು 300 ಮೀಟರ್ ಒಳಭಾಗದಲ್ಲಿದ್ದೆವು. ಅಲ್ಲಿ ಸಿಲುಕಿದ್ದೆವು. ಐಟಿಬಿಪಿ ನಮ್ಮನ್ನು ರಕ್ಷಿಸಿತು' ಎಂದು ನೇಪಾಳ ಮೂಲದ ಬಸಂತ್ ತಿಳಿಸಿದರು.
'ನಾವು ಬದುಕುವ ಭರವಸೆಯನ್ನೆ ಕಳೆದುಕೊಂಡಿದ್ದೆವು. ಆದರೆ ಸ್ವಲ್ಪ ಸಮಯದ ಬಳಿಕ ಬೆಳಕು ಹಾಗೂ ಉಸಿರಾಡಲು ಗಾಳಿ ಸಿಕ್ಕಂತಾಯಿತು. ಇದ್ದಕ್ಕಿದ್ದಂತೆ ನಮ್ಮಲ್ಲಿ ಒಬ್ಬರ ಮೊಬೈಲ್ನಲ್ಲಿ ನೆಟ್ವರ್ಕ್ ಕಂಡುಬಂತು. ಕೂಡಲೇ ಆತ ನಮ್ಮ ಜನರಲ್ ಮ್ಯಾನೇಜರ್ಗೆ ಕರೆ ಮಾಡಿ ನಮ್ಮ ಸ್ಥಿತಿ ವಿವರಿಸಿದ. ಇಲ್ಲದಿದ್ದರೆ ಆ ಕೆಸರಿನ ನಡುವೆ ಹಾಗೋ ಹೀಗೋ ಸುರಂಗದ ತುದಿಗೆ ಬರುವುದೊಂದೇ ನಮಗೆ ಇದ್ದ ದಾರಿ' ಎಂದು ಆಸ್ಪತ್ರೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ತಿಳಿಸಿದ್ದಾನೆ.
ಉತ್ತರಾಖಂಡ ಹಿಮನದಿ ಸ್ಫೋಟ; ಭೌಗೋಳಿಕ ತಜ್ಞರ ತಂಡದಿಂದ ಪರಿಶೀಲನೆ
ಹಗ್ಗ, ಹಲಗೆಗಳಿಂದ ರಕ್ಷಣೆ
ಜನರಲ್ ಮ್ಯಾನೇಜರ್ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದರು. ಐಟಿಬಿಪಿ ತಂಡಗಳು ಹಗ್ಗಗಳು, ಹಲಗೆ, ಸಲಿಕೆಗಳೊಂದಿಗೆ ಸ್ಥಳಕ್ಕೆ ತೆರಳಿ ಅವುಗಳನ್ನು ಸುರಂಗದೊಳಗೆ ಇಳಿಸಿದರು. ಬಳಿಕ ಒಬ್ಬೊಬ್ಬರನ್ನಾಗಿಯೇ ನಿಧಾನವಾಗಿ ಹೊರಗೆ ತೆಗೆದರು.
ಐಟಿಬಿಪಿಗೆ ಕೃತಜ್ಞತೆ
'ರಾಡ್ಗಳನ್ನು ಹಿಡಿದು ನಾವು ಸುರಂಗದ ಒಳಗಿನಿಂದ ಅರ್ಧಭಾಗದಷ್ಟು ದೂರ ಹತ್ತಿಬಂದಿದ್ದೆವು. ಆದರೆ ದಪ್ಪನೆಯ ಕೆಸರು ಎದುರಾಗಿ ಸಿಕ್ಕಿಬಿದ್ದೆವು. ನಮ್ಮನ್ನು ರಕ್ಷಿಸಿದ್ದಕ್ಕಾಗಿ ಐಟಿಬಿಪಿ ಸಿಬ್ಬಂದಿಗೆ ಕೃತಜ್ಞರಾಗಿರುತ್ತೇವೆ' ಎಂದು ಜೋಶಿಮಠದ ನಿವಾಸಿ ವಿನೋದ್ ಸಿಂಗ್ ಪವಾರ್ ತಿಳಿಸಿದರು.
ಉತ್ತರಾಖಂಡ ಹಿಮನದಿ ಸ್ಫೋಟ; ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿದ್ದರ ಫಲ...