ಗಣರಾಜ್ಯೋತ್ಸವ 2021: ಯಾವ್ಯಾವ ಕಾರಣಕ್ಕೆ ಈ ಬಾರಿ ಗಣರಾಜ್ಯೋತ್ಸವ ಭಿನ್ನ ಎನಿಸಿಕೊಳ್ಳುತ್ತಿದೆ?
ನವದೆಹಲಿ, ಜನವರಿ 25: ವಿಶ್ವದೆಲ್ಲೆಡೆ ಕೊರೊನಾ ಸೋಂಕು ಪತ್ತೆಯಾಗಿ ಒಂದು ವರ್ಷ ಕಳೆದಿದೆ. ಆದರೆ ಸೋಂಕಿನ ಆತಂಕ ಮಾತ್ರ ಸಂಪೂರ್ಣ ದೂರವಾಗಿಲ್ಲ. ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತಗ್ಗುತ್ತಿದ್ದರೂ ಎಚ್ಚರಿಕೆ ಮರೆಯುವಂತಿಲ್ಲ. ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಮೆರವಣಿಗೆ ಮೇಲೆ ಕೇಂದ್ರ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದೆ.
ಕೆಲವು ನಿರ್ಬಂಧಗಳ ಕಾರಣದಿಂದಾಗಿ 72ನೇ ಗಣರಾಜ್ಯೋತ್ಸವ ಭಿನ್ನ, ಹಾಗೆಯೇ ವಿಶೇಷವೂ ಎನಿಸಿಕೊಳ್ಳುತ್ತಿದೆ. ಪ್ರತಿ ಬಾರಿ ಲಕ್ಷಾಂತರ ಮಂದಿ ಗಣರಾಜ್ಯೋತ್ಸವಕ್ಕೆ ಸೇರುತ್ತಿದ್ದು, ಈ ಬಾರಿ ಕೊರೊನಾ ಕಾರಣದಿಂದಾಗಿ ವೀಕ್ಷಕರ ಸಂಖ್ಯೆಯನ್ನು ತಗ್ಗಿಸಲಾಗಿದೆ. ಗಣರಾಜ್ಯೋತ್ಸವ ಆಚರಣೆಯಲ್ಲಿ ಇನ್ನೂ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಅವುಗಳೇನು? ಮುಂದೆ ಓದಿ...
ಗಣರಾಜ್ಯೋತ್ಸವ 2021 ಪರೇಡ್ ಪಥ ಯಾವುದು?
ಅಧೀಕೃತವಾಗಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ನವದೆಹಲಿಯ ರಾಜಪಥದಲ್ಲಿ ನಡೆಸಲಾಗುತ್ತದೆ. ಮೆರವಣಿಗೆ ರಾಷ್ಟ್ರಪತಿ ಭವನದಿಂದ ಆರಂಭಗೊಂಡು ಇಂಡಿಯಾ ಗೇಟ್ ವರೆಗೂ ಸಾಗುತ್ತದೆ. ರಾಜಪಥ ವಿಜಯ ಚೌಕ್, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್ ಪ್ರಿನ್ಸೆಸ್ ಪ್ಯಾಲಸ್, ತಿಲಕ್ ಮಾರ್ಗದಿಂದ ಅಂತಿಮವಾಗಿ ಇಂಡಿಯಾ ಗೇಟ್ ತಲುಪುತ್ತದೆ.
ಮೆರವಣಿಗೆಯಲ್ಲಿ ಭಾರತೀಯ ಸೇನಾ ತುಕಡಿಗಳ ಸಂಖ್ಯೆಯನ್ನೂ ಕಡಿಮೆಗೊಳಿಸಲಾಗಿದೆ.
ಗಣರಾಜ್ಯೋತ್ಸವ ಪರೇಡ್ನಲ್ಲಿ ಇದೇ ಮೊದಲ ಬಾರಿ ಲಡಾಖ್ ಸ್ತಬ್ಧಚಿತ್ರ
ಧ್ವಜಾರೋಹಣ ಹಾಗೂ ಮೆರವಣಿಗೆ ಸಮಯ
ಜನವರಿ 26ರ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರುತ್ತದೆ. ಮೆರವಣಿಗೆಯು 9 ಗಂಟೆಗೆ ಆರಂಭಗೊಂಡು 11.30ಕ್ಕೆ ಕೊನೆಗೊಳ್ಳುತ್ತದೆ. ಈ ಬಾರಿ ಕೆಲವು ವ್ಯತ್ಯಾಸಗಳನ್ನು ಮಾಡಿಕೊಂಡಿರುವುದರಿಂದ ಮೆರವಣಿಗೆ ಅಂತಿಮವಾಗುವ ಅವಧಿಯಲ್ಲಿ ಬದಲಾವಣೆಯಾಗಬಹುದು.
ಮೆರವಣಿಗೆಯನ್ನು ಎಲ್ಲಿ ಹಾಗೂ ಹೇಗೆ ನೋಡಬಹುದು?
ಡಿಡಿ ನ್ಯೂಸ್ ನಲ್ಲಿ ಗಣರಾಜ್ಯೋತ್ಸವ ಮೆರವಣಿಗೆಯ ಲೈವ್ ಕಾರ್ಯಕ್ರಮವನ್ನು ನೋಡಬಹುದು. ದೂರದರ್ಶನದ ಯೂಟ್ಯೂಬ್ ನಲ್ಲಿಯೂ ಲೈವ್ ಸ್ಟ್ರೀಂ ಮೂಲಕ ವೀಕ್ಷಿಸಬಹುದು. ಸಾಮಾನ್ಯವಾಗಿ ಭಾರತದ ಎಲ್ಲಾ ನ್ಯೂಸ್ ಚಾನೆಲ್ ಗಳು ಗಣರಾಜ್ಯೋತ್ಸವ ಮೆರವಣಿಗೆಯ ಲೈವ್ ಮಾಡುತ್ತವೆ.
