ಈ 9 ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚುವರಿ ಕಡಿತ
ನವದೆಹಲಿ, ನವೆಂಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಸಿಹಿ ಸುದ್ದಿ ನೀಡಿರುವ ಒಟ್ಟು ಒಂಬತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಹೆಚ್ಚುವರಿ ಇಳಿಕೆ ಮಾಡಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಆದೇಶ ಹೊರ ಬಂದ ಒಂದು ಗಂಟೆಯಲ್ಲೇ ಬಿಜೆಪಿ ಆಡಳಿತದ ಒಟ್ಟು ಒಂಬತ್ತು ರಾಜ್ಯಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಈ ಆದೇಶವು ಇಂದಿನಿಂದಲೇ ಅಂದರೆ ನವೆಂಬರ್ 4 ರ ಗುರುವಾರದಿಂದಲೇ ಜಾರಿಗೆ ಬರಲಿದೆ.
Breaking: ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ತಲಾ 7 ರೂ ಇಳಿಕೆ
ಪ್ರಸ್ತುತ ಬಿಜೆಪಿ ಆಡಳಿತವಿರುವ ಒಂಬತ್ತು ರಾಜ್ಯಗಳಾದ ಅಸ್ಸಾಂ, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಅಧಿಕವಾಗಿ ಕಡಿತ ಮಾಡಲಾಗಿದೆ.
ಒಂಬತ್ತು ರಾಜ್ಯಗಳಲ್ಲಿ ಎಷ್ಟು ಬೆಲೆ ಇಳಿಕೆ?
ಅಸ್ಸಾಂ, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ಗೆ ತಲಾ ಏಳು ರೂಪಾಯಿಯಂತೆ ಕಡಿತ ಮಾಡಿದೆ. ಇನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದೆ. ಈ ನಡುವೆ ಉತ್ತರ ಪ್ರದೇಶ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತಲಾ 12 ರೂಪಾಯಿ ಕಡಿತ ಮಾಡಿದೆ. ಇನ್ನು ಗುಜರಾತ್ ಸರ್ಕಾರ ಕೂಡಾ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ಗೆ ತಲಾ ಏಳು ರೂಪಾಯಿಯಂತೆ ಕಡಿತ ಮಾಡಿದೆ. ಹಿಮಾಚಲ ಪ್ರದೇಶದ ಸರ್ಕಾರ ಶೀಘ್ರದಲ್ಲೇ ಎಷ್ಟು ದರ ಇಳಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ.
ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ "ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್ಗೆ ಎರಡು ರೂಪಾಯಿ ಕಡಿತ ಮಾಡಲಾಗುವುದು," ಎಂದು ತಿಳಿಸಿದ್ದಾರೆ. ಇನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ "ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡಿ ಆದೇಶವನ್ನು ಶೀಘ್ರವೇ ಘೋಷಣೆ ಮಾಡಲಿದೆ," ಎಂದು ತಿಳಿಸಿದ್ದಾರೆ.
Breaking:ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರ
ಇನ್ನು ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ತ್ರಿಪುರ ಮುಖ್ಯಮಂತ್ರಿ ಬಿಪ್ಲವ ಕುಮಾರ್ ದೇವ್, "ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಗೌರವಾನ್ವಿತ ನರೇಂದ್ರ ಮೋದಿ ಜಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ತ್ರಿಪುರ ಸರ್ಕಾರವೂ ಕೂಡಾ ನಾಳೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ ಏಳು ರೂಪಾಯಿ ಅಬಕಾರಿ ಸುಂಕವನ್ನು ಕಡಿತ ಮಾಡಲು ನಿರ್ಧಾರ ಮಾಡಿದೆ," ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ದರವು ಸತತವಾಗಿ ಏರಿಕೆ ಕಾಣುತ್ತಿದೆ. ಕಳೆದ 36 ದಿನಗಳಲ್ಲಿ 28 ರೂಪಾಯಿ ಹೆಚ್ಚಳ ಕಂಡು ಬಂದಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ನೂರು ರೂಪಾಯಿ ಗಡಿಯನ್ನು ದಾಟಿದೆ. ಈ ಕೊರೊನಾ ವೈರಸ್ ಸೋಂಕಿನ ಕಾರಣ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಜನರು ಕೊಂಚ ಚೇತರಿಕೆ ಕಾಣುತ್ತಿರುವಾಗ ಈ ಇಂಧನ ಬೆಲೆ ಏರಿಕೆಯು ಜನರ ಜೇಬಿಗೆ ಕತ್ತರಿ ಹಾಕಿತ್ತು. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಇಂಧನದ ಅಬಕಾರಿ ಸುಂಕವನ್ನು ಕಡಿತ ಮಾಡಿದ್ದು, ಈ ಬೆನ್ನಲ್ಲೇ ಕೆಲವು ರಾಜ್ಯಗಳು ಕೂಡಾ ವ್ಯಾಟ್ ಕಡಿತ ಮಾಡಿದೆ.
(ಒನ್ಇಂಡಿಯಾ ಸುದ್ದಿ)
Recommended Video