'ಭಾರತ ಬಿಟ್ಟು ತೊಲಗಿ ಆಂದೋಲನ'ಕ್ಕೆ 75 ವರ್ಷ: ಸಂಸತ್ ವಿಶೇಷ ಅಧಿವೇಶನ
ನವದೆಹಲಿ, ಆಗಸ್ಟ್ 9: ಭಾರತ ಸ್ವಾತಂತ್ರ್ಯಗೊಳ್ಳುವುದಕ್ಕೂ 5 ವರ್ಷಮೊದಲು, ಅಂದರೆ 1942 ರ ಆಗಸ್ಟ್ ನಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ "ಬ್ರಿಟೀಶರೇ ಭಾರತ ಬಿಟ್ಟು ತೊಲಗಿ"(ಕ್ವಿಟ್ ಇಂಡಿಯಾ) ಎಂಬ ಚಳವಳಿಯನ್ನು ಆರಂಭಿಸಲಾಗಿತ್ತು. ಆಗಸ್ಟ್ 9 ರಂದು ನಡೆದಿದ್ದ ಈ ಚಳವಳಿಗೆ ಇದೀಗ 75 ವರ್ಷ ಸಂದಿದೆ. ಈ ಸವಿನೆನಪಿಗಾಗಿ ಇಂದು(ಆಗಸ್ಟ್ 9) ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ.
ಕ್ರಾಂತಿಕಿಡಿ ಮಂಗಲ್ ಪಾಂಡೆ ಜನ್ಮದಿನ: ಶುಭ ಹಾರೈಸಿದ ಗಣ್ಯರು
ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಗಾಗಿ ಈ ವರ್ಷ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಘೋಷ ವಾಕ್ಯ "ಸಂಕಲ್ಪ್ ಸೆ ಸಿದ್ಧಿ" ಎಂಬುದು. ಸಂಕಲ್ಪಗಳನ್ನು ಸಾಧಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಕ್ವಿಟ್ ಇಂಡಿಯಾ ಚಳವಳಿಯ ವಜ್ರಮಹೋತ್ಸವ ಆಚರಿಸಲಾಗುತ್ತಿದೆ.
ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಮತ್ತು ಶೂನ್ಯವೇಳೆಗಳನ್ನು ರದ್ದುಗೊಳಿಸಲಾಗಿತ್ತು, ಅಧಿವೇಶನ ಸರಾಗವಾಗಿ ನಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ ಚಳವಳಿಗೆ ಸಂಬಂಧಿಸಿದಂತೆ ಎಲ್ಲ ಪಕ್ಷದ ಧುರೀಣರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ, ದೇಶಕ್ಕಾಗಿ ಅವರು ಏನೆಲ್ಲ ಸಂಕಲ್ಪ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆಯೂ ಮಾತನಾಡುವುದಕ್ಕೆ ಅವಕಾಶವಿದೆ.
ಈ ಕುರಿತು ತಮ್ಮ ಮನ್ ಕಿ ಬಾತ್ ನಲ್ಲಿಯೂ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ಯುವಕರು, ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗಾಗಿ ಹೊಸ ಹೊಸ ಕ್ರಿಯಾಶೀಲ ಯೋಜನೆಗಳನ್ನು ನೀಡುವಂತೆಯೂ, ಈ ಕುರಿತು ಈ ದಿನ ಚಿಂತಿಸುವಂತೆಯೂ ಕೇಳಿಕೊಂಡಿದ್ದರು.