ದೆಹಲಿ: ಗಣರಾಜ್ಯೋತ್ಸವ ಪೆರೇಡ್ನಲ್ಲಿ ಪ್ರಧಾನಿ ಜೊತೆ ವಿದ್ಯಾರ್ಥಿಗಳು!
50 ವರ್ಷಗಳಿಂದ ಮೊದಲ ಬಾರಿ ಮುಖ್ಯ ಅತಿಥಿಯಿಲ್ಲದ ಗಣರಾಜ್ಯೋತ್ಸವ
ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಯಾರೂ ಭಾಗವಹಿಸುತ್ತಿಲ್ಲ. ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿ ಮುಖ್ಯ ಅತಿಥಿಗಳಿಲ್ಲದೇ ಮೆರವಣಿಗೆ ನಡೆಯುತ್ತಿದೆ. ಮೊದಲು ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರನ್ನು ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಆದರೆ ಬ್ರಿಟನ್ ನಲ್ಲಿ ಹೊಸ ಕೊರೊನಾ ಸೋಂಕಿನ ರೂಪಾಂತರ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಅವರ ಭೇಟಿಯನ್ನು ರದ್ದುಗೊಳಿಸಲಾಯಿತು. ಇದಕ್ಕೂ ಮುನ್ನ ಭಾರತದಲ್ಲಿ 1952, 1953 ಹಾಗೂ 1966ರಲ್ಲಿ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳು ಇರಲಿಲ್ಲ.
ಎಷ್ಟು ಜನರಿಗೆ ಪರೇಡ್ ವೀಕ್ಷಿಸಲು ಅನುಮತಿ?
ಈ ಬಾರಿ 25,000 ಮಂದಿಗೆ ಮಾತ್ರ ಪರೇಡ್ ವೀಕ್ಷಿಸಲು ಅನುಮತಿ ನೀಡಲಾಗಿದೆ. ಕಳೆದ ಬಾರಿ 1,50,000 ಮಂದಿಗೆ ಅವಕಾಶ ನೀಡಲಾಗಿತ್ತು. ಮಾಧ್ಯಮ ಪ್ರತಿನಿಧಿಗಳ ಸಂಖ್ಯೆಯನ್ನೂ 300ರಿಂದ 200 ಮಂದಿಗೆ ಅವಕಾಶ ನೀಡಲಾಗಿದೆ. 15 ವರ್ಷದೊಳಗಿನ ಮಕ್ಕಳಿಗೆ ಅವಕಾಶ ನೀಡಲಾಗಿಲ್ಲ.
ಪರೇಡ್ ನಲ್ಲಿ ಈ ಬಾರಿ ಏನೇನು ಪ್ರದರ್ಶನವಿರಲಿದೆ?
ಈಚೆಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ರಫೇಲ್ ಫೈಟರ್ ಜೆಟ್ ಮೊದಲ ಬಾರಿ ಪರೇಡ್ ನಲ್ಲಿ ಭಾಗವಹಿಸಲಿದೆ. ಈ ಪರೇಡ್ ನಲ್ಲಿ ಮೊದಲ ಮಹಿಳಾ ಫೈಟರ್ ಪೈಲಟ್ ಭಾವನಾ ಕಾಂತ್ ಭಾಗವಹಿಸುತ್ತಿರುವುದು ವಿಶೇಷವೆನಿಸಿದೆ. ಒಂಬತ್ತು ಸಾಕ್ಷ್ಯಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಮೋಟಾರ್ ಸೈಕಲ್ ಸ್ಟಂಟ್ ಇಲ್ಲ
ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೋಟಾರ್ ಸೈಕಲ್ ಸ್ಟಂಟ್ ಅನ್ನು ಈ ಬಾರಿ ರದ್ದುಗೊಳಿಸಲಾಗಿದೆ. ವೀಕ್ಷಕರ ಸಂಖ್ಯೆಯನ್ನೂ 1.5ಲಕ್ಷದಿಂದ 25 ಸಾವಿರಕ್ಕೆ ಇಳಿಸಲಾಗಿದೆ. ಕೊರೊನಾ ಸೋಂಕಿನ ಸುರಕ್ಷತಾ ನೀತಿಗಳ ಕಾರಣದಿಂದಾಗಿ ಮೋಟಾರ್ ಸೈಕಲ್ ಸ್ಟಂಟ್ ಗೆ ಬ್ರೇಕ್ ಹಾಕಲಾಗಿದೆ.
ಶೌರ್ಯ ಪ್ರಶಸ್ತಿ ವಿಜೇತರ ಮೆರವಣಿಗೆಯೂ ಇಲ್ಲ
ಶೌರ್ಯ ಪ್ರಶಸ್ತಿ ಪುರಸ್ಕೃತರ ಮೆರವಣಿಗೆಯನ್ನೂ ಈ ಬಾರಿ ನಡೆಸಲಾಗುತ್ತಿಲ್ಲ. ಸಾಮಾಜಿಕ ಅಂತರ ಕಾಯ್ಸುಕೊಳ್ಳುವ ನಿಟ್ಟಿನಲ್ಲಿ ಈ ಮೆರವಣಿಗೆಯನ್ನೂ ನಡೆಸದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.