ಪ್ರಬಲ ಭೂಕಂಪನ: ಕಂಗಾಲಾಗಿ ಮನೆಯಿಂದ ಹೊರಬಂದ ಜನರು
ನವದೆಹಲಿ, ಫೆಬ್ರವರಿ 12: ತಜಕಿಸ್ತಾನದಲ್ಲಿ ರಿಕ್ಟರ್ ಮಾಪನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಉತ್ತರ ಭಾರತ ಮತ್ತು ದೆಹಲಿಯ ಅನೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಈ ಭೂಕಂಪನದ ಕೇಂದ್ರಬಿಂದು ತಜಕಿಸ್ತಾನ ಎಂದು ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಶುಕ್ರವಾರ ರಾತ್ರಿ 10.30ರ ಸುಮಾರಿಗೆ 74 ಕಿಮೀಯಷ್ಟು ಆಳದಲ್ಲಿ ಭೂಕಂಪನ ಉಂಟಾಗಿದೆ. ಇದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಪ್ರಮಾಣದಲ್ಲಿ ಭೂಮಿ ನಡುಗಿದೆ. ಪಂಜಾಬ್, ಹರ್ಯಾಣ, ಹಿಮಾಚಲಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಭೂಕಂಪನದ ತೀವ್ರತೆ ಜೋರಾಗಿತ್ತು.
ನೆರೆಯ ಪಾಕಿಸ್ತಾನದಲ್ಲಿ ಕೂಡ ಭೂಮಿ ಕಂಪಿಸಿದ ಅನುಭವಗಳಾಗಿದೆ ಎಂಬ ವರದಿ ಬಂದಿದೆ. ಜಮ್ಮು, ಶ್ರೀನಗರ, ದೆಹಲಿ-ಎನ್ಸಿಆರ್ ಪ್ರದೇಶಗಳಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಧಾವಿಸುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ದೆಹಲಿಯಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಯಾವುದೇ ಆಸ್ತಿಪಾಸ್ತಿ ಹಾಗೂ ಜೀವಹಾನಿಯಾದ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ.
ಅಮೃತಸರ ಹಾಗೂ ಪಂಜಾಬಿನ ಇತರೆ ಭಾಗಗಳಲ್ಲಿ ಸಹ ಭೂಕಂಪನವಾಗಿದೆ. ಯಾವುದೇ ಹಾನಿಯಾದ ವರದಿಯಾಗಿಲ್ಲ. ಪರಿಸ್ಥಿತಿ ಬಗ್ಗೆ ನಿಗಾ ವಹಿಸುವಂತೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
An earthquake originated on 12-02-2021 at 22:02 PST
— Now Only Smash (@IamBackCK) February 12, 2021
Magnitude : 6.4
Depth: 80 Km
Lat: 38.12 N
Long: 73.31 E
Epicenter : Tajikistan
PMD, Islamabad#زلزلہ pic.twitter.com/hplkNaGwz6
'2005ರ ಭೂಕಂಪನದ ಬಳಿಕ ಇದುವರೆಗೂ ಶ್ರೀನಗರದಲ್ಲಿ ಇಷ್ಟು ಕೆಟ್ಟ ನಡುಕ ಉಂಟಾಗಿರಲಿಲ್ಲ. ನಾನು ಬ್ಲಾಂಕೆಟ್ ಎದ್ದುಕೊಂಡು ಓಡಿದೆ. ನನ್ನ ಫೋನ್ ಕೂಡ ತೆಗೆದುಕೊಳ್ಳಲು ನೆನಪಾಗಲಿಲ್ಲ. ಈ ಭೂಮಿ ಗಡಗಡ ನಡುಗುವಾಗ ಟ್ವೀಟ್ ಮಾಡಲೂ ಆಗಲಿಲ್ಲ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.