ಪಂಜಾಬ್ ನಲ್ಲಿ 8 ಉಗ್ರರು, ಗುಪ್ತಚರ ಇಲಾಖೆಯಿಂದ ದಾಳಿಯ ಎಚ್ಚರಿಕೆ
ಚಂಡೀಗಢ, ಆಗಸ್ಟ್ 31: ಪಂಜಾಬ್ ರಾಜ್ಯದಲ್ಲಿ 8 ಜೈಷ್ ಎ ಮೊಹಮ್ಮದ್ ಉಗ್ರರು ಅಡಗಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್ ಭಾಗದಿಂದ ಗಡಿ ದಾಟಿ ಈ ಉಗ್ರರು ಭಾರತದೊಳಕ್ಕೆ ಒಳನುಸುಳಿದ್ದು ಸದ್ಯ ಪಂಜಾಬ್ ನಲ್ಲಿದ್ದಾರೆ. ಇವರೆಲ್ಲಾ ಪಠಾಣ್ ಕೋಟ್ ರೀತಿಯ ದಾಳಿಗೆ ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ವಿಶೇಷವೆಂದರೆ ಈ 8 ಜನ ಉಗ್ರರು ಕಳೆದ ವಾರ ಪುಲ್ವಾಮದಲ್ಲಿ ದಾಳಿ ನಡೆಸಿದ 11 ಜನರ ತಂಡದ ಒಂದು ಭಾಗ ಎಂದು ತಿಳಿದು ಬಂದಿದೆ. ಪುಲ್ವಾಮಾ ದಾಳಿಯಲ್ಲಿ 8 ಸೈನಿಕರು ಅಸುನೀಗಿದ್ದರು.
ಪಂಜಾಬ್ ನಲ್ಲಿ ಉಗ್ರರು ಇರುವ ಬಗ್ಗೆ ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಭದ್ರತೆಯನ್ನು ಬಲಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನು ಉಗ್ರರು ಗುರುದಾಸ್ ಪುರದತ್ತ ಹೊರಟಿದ್ದಾರೆ ಎಂದು ಗುಪ್ತಚರ ಇಲಾಖೆ ಸ್ಪಷ್ಟ ಸಂದೇಶ ನೀಡಿದೆ.
ಸದ್ಯ ಪಾಕಿಸ್ತಾನ ಜೈಷ್ ಎ ಮೊಹಮ್ಮದ್ ಉಗ್ರರನ್ನೇ ಭಾರತಕ್ಕೆ ಕಳುಹಿಸುತ್ತಿದೆ ಎನ್ನಲಾಗಿದೆ. ಪಠಾನ್ ಕೋಟ್, ಸಂಸತ್ ದಾಳಿಯಂಥ ಪ್ರಮುಖ ದಾಳಿಯನ್ನು ಈ ಸಂಘಟನೆ ನಡೆಸುತ್ತಾ ಬಂದಿದ್ದು, ಜೈಷ್ ಎ ಮೊಹಮ್ಮದ್ ದೊಡ್ಡ ದೊಡ್ಡ ದಾಳಿಗಳಿಗೆ ಹೆಸರುವಾಸಿಯಾಗಿದೆ.