74th Republic Day: ದೇಶಾದ್ಯಂತ ಗಣರಾಜ್ಯೋತ್ಸವ, ದೇಶಭಕ್ತಿ ಮೆರೆದ ರಾಜ್ಯಗಳು
ಭಾರತ ದೇಶಾದ್ಯಂತ ಇಂದು ಗುರುವಾರ 74 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇಂತಹ ಸಡಗರದ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಪ್ರಮುಖ ರಾಜ್ಯಗಳಲ್ಲಿ ಆಚರಣೆ ಹೇಗೆ ನಡೆಯಿತು, ಧ್ವಜಾರೋಹಣ ನೆರವೇರಿಸಿದ್ದರ ಸಂಪೂರ್ಣ ಮಾಹಿ
ನವದೆಹಲಿ, ಜನವರಿ 26: ಭಾರತ ದೇಶಾದ್ಯಂತ ಇಂದು ಗುರುವಾರ 74 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇಂತಹ ಸಡಗರದ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ರಾಜಕಾರಣಿಗಳು, ಸ್ಥಳಿಯ ನಾಯಕರು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಶುಭಾಶಯ ತಿಳಿಸಿದರು. ಧ್ವಜಾರೋಹಣ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದರು.
ನದೆಹಲಿಯ ರಾಜಪಥದಲ್ಲಿ ಬೃಹತ್ ಸಮಾರಂಭ, ಪರೇಡ್ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಗಣತಂತ್ರ ದಿನ ಆಚರಣೆ, ಧ್ವಜಾರೋಹಣ ಮಾಡಿದ್ದು ಯಾರು ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕದದಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಬರಮಾಡಿಕೊಂಡರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.
ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಗಳಾ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್ನಲ್ಲಿರುವ ತಮ್ಮ ನಿವಾಸದ ಮುಂದೆ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಾರಿಸಿದರು. ಅದೇ ರೀತಿ ಗುಜರಾತ್ ರಾಜ್ಯದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಗಣರಾಜ್ಯೋತ್ಸವದಂದು ಬೊಟಾಡ್ನಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಹ ಪಾಲ್ಗೊಂಡು ದೇಶ ಉದ್ದೇಶಿಸಿ ಮಾತನಾಡಿದರು.
ಹೈದರಾಬಾದ್ನ ರಾಜಭವನದಲ್ಲಿ ಗಣತಂತ್ರ ದಿನ
ನೆರೆ ರಾಜ್ಯ ತೆಲಂಗಾಣದಲ್ಲಿ ರಾಜ್ಯಪಾಲರಾದ ಡಾ ತಮಿಳಿಸೈ ಸೌಂದರರಾಜನ್ ಹೈದರಾಬಾದ್ ನಗರದಲ್ಲಿ ಅದ್ಧೂರಿ ಗಣರಾಜ್ಯೋತ್ಸವ ಸಮಾರಂಭದಂಗವಾಗಿ ರಾಷ್ಟ್ರಧ್ವಜ ಹಾರಿಸಿದರು. ರಾಷ್ಟ್ರಗೀತೆ ಮೊಳಗಿತು. ಈ ವೇಳೆ ಸಮಾರಂಭಕ್ಕೆ ಬರಬೇಕಿದ್ದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅನ್ಯ ಕಾರಣಗಳಿಂದ ಹೈದರಾಬಾದ್ನ ರಾಜಭವನದಲ್ಲಿ ನಡೆದ ಆಚರಣೆಗೆ ಗೈರಾದರು.
ಇನ್ನೂ ಪಾಟ್ನಾದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಾಲ್ಗೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರು ತ್ರಿವರ್ಣ ಧ್ವಜ ಹಾರಿಸಿದರು. ಇನ್ನೂ ಕರ್ನಾಟಕದ ಗಡಿ ರಾಜ್ಯ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಮುಂಬೈನ ತಮ್ಮ ಅಧಿಕೃತ ನಿವಾಸದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ, ಗಣರಾಜ್ಯೋತ್ಸವದಂದು ಐಜ್ವಾಲ್ನಲ್ಲಿರುವ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಝೋರಂತಂಗ ಅವರು ತಿರಂಗ ಹಾರಿಸಿದರು. ಇಲ್ಲಿ ಕಾರ್ಯಕ್ರಮ ವೇದಿಕೆ ಮುಂಭಾಗ ಜನರ ದಂಡೆ ಸೇರಿತ್ತು.
ನಾಗಪುರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. RSS ನ ಇಲ್ಲಿನ ಸಹಸಂಘಚಾಲಕ್ ಶ್ರೀಧರ ಗಾಡ್ಗೆ ತ್ರಿವರ್ಣ ಧ್ವಜಾರೋಹಣ ಮಾಡಿದರು.
ಒಡಿಶಾ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಭುವನೇಶ್ವರದಲ್ಲಿ ಗಣರಾಜ್ಯೋತ್ಸವ ಪರೇಡ್ನಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತಿರರು ಪಾಲ್ಗೊಂಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಗಳಿಗೆ ಈ ದಿವಸ ಭೇಟಿ ನೀಡಿದರು.
ಈ ಮೂಲಕ ಸಮಾರಂಭ ಆರಂಭಿಸಿ ದೇಶಕ್ಕಾಗಿ ಪ್ರಾಣಬಿಟ್ಟ ವೀರಯೋಧರಿಗೆ ಗೌರವ ಸಮರ್ಪಿಸಿದರು. ಇದಾದ ನಂತರ ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಮೆರವಣಿಗೆ ವೀಕ್ಷಿಸಲು ಕರ್ತವ್ಯ ಪಥದಲ್ಲಿ ವಂದನಾ ವೇದಿಕೆಯತ್ತ ತೆರಳಿದರು.
ದೆಹಲಿ ಕರ್ತವ್ಯ ಪಥದಲ್ಲಿ ಈ ಸಲದ ಗಣರಾಜ್ಯೋತ್ಸವವು ದೇಶದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಇತರ ಹಲವು ವಿಶಿಷ್ಟ ಶಕ್ತಿ ಸಾಮರ್ಥ್ಯದ ಉಪಕ್ರಮಕ್ಕೆ ಸಾಕ್ಷಿಯಾಗಲಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸಲಾದ ಕಳೆದ ವರ್ಷದ ಆಚರಣೆಗಳನ್ನು ನಿರ್ಮಿಸಿ ಪ್ರದರ್ಶಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.