ಇಲ್ಲಿ ಅಜ್ಜನೇ ಟೋಲ್ಗೇಟ್: ಸುಂಕ ಕೊಡದೆ ಮುಂದೆ ಹೋಗುವಂತೆ ಇಲ್ಲ!
ಧರ್ಮಶಾಲಾ, ಅಕ್ಟೋಬರ್ 5: ಪ್ರಮುಖ ಹೆದ್ದಾರಿಗಳಿಗೆ ವಾಹನ ಇಳಿಸಿದರೆ ಆ ರಸ್ತೆಯನ್ನು ಬಳಸಿಕೊಂಡಿದ್ದರೆ ಇಂತಿಷ್ಟು ಹಣ ಎಂದು ಪಾವತಿಸಬೇಕು. ರಸ್ತೆಯಲ್ಲಿ ಸಾಗುವ ಪ್ರತಿ ವಾಹನದಿಂದಲೂ ಸುಂಕ ವಸೂಲಾತಿಗೆಂದೇ ಕೇಂದ್ರಗಳನ್ನು ನಿರ್ಮಿಸಿರಲಾಗುತ್ತದೆ. ಈ ಟೋಲ್ಗೇಟ್ಗಳಲ್ಲಿ ಹಣ ಕೊಡದೆ ಮುಂದೆ ಸಾಗಲು ಸಾಧ್ಯವಿಲ್ಲ. ಅದಕ್ಕಾಗಿ ಎಷ್ಟೋ ಜಗಳ, ಹೊಡೆದಾಟಗಳು ನಡೆದ ಘಟನೆಗಳು ಸುದ್ದಿಯಾಗಿವೆ. ಆದರೆ, ಹಿಮಾಚಲ ಪ್ರದೇಶದಲ್ಲಿ 'ವಿಶಿಷ್ಟ' ಟೋಲ್ಗೇಟ್ ಸುದ್ದಿಯಾಗಿದೆ.
ಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆ
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜವಾಲಾಮುಖಿ ಪ್ರದೇಶದಲ್ಲಿ 88 ವರ್ಷದ ವೃದ್ಧನೊಬ್ಬ ರಸ್ತೆಯಲ್ಲಿ ಕುಳಿತು ತಾನೇ ಟೋಲ್ ಕಲೆಕ್ಟರ್ ಆಗಿದ್ದ. ಈ ರಸ್ತೆಯಲ್ಲಿ ಸಾಗುವವರು ಆತನಿಗೆ ಹಣಕೊಟ್ಟು ಮುಂದೆ ಸಾಗಬೇಕು. ಹಾಗೆಂದು ಆತ ಸರ್ಕಾರದಿಂದ ನಿಯೋಜಿತನಾದ ಸುಂಕ ಸಂಗ್ರಹಕಾರನಲ್ಲ. ಅಲ್ಲಿ ಟೋಲ್ ಘಟಕವೂ ಇಲ್ಲ. ಹಾಗೆಂದು 'ಟೋಲ್' ನೀಡದೆ ತಪ್ಪಿಸಿಕೊಂಡು ಮುಂದೆ ಹೋಗವವರನ್ನು ಆತ ಸುಲಭವಾಗಿ ಬಿಡುತ್ತಲೂ ಇರಲಿಲ್ಲ. ದ್ವಿಚಕ್ರ ವಾಹನವಾಗಲೀ, ಬಸ್ ಆಗಲಿ- ಎಲ್ಲರೂ ಅಲ್ಲಿ ಸುಂಕ ತೆರಲೇಬೇಕು. ಅಜ್ಜನನ್ನು ಯಾಮಾರಿಸಿ ಹಣ ಕೊಡದೆ ಮುಂದೆ ಸಾಗಿದರೆ ತನ್ನ ಬಡಕಲು ದೇಹದೊಂದಿಗೆ ಕೋಲನ್ನು ಎತ್ತಿಕೊಂಡು ಓಡಿ ಅಡ್ಡ ಹಾಕುತ್ತಿದ್ದ. ಈ ಅಜ್ಜನ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ರಸ್ತೆಯ ಮಧ್ಯೆ ಅಜ್ಜನ ಟೋಲ್ಗೇಟ್
88 ವರ್ಷದ ವೃದ್ಧ ಝೋಮ್ಫಿ ರಾಮ್ ತನ್ನ ಮನೆ ಎದುರಿನ ರಸ್ತೆಗೆ ಅಡ್ಡಲಾಗಿ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಹಾಕಿಕೊಂಡು ಕೂರುತ್ತಿದ್ದ. ರಸ್ತೆಯ ಒಂದು ಬದಿಯಲ್ಲಿ ಮರದ ತುಂಡುಗಳನ್ನು ಇರಿಸುತ್ತಿದ್ದ ಅಜ್ಜ, ಇನ್ನೊಂದು ಬದಿಯಲ್ಲಿ ಮಾತ್ರ ವಾಹನ ಸಾಗಲು ಸ್ಥಳ ಬಿಡುತ್ತಿದ್ದ. ನಡುವಿನಲ್ಲಿ ಕುರ್ಚಿ ಹಾಕಿ ಕೂರುತ್ತಿದ್ದವನು, ವಾಹನ ಬಂದಾಗ ಅಡ್ಡ ಹಾಕಿ ಹಣ ವಸೂಲಿ ಮಾಡುತ್ತಿದ್ದ.
ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್
ವಾಹನದಿಂದ 10-20 ರೂ ಸುಂಕ
ತನ್ನ ಮನೆ ರಿಪೇರಿಗಾಗಿ ಹಣಕ್ಕಾಗಿ ಪರದಾಡುತ್ತಿದ್ದ ಅಜ್ಜ, ನೆರವಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದೂ ಅಲೆದೂ ಸುಸ್ತಾಗಿದ್ದ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ಐಡಿಯಾ ಮಾಡಿದ ಅಜ್ಜ, ಮನೆಯ ಎದುರಿನ ರಸ್ತೆಯ ಒಂದು ಭಾಗಕ್ಕೆ ಬಿದಿರಿನ ಏಣಿ ಮತ್ತು ಮರದ ತುಂಡನ್ನು ಅಡ್ಡಲಾಗಿ ಇರಿಸಿ ಮಧ್ಯದಲ್ಲಿ ತಾನು ಕುಳಿತು ಹೋಗಿ ಬರುವ ವಾಹನಗಳನ್ನು ಅಡ್ಡಹಾಕಿ ಹಣ ಕೇಳತೊಡಗಿದ. 10-20 ರೂ. ಹಣ ಕೊಡಬೇಕು ಎಂದು ವಾಹನ ಸವಾರರಿಗೆ ಆತ ಷರತ್ತು ಹಾಕುತ್ತಿದ್ದ.
ಅಜ್ಜನ ವಿರುದ್ಧ ಸುಲಿಗೆ ಪ್ರಕರಣ
ಈತನ ಕಾಟ ತಾಳಲಾರದೆ ಹಿಮಾಚಲ ಪ್ರದೇಶ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಈ ಭಾಗದ ಪೊಲೀಸ್ ಅಧಿಕಾರಿ ತಿಲಕ್ ರಾಜ್ ಸ್ವತಃ ಘಟನೆಯನ್ನು ಕಣ್ಣಾರೆ ಕಂಡ ಬಳಿಕ ಅಜ್ಜನ ಮೇಲೆ ಐಪಿಸಿ ಸೆಕ್ಷನ್ 341 ಮತ್ತು 384ರ ಅಡಿ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದೆ. ಸಂಕಷ್ಟದಲ್ಲಿರುವ ವೃದ್ಧನಿಗೆ ಸಹಾಯ ಮಾಡಲು ಕ್ರಮ ತೆಗೆದುಕೊಳ್ಳುವ ಬದಲು ಆತನ ವಿರುದ್ಧ ಪ್ರಕರಣ ದಾಖಲು ಮಾಡಿರುವುದು ಅಮಾನವೀಯ. ಆ ವೃದ್ಧನಿಗೆ 10-20 ರೂ ಹಣವನ್ನು ನಾವು ಖುಷಿಯಿಂದಲೇ ನೀಡುತ್ತಿದ್ದೆವು ಎಂದು ಹೇಳಿದ್ದಾರೆ.
ಅದೇ ಜಾಗ, ಅದೇ ಮೊಸಳೆ: 15 ವರ್ಷದ ಬಳಿಕ ಸ್ಟೀವ್ ಇರ್ವಿನ್ ಮಗನ ಮರುಸೃಷ್ಟಿಯ ಸಾಹಸ
ಮನೆ ದುರಸ್ತಿಗೆ ಕ್ರಮ
ಝೋಮ್ಫಿ ರಾಮ್ ತನ್ನನ್ನು ಭೇಟಿಯಾಗಲು ಒಮ್ಮೆ ಬಂದಿದ್ದ. ತನ್ನ ಮನೆಯ ಗೋಡೆ ಕುಸಿದುಹೋಗಿರುವುದರ ಸಮಸ್ಯೆಯನ್ನು ಹೇಳಿಕೊಂಡಿದ್ದ. ಅದರ ಬಗ್ಗೆ ಗಮನ ಹರಿಸಿ ಗೋಡೆ ದುರಸ್ತಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅಧಕಾರಿಗಳು ಈಗ ಆ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಸ್ಥಳೀಯ ಶಾಸಕ ರಮೇಶ್ ಧವಾಲ ತಿಳಿಸಿದ್ದಾರೆ.