ರಾಂಚಿಯಲ್ಲಿ ಬುರಾರಿ ಮಾದರಿ ಸಾಮೂಹಿಕ ಆತ್ಮಹತ್ಯೆ: 7 ಶವ ಪತ್ತೆ
ರಾಂಚಿ, ಜುಲೈ 30: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆಯ ಮಾದರಿಯಲ್ಲಿಯೇ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿಯೂ 7 ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಂಚಿಯ ಕಾಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಕುಟುಂಬವೊಂದರ ಏಳು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಲ್ಲಿ ಇಬ್ಬರು ಶಿಶುಗಳೂ ಸೇರಿದ್ದಾರೆ.
ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ
ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಆತ್ಮಹತ್ಯೆ ಪ್ರಕರಣ ಎನ್ನಲಾಗಿದೆಯಾದರೂ, ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಈ ತಿಂಗಳ ಆರಂಭದಲ್ಲಿ ಜಾರ್ಖಂಡ್ ನ ಹಜಾರಿಬಾಂಗ್ ಎಂಬಲ್ಲಿಯೂ ಇಂಥದೇ ಘಟನೆ ನಡೆದಿತ್ತು. ಒಂದೇ ಕುಟುಂಬದ ಆರು ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಇವರೆಲ್ಲರ ಸಾವಿಗೆ ಆರ್ಥಿಕ ಒತ್ತಡವೇ ಕಾರಣ ಎನ್ನಲಾಗಿತ್ತು.
ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ
ದೆಹಲಿಯ ಬುರಾರಿ ಎಂಬಲ್ಲಿ ಜುಲೈ 1 ರಂದು ನಡೆದ 11 ಜನರ ಆತ್ಮಹತ್ಯೆ ಪ್ರಕರಣ ಇಡೀ ದೇಶವನ್ನೂ ಬೆಚ್ಚಿ ಬೀಳಿಸಿತ್ತು. ಈ ಆತ್ಮಹತ್ಯೆಗೆ ಮಾನಸಿಕ ಸಮಸ್ಯೆಯೇ ಕಾರಣ ಎನ್ನಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದೆ.