ಶಾಕಿಂಗ್ ನ್ಯೂಸ್: 5 ದಿನ ಶಾಲೆಗೆ ಹೋದ 80 ಶಿಕ್ಷಕರಿಗೆ ಕೊರೊನಾವೈರಸ್!
ನವದೆಹಲಿ, ನವೆಂಬರ್.06: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಆರಂಭಗೊಂಡ 84 ಶಾಲೆಗಳು ಐದು ದಿನಗಳಲ್ಲೇ ಮತ್ತೆ ಬಾಗಿಲು ಮುಚ್ಚಿಕೊಂಡಿರುವಂತಾ ಘಟನೆಯು ಉತ್ತರಾಖಂಡ್ ನಲ್ಲಿ ವರದಿಯಾಗಿದೆ.
ಉತ್ತರಾಖಂಡ್ ಗರ್ವಾಲಾ ವಿಭಾಗದ ಪೌರಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳಡಿ ನವೆಂಬರ್.02ರಂದು ಶಾಲೆಗಳನ್ನು ಪುನಾರಂಭಗೊಳಿಸಲಾಗಿತ್ತು. ಅಲ್ಲಿಂದ ನಾಲ್ಕು ದಿನಗಳವರೆಗೂ ತರಗತಿಗಳನ್ನು ಎಂದಿನಂತೆ ನಡೆಸಲಾಗಿತ್ತು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಇಲಾಖೆ!
ರಾಜ್ಯದ ಈ ವಿಭಾಗದಲ್ಲಿರುವ 84 ಶಾಲೆಗಳು ಪುನಾರಂಭಗೊಂಡು ನಾಲ್ಕೈದು ದಿನಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ನಾಲ್ಕೈದು ದಿನಗಳಲ್ಲೇ ಮತ್ತೆ ಶಾಲೆಗಳನ್ನು ಬಂದ್ ಮಾಡಲಾಗಿದೆ.
5 ದಿನ ಶಾಲೆಗೆ ಹೋದ 80 ಶಿಕ್ಷಕರಿಗೆ ಕೊರೊನಾವೈರಸ್
ಉತ್ತರಾಖಂಡ್ ನಲ್ಲಿರುವ 13 ಜಿಲ್ಲೆಗಳ 84 ಶಾಲೆಗಳನ್ನು ಕಳೆದ ಐದು ದಿನಗಳ ಹಿಂದೆಯಷ್ಟೇ ತೆರೆಯಲಾಗಿತ್ತು. ಅಲ್ಲಿಂದ ಐದು ದಿನ ಶಾಲೆಗೆ ಹೋದ 80ಕ್ಕೂ ಹೆಚ್ಚು ಶಿಕ್ಷಕರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆ ಗುರುವಾರ ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಿದಾಗ ಬಹುಪಾಲು ಶಿಕ್ಷಕರಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಿಸ್ತುಕ್ರಮದ ಬಗ್ಗೆ ಆರೋಗ್ಯ ಕಾರ್ಯದರ್ಶಿ ಸ್ಪಷ್ಟನೆ
ಉತ್ತರಾಖಂಡ್ ಪೌರಿ ಜಿಲ್ಲೆಯ ಖಿರ್ಸು, ಪೌರಿ, ಕೊಟ್, ಪಬೊ ಮತ್ತು ಕಲ್ಜಿಖಲ್ ವಿಭಾಗಗಳಲ್ಲಿ 9 ರಿಂದ 12ನೇ ತರಗತಿ ಶಾಲೆಗಳನ್ನು ಆರಂಭಿಸುವುದಕ್ಕೆ ಅನುಮತಿ ನೀಡಲಾಗಿತ್ತು. ರಾಜ್ಯದ 13 ಜಿಲ್ಲೆಗಳಲ್ಲಿ ಆರಂಭಗೊಂಡ ಶಾಲೆಗಳಲ್ಲಿ ಕೊವಿಡ್-19 ನಿಯಮ ಮತ್ತು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಎಂದು ಉತ್ತರಾಖಂಡ್ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ತಿಳಿಸಿದ್ದಾರೆ.
3 ದಿನ ಶಾಲೆ ತೆರೆದಿದ್ದಕ್ಕೆ 422 ಶಿಕ್ಷಕರು-ವಿದ್ಯಾರ್ಥಿಗಳಿಗೆ ಸೋಂಕು
ಆಂಧ್ರ ಪ್ರದೇಶದಲ್ಲೂ ಇತ್ತೀಚಿಗೆ ಶಾಲೆಗಳನ್ನು ಆರಂಭಿಸಿರುವುದ ಹಿನ್ನೆಲೆಯಲ್ಲಿ ಕೊರೊನಾವೈರಸ್ ಸೋಂಕಿನ ಭೀತಿ ಹೆಚ್ಚಾಗಿತ್ತು. 9 ರಿಂದ 12ನೇ ತರಗತಿ ಓದುವ ವಿದ್ಯಾರ್ಥಿಗಳಿಗಾಗಿ ಮೂರು ದಿನ ಶಾಲೆ ತೆರೆದ ಬೆನ್ನಲ್ಲೇ 262 ವಿದ್ಯಾರ್ಥಿಗಳು ಮತ್ತು 160 ಶಿಕ್ಷಕರಿಗೆ ಕೊವಿಡ್-19 ಸೋಂಕು ತಗುಲಿರುವುದು ವರದಿಯಾಗಿತ್ತು. 3 ದಿನ ಶಾಲೆಗೆ ಹೋದ 422 ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು ಅಂಕಿ ಅಂಶಗಳ ಸಹಿತ ಸಾಬೀತಾಗಿತ್ತು.
