ಛತ್ತೀಸ್ಗಢ: 1,600 ರು. ಮೌಲ್ಯದ 800 ಕೆಜಿ ಗೋವಿನ ಸಗಣಿ ಕಳವು! - ಪ್ರಕರಣ ದಾಖಲು
ಕೊರ್ಬಾ, ಜೂ.21: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯ ಧುರೇನಾ ಗ್ರಾಮದಲ್ಲಿ 1,600 ರೂ.ಗಳ ಮೌಲ್ಯದ ಸುಮಾರು 800 ಕಿಲೋಗ್ರಾಂಗಳಷ್ಟು ಗೋವಿನ ಸಗಣಿ ಕಳವು ಮಾಡಿದ ಘಟನೆ ನಡೆದಿದೆ.
ಜೂನ್ 8 ಮತ್ತು ಜೂನ್ 9 ರ ಮಧ್ಯರಾತ್ರಿ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಧುರೇನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಛತ್ತೀಸ್ಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜಸ್ಥಾನ: ಜಾನುವಾರು ಸಾಗಾಟ- ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು
ಈ ಬಗ್ಗೆ ಮಾಹಿತಿ ನೀಡಿರುವ ಡಿಪ್ಕಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸುರೇಶ್ ಕುಮಾರ್, "1,600 ರೂ.ಗಳ ಮೌಲ್ಯದ 8 ಕ್ವಿಂಟಾಲ್ ಗೋವಿನ ಸಗಣಿ ಕಳವು ಮಾಡಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಜೂನ್ 15 ರಂದು ಪ್ರಕರಣ ದಾಖಲಿಸಲಾಗಿದೆ," ಎಂದು ತಿಳಿಸಿದ್ದಾರೆ.
''ಗೋಧನ್ ನ್ಯಾಯ ಯೋಜನೆ''ಯಡಿ ಗೋವಿನ ಸಗಣಿಯನ್ನು ಕಿಲೋಗ್ರಾಂಗೆ ಸುಮಾರು 2 ರೂ.ಗೆ ಖರೀದಿಸುವುದಾಗಿ ಛತ್ತೀಸ್ಗಢ ಸರ್ಕಾರ ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ಗೋ ಸಗಣಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ಸರ್ಕಾರವು ಈ ಗೋವಿನ ಸಗಣಿಯನ್ನು ಗೌತನ್ಗಳಲ್ಲಿ ವರ್ಮಿಕಾಂಪೋಸ್ಟ್ ಉತ್ಪಾದನೆಗಾಗಿ ಬಳಸುತ್ತಿದೆ ಎಂದು ಹೇಳಲಾಗಿದೆ. ''ಈ ಯೋಜನೆಯನ್ನು ಘೋಷಣೆಯ ಬಳಿಕ, ಹಣ ಪಡೆಯುವ ಉದ್ದೇಶದಿಂದ ಹಲವು ಮಂದಿ ಗೋವಿನ ಸಗಣಿ ಸಂಗ್ರಹ ಮಾಡುತ್ತಿದ್ದಾರೆ,'' ಎಂದು ಧುರೇನಾ ಗ್ರಾಮದ ಜನರು ಹೇಳುತ್ತಾರೆ. ಹಸು ಸಗಣಿಯು ಈ ಗ್ರಾಮದ ಜನರ ಆದಾಯದ ಮೂಲವಾಗಿರುವುದರಿಂದ ಈ ವಿಷಯವು ಗ್ರಾಮದ ಜನರಿಗೆ ಹೆಚ್ಚು ಮಹತ್ವದ್ದಾಗಿದೆ ಎನ್ನಲಾಗಿದೆ.
ಭೂಪೇಶ್ ಬಾಗೆಲ್ ನೇತೃತ್ವದ ಛತ್ತೀಸ್ಗಢ ಸರ್ಕಾರವು 2020 ರ ಜುಲೈ 21 ರಂದು ರಾಜ್ಯದ ಮೊದಲ ಹಬ್ಬವಾದ ಹರೇಲಿಯ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಂತರ ನಗರ ಪ್ರದೇಶದಲ್ಲಿಯೂ ರೈತರು ಮತ್ತು ಜಾನುವಾರು ಸಾಕಣೆದಾರರಿಂದ ಪ್ರತಿ ಕಿಲೋಗ್ರಾಂ ಸಗಣಿಗೆ 2 ರೂ.ಗೆ ಖರೀದಿ ಮಾಡಲಾಗಿದೆ. ಈ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಸಲಹೆ ಕೊಟ್ಟ ಸಿದ್ದರಾಮಯ್ಯ
ಕಾಂಗ್ರೆಸ್ ಕೂಡ ಈ ಯೋಜನೆಯನ್ನು 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಸೇರಿಸಿದೆ. ಭೂಪೇಶ್ ಬಾಗೇಲ್ ಚುನಾವಣೆಯಲ್ಲಿ ಜಯಗಳಿಸಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, ಕೊಂಚ ಬದಲಾವಣೆಯ ಮೂಲಕ ''ಗೋಧನ್ ನ್ಯಾಯ ಯೋಜನೆ'' ಎಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದರು. ಸದ್ಯಕ್ಕೆ, ಗೌತನ್ನಲ್ಲಿ ಸಂಗ್ರಹಣೆ ನಡೆಯುತ್ತಿದೆ. ಆದರೆ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಪ್ರತಿ ಗ್ರಾಮವನ್ನು ಯೋಜನೆಯಡಿ ಸೇರಿಸಲು ಸರ್ಕಾರ ಯೋಜಿಸಿದೆ.
(ಒನ್ಇಂಡಿಯಾ ಸುದ್ದಿ)