ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!
ನವದೆಹಲಿ, ಫೆಬ್ರವರಿ.07: ಕೊರೊನಾ ವೈರಸ್ ಪೀಡಿತ ಪ್ರದೇಶದಲ್ಲೇ ಭಾರತೀಯ ವಿದ್ಯಾರ್ಥಿಗಳು ಇಂದಿಗೂ ಜೀವಿಸುತ್ತಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಶುಕ್ರವಾರ ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಮೊದಲಿಗೆ ಮಾರಕ ಕೊರೊನಾ ವೈರಸ್ ಪತ್ತೆಯಾಗಿದ್ದು, ಚೀನಾದಲ್ಲಿರುವ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದುವರೆಗೂ ವುಹಾನ್ ನಗರದಲ್ಲಿದ್ದ 10 ಜನ ಭಾರತೀಯರನ್ನಷ್ಟೇ ವಾಪಸ್ ಕರೆದುಕೊಂಡು ಬರಲಾಗಿದೆ ಎಂದರು.
Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?
ವುಹಾನ್ ನಗರದಲ್ಲಿ 80 ಭಾರತೀಯ ವಿದ್ಯಾರ್ಥಿಗಳು ಇರುವ ಬಗ್ಗೆ ತಿಳಿದು ಬಂದಿದ್ದು, ಇನ್ನೂ 70 ಮಂದಿ ಭಾರತೀಯರು ಚೀನಾದಲ್ಲಿ ಉಳಿದುಕೊಂಡಿದ್ದಾರೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮಾಹಿತಿ ನೀಡಿದರು.
ಭಾರತೀಯರನ್ನು ಕರೆ ತರಲು ಕೇಂದ್ರದ ಕಾರ್ಯಾಚರಣೆ
ಚೀನಾದಲ್ಲಿರುವ ಭಾರತೀಯರನ್ನು ಮಾರಕ ರೋಗದಿಂದ ರಕ್ಷಿಸಲು ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡಿದೆ. ಚೀನಾದ ವುಹಾನ್ ನಗರಕ್ಕೆ ವಿಶೇಷ ವಿಮಾನಗಳನ್ನು ಕಳುಹಿಸಿಕೊಡಲಾಗುತ್ತಿದ್ದು, ಚೀನಾದ ವಿವಿಧ ಭಾಗಗಳಲ್ಲಿ ಇರುವ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಜೈಶಂಕರ್ ತಿಳಿಸಿದರು.
ಚೀನಾ ಏರ್ ಪೋರ್ಟ್ ನಲ್ಲಿಯೇ ಭಾರತೀಯರಿಗೆ ಸ್ಕ್ರೀನಿಂಗ್
ಕೊರೊನಾ ವೈರಸ್ ಕಾಣಿಸಿಕೊಂಡಿರುವ ನಗರಗಳಿಂದ ಭಾರತೀಯರನ್ನು ಕರೆ ತರುವ ಮುನ್ನ ಏರ್ ಪೋರ್ಟ್ ನಲ್ಲಿಯೇ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ವುಹಾನ್ ನಲ್ಲಿದ್ದ 70 ವಿದ್ಯಾರ್ಥಿಗಳು ಏರ್ ಪೋರ್ಟ್ ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಸೋತಿದ್ದರಿಂದ ಅವರನ್ನು ದೇಶಕ್ಕೆ ಕರೆ ತರಲು ಆಗಲಿಲ್ಲ ಎಂದು ಜೈಶಂಕರ್ ಮಾಹಿತಿ ನೀಡಿದರು.
ಕೊರೊನಾ ವೈರಸ್: ಕನ್ನಡಿಗರೇ ವಿದೇಶಕ್ಕೆ ಹೋಗಿದ್ರಾ, 104ಕ್ಕೆ ಕರೆ ಮಾಡಿ!
ಭಾರತೀಯ ರಾಯಭಾರಿ ಜೊತೆಗೆ ಕೇಂದ್ರದ ನಿರಂತರ ಸಂಪರ್ಕ
ಇನ್ನು, ವುಹಾನ್ ನಗರದಲ್ಲಿ ಉಳಿದುಕೊಂಡಿರುವ 70 ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಚೀನಾದಲ್ಲಿರುವ ಭಾರತೀಯ ರಾಯಭಾರಿಯು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಭಾರತೀಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಾ ಅವರ ನೆರವಿಗೆ ನಿಲ್ಲುತ್ತದೆ ಎಂದು ಜೈಶಂಕರ್ ತಿಳಿಸಿದರು.
ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?
ಚೀನಾದಿಂದ 640 ಭಾರತೀಯರು ದೇಶಕ್ಕೆ ವಾಪಸ್
ಭಾರತದ ಕೇಂದ್ರ ಸರ್ಕಾರವು ನಡೆಸಿದ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾ ಮೂಲಕ ಇದುವರೆಗೂ ಚೀನಾದಿಂದ 640 ಭಾರತೀಯರನ್ನು ದೇಶಕ್ಕೆ ವಾಪಸ್ ಕರೆದುಕೊಂಡು ಬರಲಾಗಿದೆ. ಭಾರತೀಯರಷ್ಟೇ ಅಲ್ಲದೇ, ಚೀನಾದಲ್ಲಿರುವ ನೆರೆ ರಾಷ್ಟ್ರದ ಪ್ರಜೆಗಳನ್ನು ಕೂಡಾ ಕರೆದುಕೊಂಡು ಬರುವ ಕೆಲಸವನ್ನು ಮಾಡಲಾಗುತ್ತಿದ್ದು, 7 ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರಲಾಗಿದೆ ಎಂದು ಸಚಿವ ಜೈಶಂಕರ್ ತಿಳಿಸಿದರು.