ಎರಡು ದಿನದ ಮುದ್ದು ಕಂದಮ್ಮನನ್ನು ಬಲಿ ತೆಗೆದುಕೊಂಡ ಡೆಂಗ್ಯೂ
ಕೊಯಿಮತ್ತೂರು, ಜುಲೈ 10: ಆಗಷ್ಟೇ ಕಣ್ಣು ಬಿಟ್ಟು ಭೂಮಿಗೆ ಬಂದಿದ್ದ ಎರಡು ದಿನದ ಮಗುವೊಂದು ಡೆಂಗ್ಯೂ ರೋಗದಿಂದ ಅಸುನೀಗಿದ ಕರಳು ಕಿವುಚುವ ಘಟನೆ ತಮಿಳುನಾಡಿನ ಕೋಯಿಮತ್ತೂರಿನಲ್ಲಿ ನಡೆದಿದೆ.
ಕರ್ನಾಟಕದಲ್ಲಿ ಸಾವಿನ ಕಹಳೆ ಊದಿದ ಡೆಂಗ್ಯೂ: ಮುಂಜಾಗ್ರತೆ ಏನು?
ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಲೌರ್ಥ್ ಮೇರಿ ಎಂಬ ಗರ್ಭಿಣಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ ಆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಲ್ಲದಿದ್ದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಸೂಚಿಸಿದ್ದರು.
ಅದರಂತೆಯೇ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ರವಾನಿಸಲಾಯಿತು. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಮಹಿಳೆ ಗಂಡು ಮಗುವಿಗೆ ಜನ್ಮವಿತ್ತರು. ಆದರೆ ದುರದೃಷ್ಣವಶಾತ್ ಆ ಮಗುವಿಗೂ ಡೆಂಗ್ಯೂ ಸೋಂಕು ತಗುಲಿತ್ತು.
ಅವರ ಬಳಿ ಹೆಚ್ಚಿನ ಚಿಕಿತ್ಸೆಗೆ ಹಣವಿಲ್ಲ ಎಂಬ ಕಾರಣಕ್ಕೆ, ಡೆಂಗ್ಯೂದಿಂದ ಬಳಲುತ್ತಿದ್ದ ತಾಯಿ ಮತ್ತು ಆಗಷ್ಟೇ ಜನಿಸಿದ್ದ ಆ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸುವಂತೆ ಖಾಸಗಿ ಆಸ್ಪತ್ರೆಯ ವೈದ್ಯರಿಂದ ಒತ್ತಡ ಬಂತು.
ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?
ಹೀಗೇ ಅಲ್ಲಿ-ಇಲ್ಲಿ, ಇಲ್ಲಿ-ಅಲ್ಲಿ ಎಂಬ ವೈದ್ಯರ ಬೇಜವಾಬ್ದಾರಿ ಅಮಾನವೀಯ ವರ್ತನೆಯಿಂದಾಗಿ ತಾಯಿ ಮತ್ತು ಮಗು ಇಬ್ಬರೂ ಅಸುನೀಗಿದ್ದಾರೆ.
ಅಷ್ಟೇ ಅಲ್ಲ, ಶವಾಗಾರದ ಎದುರಲ್ಲಿ ಮಗುವಿನ ಶವವನ್ನು 6 ಗಂಟೆಗಳ ಕಾಲ ಇಟ್ಟು, ಮರಣೋತ್ತರ ಪರೀಕ್ಷೆಗೂ ಕೊಂಡೊಯ್ಯದೆ ಆಸ್ಪತ್ರೆ ಮತ್ತಷ್ಟು ಬೇಜವಾಬ್ದಾರಿತನ ಮೆರೆದಿದ್ದು, ಸಾವಿಗೀಡಾದ ಮಹಿಳೆಯ ಕುಟುಂಬಸ್ಥರು, ಬಂಧುಗಳು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.