ಬೇನಾಮಿ ವ್ಯವಹಾರ ಕಂಡುಬಂದರೆ 7 ವರ್ಷದವರೆಗೆ ಜೈಲು
ನವದೆಹಲಿ, ನವೆಂಬರ್ 21: ಲೆಕ್ಕ ನೀಡದ ಹಣವನ್ನು ಬೇರೆಯವರ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದವರಿಗೆ ಚಾಟಿ ಬೀಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಬೇನಾಮಿ ವ್ಯವಹಾರ ಕಾಯ್ದೆ ಅಡಿ ದಂಡ ವಿಧಿಸಲು ಹಾಗೂ ಪ್ರಕರಣ ದಾಖಲಿಸಲು ಮುಂದಾಗಿದೆ. ತಪ್ಪು ರುಜುವಾತು ಆದಲ್ಲಿ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಆಗುತ್ತದೆ.
ಆದಾಯ ತೆರಿಗೆ ಇಲಾಖೆ ಮಾಹಿತಿ ಪ್ರಕಾರ ಲೆಕ್ಕಕ್ಕೆ ನೀಡದ ಆದಾಯ ಇನ್ನೂರು ಕೋಟಿ ರುಪಾಯಿ ಪತ್ತೆಯಾಗಿದೆ. ಹಳೇ 500, 1000 ನೋಟು ರದ್ದು ಆದ ನಂತರ ವಿವಿಧೆಡೆ ದಾಳಿ ನಡೆಸಿ ಐವತ್ತು ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ವಿವಿಧ ರಾಜ್ಯಗಳಲ್ಲಿ ಇಲಾಖೆಯು ವಶಪಡಿಸಿಕೊಂಡಿದೆ.[ಬೆಂಗಳೂರು, ಮಂಗಳೂರು, ಗೋವಾದಲ್ಲಿ ಐಟಿ ದಾಳಿ]
ಈ ರೀತಿ ಅನುಮಾನಾಸ್ಪದವಾದ ವ್ಯವಹಾರಗಳಲ್ಲಿ ತಪ್ಪು ಸಾಬೀತಾದಲ್ಲಿ ಬೇನಾಮಿ ವ್ಯವಹಾರ ಕಾಯ್ದೆ 1988ರ ಅನ್ವಯ ಶಿಕ್ಷೆ ಆಗುತ್ತದೆ. ಇದು ಸ್ಥಿರಾಸ್ತಿ-ಚರಾಸ್ತಿ ಎರಡಕ್ಕೂ ಅನ್ವಯಿಸುತ್ತದೆ. ಈ ಕಾಯ್ದೆ ಈ ವರ್ಷದ ನವೆಂಬರ್ 1ರಿಂದ ಅಳವಡಿಸಿಕೊಳ್ಳಲಾಗಿದೆ. ಈ ಪ್ರಕಾರ ಹಣವನ್ನು ಜಮೆ ಮಾಡಿದವರು ಹಾಗೂ ಯಾರಿಗೆ ಹಣ ಸೇರಿರುತ್ತದೋ ಇಬ್ಬರೂ ಶಿಕ್ಷೆಗೆ ಒಳಗಾಗುತ್ತಾರೆ.[ತೆರಿಗೆ ತಪ್ಪಿಸಿದ್ದಲ್ಲಿ ಸರಿಪಡಿಸಿಕೊಳ್ಳಲು ಇಲ್ಲಿದೆ ದಾರಿ]
ಯಾವುದೇ ವ್ಯಕ್ತಿ 500, 1000 ರುಪಾಯಿ ನೋಟನ್ನು ಬೇರೆಯವರ ಖಾತೆಗೆ ಜಮೆ ಮಾಡಿ, ಅ ನಂತರ ಹಣವನ್ನು ವಾಪಸ್ ಪಡೆದರೆ, ಇಂಥದ್ದನ್ನು ಬೇನಾಮಿ ವ್ಯವಹಾರ ಅಂತ ಪರಿಗಣಿಸಲಾಗುತ್ತದೆ. ಯಾರು ತಮ್ಮ ಹಣವನ್ನು ಬ್ಯಾಂಕ್ ಗೆ ಹಾಕಲು ನೀಡುತ್ತಾರೋ ಅಂಥವರನ್ನು ಅನುಕೂಲ ಪಡೆದ ಮಾಲೀಕ ಅಂತಲೂ ಅದನ್ನು ತನ್ನ ಖಾತೆಗೆ ಹಾಕಿಕೊಳ್ಳುವ ವ್ಯಕ್ತಿಯನ್ನು ಬೇನಾಮಿ ಅಂತ ಗುರುತಿಸುತ್ತೇವೆ' ಎಮ್ದು ಅಧಿಕಾರಿಗಳು ವಿವರಿಸಿದ್ದಾರೆ.
ಅನುಕೂಲ ಪಡೆಯುವ ವ್ಯಕ್ತಿ, ಬೇನಾಮಿ ವ್ಯಕ್ತಿ ಹಾಗೂ ಈ ಕೃತ್ಯಕ್ಕೆ ಪ್ರಚೋದನೆ ನೀಡಿದವರಿಗೆ ಒಂದರಿಂದ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ. ನೋಟು ರದ್ದು ನಂತರ ಬ್ಯಾಂಕ್ ನಲ್ಲಿ ಜಮೆ ಮಾಡುವ ಬೇನಾಮಿ ಹಣವನ್ನು ವಶಕ್ಕೆ ಪಡೆದು, ಆರೋಪಿಗಳಿಗೆ ಆ ಬೇನಾಮಿ ಆಸ್ತಿ ಮೊತ್ತದ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗುವುದು.[ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!]
ಆದಾಯ ತೆರಿಗೆ ಇಲಾಖೆಯು ಕಪ್ಪುಹಣ ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ದತ್ತಿ ಹಾಗೂ ಧಾರ್ಮಿಕ ಸಂಸ್ಥೆಗಳ ಬ್ಯಾಂಕ್ ಖಾತೆಗಳಲ್ಲಿರುವ ಹಣ, ಜಮೆ ಮಾಡಿರುವ ನಗದು ವಿವರಗಳನ್ನು ಸಲ್ಲಿಸುವಂತೆ ಈಗಾಗಲೇ ನೋಟಿಸ್ ಕೂಡ ಜಾರಿ ಮಾಡಲಾಗಿದೆ