ಶಾಲಾ-ಕಾಲೇಜು ಆರಂಭಿಸಲು ಮಾರ್ಗಸೂಚಿ ಬಿಡುಗಡೆ
ದೇಶಾದ್ಯಂತ ಕೊರೊನಾವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಲಾ-ಕಾಲೇಜು ಪುನಾರಂಭಿಸುವುದಕ್ಕೆ ಯುಜಿಸಿ ಅನುಮತಿ ನೀಡಿದ್ದು, ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಕೊವಿಡ್ ಶಿಷ್ಟಾಚಾರ ಪಾಲನೆ ಸೇರಿ ಹಲವು ಅಂಶಗಳನ್ನು ಯುಜಿಸಿ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಯಾವಾಗ ಪುನಾರಂಭಗೊಳ್ಳಬೇಕು ಎನ್ನುವುದಕ್ಕೆ ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನಿಸುವುದಕ್ಕಿ ಬಿಡಲಾಗಿದೆ.
ಯುಜಿಸಿ ಮಾರ್ಗಸೂಚಿಯಲ್ಲಿ ಇರುವುದೇನು?
- ವಾರದಲ್ಲಿ ಆರು ದಿನಗಳ ಕಾಲ ತರಗತಿಗಳನ್ನು ನಡೆಸುವುದಕ್ಕೆ ಅನುಮತಿ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳುವುದು.
- ಶಾಲಾ ಕೊಠಡಿ ಲಭ್ಯತೆಯನ್ನು ನೋಡಿಕೊಂಡು ಶೇ.50ರಷ್ಟು ವಿದ್ಯಾರ್ಥಿಗಳಿಗೆ ಬೇರೆ ಬೇರೆ ಅವಧಿಯಲ್ಲಿ ತರಗತಿ ನಡೆಸುವುದು.
- ತಾಂತ್ರಿಕ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಸಾಂಕ್ರಾಮಿಕ ಪಿಡುಗಿನಿಂದ ಸ್ವದೇಶಗಳಿಗೆ ವಾಪಸ್ ಹೋಗಿದ್ದಾರೆ. ಅವರು ವಾಪಸ್ಸಾಗುವುದು ಎಂದು ವೀಸಾ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನೆಲ್ಲ ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಸಾಮಾನ್ಯ ಮಾರ್ಗಸೂಚಿಯಲ್ಲಿರುವ ಅಂಶಗಳು
- ಮುಖಕ್ಕೆ ಮಾಸ್ಕ್ ಧರಿಸುವುದು ಮತ್ತು ಪ್ರತಿಯೊಬ್ಬರ ನಡುವೆ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
- ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಸುವುದು ಅಥವಾ 40 ರಿಂದ 60 ಸೆಕೆಂಡ್ ವರೆಗೂ ಸೋಪ್ ನಿಂದ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು.
- ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗು ಮುಚ್ಚಿಕೊಕಡ್ಡಾಯವಾಗಿಡ್ಡಾಯವಾಗಿ ಮುಚ್ಚಿಕೊಳ್ಳುವುದು.
- ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಕಾಳಜಿ ಹೊಂದಿರಬೇಕು, ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ತಕ್ಷಣ ವೈದ್ಯರ ಬಳಿಗೆ ತೆರಳಬೇಕು.
- ಶಾಲಾ-ಕಾಲೇಜುಗಳ ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಆರೋಗ್ಯ ಸೇತು ಅಪ್ಲಿಕೇಷನ್ ಬಳಕೆ ಮಾಡುವುದು ಕಡ್ಡಾಯ.
Recommended Video
ಕೊವಿಡ್-19 ನಿಯಂತ್ರಣ ಕ್ರಮಗಳು
- ಶಾಲೆ ಮತ್ತು ಕಾಲೇಜು ಪುನಾರಂಭಕ್ಕೂ ಮೊದಲು ಆ ಪ್ರದೇಶವು ಕೊವಿಡ್-19 ಮುಕ್ತವಾಗಿರಬೇಕು. ಶಾಲೆಯಿರುವ ಪ್ರದೇಶ ಸುರಕ್ಷಿತವಾಗಿದೆ ಎನ್ನುವ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರಗಳಿಂದ ದೃಢಪಟ್ಟಿರಬೇಕು. ಕೊವಿಡ್-19 ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
- ಅಗತ್ಯಬಿದ್ದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಕೊವಿಡ್-19 ಸೋಂಕಿನಿಂದ ರಕ್ಷಿಸುವುದಕ್ಕಾಗಿ ಕಟ್ಟುನಿಟ್ಟಿನ ಕಾನೂನು, ನಿಯಮ ಹಾಗೂ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವೇ ಜಾರಿಗೊಳಿಸಬೇಕು.
- ಕಂಟೇನ್ಮೆಂಟ್ ವಲಯ ಅಲ್ಲದ ಪ್ರದೇಶಗಳಲ್ಲಿ ಮಾತ್ರ ಶಾಲಾ-ಕಾಲೇಜು ಆರಂಭಿಸುವುದಕ್ಕೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಕಂಟೇನ್ಮೆಂಟ್ ವಲಯದಲ್ಲಿ ವಾಸವಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲಾ-ಕಾಲೇಜಿನಲ್ಲಿ ಪ್ರವೇಶಕ್ಕೆ ಯಾವುದೇ ಅನುಮತಿ ನೀಡುವುದಿಲ್ಲ.