ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ
ಚಂಡೀಗಢ್, ಜುಲೈ 06 : ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ ನೀಡುವ ಸುಗ್ರೀವಾಜ್ಞೆಯನ್ನು ಹರ್ಯಾಣ ಸರ್ಕಾರ ಸಿದ್ಧಪಡಿಸಿದೆ. ಸುಗ್ರೀವಾಜ್ಞೆ ಕರಡು ರಚನೆಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.
ಹರ್ಯಾಣದ ಜೆಜೆಪಿ ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲ ಈ ಕರಡನ್ನು ಸಿದ್ಧಗೊಳಿಸಿದ್ದಾರೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಖಾಸಗಿ ಉದ್ಯೋಗದಲ್ಲಿ ಶೇ 75ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಅವರು ಜನರಿಗೆ ನೀಡಿದ್ದರು.
ಹೊಸದಾಗಿ ಸ್ಥಾಪನೆಗೊಂಡ ಜೆಜೆಪಿ ಪಕ್ಷ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಬಿಜೆಪಿ ಜೊತೆ ಪಕ್ಷ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿತು.
ಹರ್ಯಾಣದ ಮುಖ್ಯಮಂತ್ರಿಯಾಗಿ ಮನೋಹರ್ ಲಾಕ್ ಖಟ್ಟರ್ ಅಧಿಕಾರ ಸ್ವೀಕಾರ ಮಾಡಿದರು. ದುಷ್ಯಂತ್ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಜನರಿಗೆ ನೀಡಿದ ಭರವಸೆಯಂತೆ ಅವರು ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತರುವ ಪ್ರಕ್ರಿಯೆ ಆರಂಭಿಸಿದ್ದಾರೆ.
ದುಷ್ಯಂತ್ ಚೌಟಾಲ ಮಂಡನೆ ಮಾಡಿರುವ ಸುಗ್ರೀವಾಜ್ಞೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಂಪುಟದ ಅನುಮೋದನೆ ಸಿಕ್ಕಿದರೆ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ.