ಯುಕೆಗೆ ಕಳ್ಳಸಾಗಣೆಯಾಗಿದ್ದ ಪುರಾತನ ಶಿವನ ಮೂರ್ತಿ ಭಾರತಕ್ಕೆ ವಾಪಸ್
ಲಂಡನ್, ಜುಲೈ 30: ರಾಜಸ್ಥಾನದ ದೇವಾಲಯದಿಂದ ಯುಕೆಗೆ ಕಳ್ಳ ಸಾಗಣೆಯಾಗಿದ್ದ 9ನೇ ಶತಮಾನದ ಶಿವನ ಮೂರ್ತಿ ಭಾರತಕ್ಕೆ ವಾಪಸ್ ಆಗುತ್ತಿದೆ.
'ಪ್ರತಿಹರ' ಶೈಲಿಯಲ್ಲಿ ರಚಿಸಲಾದ 4 ಅಡಿ ಎತ್ತರದ ಶಿವನ ಪ್ರತಿಮೆಯನ್ನು 1998ರಲ್ಲಿ ರಾಜಸ್ಥಾನದ ಬರೋಲಿಯ ಗೇಟೇಶ್ವರ ದೇವಸ್ಥಾನದಿಂದ ಕಳವು ಮಾಡಲಾಗಿತ್ತು. 2003ರಲ್ಲಿ ಈ ಪ್ರತಿಮೆಯನ್ನು ಯುಕೆಗೆ ಕಳ್ಳ ಸಾಗಣೆ ಮಾಡಲಾಗಿದೆ ಎಂದು ತಿಳಿದು ಬಂತು.
ಸುಳ್ಳು ಸುದ್ದಿ: ಅಯೋಧ್ಯೆಯ ರಾಮಮಂದಿರದ ಅಡಿಯಲ್ಲಿ ಟೈಂ ಕ್ಯಾಪ್ಸೂಲ್
ಇಂಗ್ಲೆಂಡ್ನ ಆಗರ್ಭ ಶ್ರೀಮಂತರು ಈ ವಿಗ್ರಹವನ್ನು ಖರೀದಿಸಿದ್ದರು. ಬಳಿಕ, ಭಾರತದ ಧಾರ್ಮಿಕ ಸಂಬಂಧದ ಬಗ್ಗೆ ತಿಳಿದ ಆ ವ್ಯಕ್ತಿ ಲಂಡನ್ನಲ್ಲಿರುವ ಭಾರತೀಯ ಹೈ ಕಮಿಷನ್ ಗೆ ಮೂರ್ತಿಯನ್ನು ಹಸ್ತಾಂತರಿಸಿದ್ದರು ಎಂದು ತಿಳಿದು ಬಂದಿದೆ. 2005ರಲ್ಲಿ ಭಾರತೀಯ ಹೈ ಕಮಿಷನ್ ಈ ಮೂರ್ತಿಯನ್ನು ಪಡೆದುಕೊಂಡಿತ್ತು.
2017ರಲ್ಲಿ, ಪುರಾತತ್ವ ಸಮೀಕ್ಷೆ (ಎಎಸ್ಐ)ಯ ಅಧಿಕಾರಿಗಳನ್ನು ಪ್ರತಿಮೆಯನ್ನು ಪರೀಕ್ಷಿಸಲು ಲಂಡನ್ಗೆ ಆಹ್ವಾನಿಸಲಾಯಿತು. ಯುಕೆಗೆ ತೆರಳಿದ್ದ ಪುರಾತತ್ವ ಅಧಿಕಾರಿಗಳು ಇದು ರಾಜಸ್ಥಾನದ ಬರೋಲಿಯ ದೇವಾಲಯದಿಂದ ಕಳವು ಮಾಡಿದ ಪ್ರತಿಮೆ ಎಂದು ದೃಢಿಪಡಿಸಿದ್ದರು. ಇದೀಗ, ಈ ಶಿವನ ವಿಗ್ರಹವನ್ನು ಭಾರತಕ್ಕೆ ತೆಗೆದುಕೊಂಡು ಬರಲಾಗುತ್ತಿದೆ.
2018ರಲ್ಲಿ, 12ನೇ ಶತಮಾನದ ಭಗವಾನ್ ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಹೈಕಮಿಷನರ್ಗೆ ಹಿಂದಿರುಗಿಸಿದರು. ಇದನ್ನು 2019ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.