ಕೇವಲ 8 ನಿಮಿಷ ಕರೆಂಟ್ ಹೋಗಿದ್ದಕ್ಕೆ ಮೂವರ ಪ್ರಾಣ ಹೋಯ್ತು
ಪವರ್ ಬ್ಯಾಕಪ್ ವ್ಯವಸ್ಥೆಯಿದ್ದರೂ ವಿದ್ಯುತ್ ನಿಲುಗಡೆಯಾದಾಗ ಯಂತ್ರ ಸ್ವಯಂ ಚಾಲನೆಗೊಳ್ಳದ್ದರಿಂದ ಆದ ತೊಂದರೆ.
ಚೆನ್ನೈ, ಮಾರ್ಚ್ 9: ಪಾಂಡಿಚೇರಿಯ ಇಂದಿರಾಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕೇವಲ 8 ನಿಮಿಷ ವಿದ್ಯುತ್ ನಿಲುಗಡೆ ಆಗಿದ್ದಕ್ಕೆ ತೀವ್ರ ನಿಗಾ ಘಟಕದಲ್ಲಿದ್ದ (ಐಸಿಯು) ಮೂವರು ರೋಗಿಗಳ ಪ್ರಾಣ ಪಕ್ಷಿ ಹಾರಿಹೋಗಿದೆ.
ವಿದ್ಯುತ್ ನಿಲುಗಡೆಯಾದ ಸಂದರ್ಭದಲ್ಲಿ ಐಸಿಯುನಲ್ಲಿದ್ದ ಮೂವರು ರೋಗಿಗಳಿಗೆ (ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು) ಕಿಡ್ನಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಏಕಾಏಕಿ ವಿದ್ಯುತ್ ನಿಲುಗಡೆಯಾಗಿದ್ದರಿಂದಾಗಿ ಮೂವರು ಜೀವ ತೆರುವಂತಾಗಿದೆ.
ಆಸ್ಪತ್ರೆಯಲ್ಲಿ ಸ್ವಯಂ ಚಾಲಿತ ಪವರ್ ಬ್ಯಾಕ್ ಅಪ್ ವ್ಯವಸ್ಥೆ ಇದ್ದರೂ, ವಿದ್ಯುತ್ ನಿಲುಗಡೆಯಾದ ಕೂಡಲೇ ಅದು ಚಾಲನೆಗೊಳ್ಳಲಿಲ್ಲ ಎಂದು ಹೇಳಲಾಗಿದೆ.
ಹಾಗಾಗಿ, ಆಸ್ಪತ್ರೆಯ ಸಿಬ್ಬಂದಿ ಪವರ್ ಬ್ಯಾಕ್ ಅಪ್ ಬಳಿ ಸಾಗಿ ಕೆಲವಾರು ಪ್ರಯತ್ನಗಳಿಂದ ಅದನ್ನು ಚಾಲನೆಗೊಳಿಸಿದ್ದಾರೆ. ಆದರೆ, ಅಷ್ಟರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು ಅವರು ಅಸುನೀಗಿದ್ದಾರೆಂದು ಹೇಳಲಾಗಿದೆ.
ಪಾಂಡಿಚೇರಿ ಸರ್ಕಾರ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದೆ.