ಒಮಾನ್ ರಾಜನಿಗಾಗಿ ಕರ್ನಾಟಕ ಸ್ವಾಮೀಜಿ ಹೋಮ
ಒಮನ್, ನ. 15: ಕಟ್ಟಾ ಇಸ್ಲಾಂ ರಾಷ್ಟ್ರಗಳಲ್ಲಿ ಇತರ ಧರ್ಮಗಳ ಪೂಜೆಯನ್ನು ಪ್ರತಿಬಂಧಿಸಲಾಗಿರುತ್ತದೆ. ಆದರೆ, ಒಮಾನ್ ಎಂಬ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಅಲ್ಲಿಯ ದೊರೆಯ ಶ್ರೇಯಸ್ಸಿಗಾಗಿ ಯಜ್ಞ, ಯಾಗ ನಡೆಸಲು ಪಂಡಿತರನ್ನು ಕರೆಸಿದೆ ಎಂದರೆ ನಂಬುತ್ತೀರಾ.
ಹೌದು, ಒಮಾನ್ ಎಂಬ ಕಟ್ಟರ್ ಮುಸ್ಲಿಂ ರಾಷ್ಟ್ರದ ಮಸ್ಕತ್ ನಗರದಲ್ಲಿ ಅಲ್ಲಿ ಸರ್ಕಾರದ ಆಹ್ವಾನದ ಮೇರೆಗೆ ಕರ್ನಾಟಕದ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕದಿಂದ ವೇದ ಪಂಡಿತರು ತೆರಳಿ ಐದು ದಿನಗಳ ಯಾಗ ಪೂರೈಸಿದ್ದಾರೆ.
ನವೆಂಬರ್ 9ರಂದು ಆರಂಭವಾಗಿದ್ದ ಯಾಗ 13ರಂದು ಮುಗಿದಿದೆ. ಐದು ದಿನಗಳ ಕಾಲ ನಿರಂತರವಾಗಿ, ನಿರಾತಂಕವಾಗಿ ನಡೆದಿದೆ ಎಂಬುದು ಮತ್ತೊಂದು ವಿಶೇಷ. 22 ಪಂಡಿತರ ತಂಡದಲ್ಲಿ ಹೆಚ್ಚಿನವರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ಕೇರಳದ ವೈದಿಕರು.
ಕ್ಯಾನ್ಸರ್ ಗುಣವಾಗುತ್ತಾ?: ಒಮಾನ್ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ (72) ದೊಡ್ಡ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಮರಣಶಯ್ಯೆಯಲ್ಲಿದ್ದಾಗ ಹುಲ್ಲುಕಡ್ಡಿಯನ್ನಾದರೂ ಹಿಡಿದುಕೊಂಡು ಜೀವ ಉಳಿಸಿಕೊಳ್ಳುವ ಆಸೆ ಹುಟ್ಟುತ್ತದಂತೆ. ಇಲ್ಲಿ ಕೂಡ ಹಾಗೆಯೇ ನಡೆದಿದೆ.
ಪ್ರಸ್ತುತ ಖಬೂಸ್ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ರಯೋಜನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ದೊರೆಯ ಕುಟುಂಬದ ಆಪ್ತ ಸಲಹೆಗಾರ ಗುಜರಾತ್ ಮೂಲದ ವ್ಯಕ್ತಿಯೋರ್ವರು ನೀಡಿದ ಸಲಹೆಯಂತೆ ದೊರೆಯ ಬೆಂಬಲಿಗರು ಬೆಂಗಳೂರಿನ ಚಂದ್ರಶೇಖರ ಸ್ವಾಮೀಜಿಯನ್ನು ಸಂಪರ್ಕಿಸಿ, ಹೋಮ ಹವನ ನಡೆಸಲು ನಿರ್ಧರಿಸಿದ್ದರು.
ಅದರಂತೆ ಒಮಾನ್ ದೇಶದ ಬರ್ಖಾ ನಗರಕ್ಕೆ ತೆರಳಿದ ವೈದಿಕರು ಧನ್ವಂತರಿ ಯಜ್ಞ, ಪೂರ್ಣನವಗ್ರಹ ಶಾಂತಿ ಹೋಮ, ಮಹಾ ಮೃತ್ಯುಂಜಯ ಯಜ್ಞ, ಮಹಾವಿಷ್ಣು ಯಾಗ ನಡೆಸಿದ್ದಾರೆ. ಇದಕ್ಕಾಗಿ ರಾಜವಂಶ ನೀಡಿರುವ ದಕ್ಷಿಣೆ 30 ಲಕ್ಷ ರೂಪಾಯಿ.
ಕೊಡ್ಯಡ್ಕದಲ್ಲೂ ಪೂಜೆ ನಡೆದಿತ್ತು: ಒಮಾನ್ ದೊರೆಯ ಆರೋಗ್ಯಕ್ಕಾಗಿ ಇದೇ ವರ್ಷ ಜುಲೈ ತಿಂಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೊಡ್ಯಡ್ಕ ಹೊಸನಾಡಿನ ಶ್ರೀದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಸಲಾಗಿತ್ತು. ಬೆಳಗ್ಗೆ ಪೂಜೆ ಸಲ್ಲಿಸಿ ಮಧ್ಯಾಹ್ನ ಅನ್ನ ಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.
ಈ ಸಮಯದಲ್ಲಿಯೇ ಕರ್ನಾಟಕದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆಯು ಹೋಮ-ಹವನ ಸೇರಿದಂತೆ ಮೂಢನಂಬಿಕೆಗಳ ನಿಷೇಧಕ್ಕೆ ಆಗ್ರಹಿಸಿ ನ. 17ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. [ಮೂಢನಂಬಿಕೆ: ಮತ್ತೆ ಧರಣಿಗೆ ಪ್ರಗತಿಪರರ ಸಿದ್ಧತೆ]